ಬೆಂಗಳೂರು: ಸಚಿವ ವಿ.ಎಸ್.ಆಚಾರ್ಯ ಅವರ ನಿಧನದ ಹಿನ್ನೆಲೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ವಕೀಲರ ಸಂಘಗಳಿಗೆ ಜೆರಾಕ್ಸ್ ಯಂತ್ರ ವಿತರಿಸುವ ಸಮಾರಂಭವನ್ನು ರದ್ದುಪಡಿಸಲಾಯಿತು.
ಮಧ್ಯಾಹ್ನ 12.30ಕ್ಕೆ ಕಾರ್ಯಕ್ರಮ ಆರಂಭ ವಾಗಬೇಕಿತ್ತು. ಆದರೆ, ಮುಖ್ಯಮಂತ್ರಿ ಅಲ್ಲಿಗೆ ಬರುವುದು ಸ್ವಲ್ಪ ತಡವಾಯಿತು. ಕಾರ್ಯಕ್ರಮಕ್ಕೆ ಹೊರಡಬೇಕೆಂದು ಅವರು ತಮ್ಮ ಕಚೇರಿಯಿಂದ ಹೊರ ಬಂದ ತಕ್ಷಣ ಆಚಾರ್ಯ ಅವರ ಸಾವಿನ ಸುದ್ದಿ ಬಂತು. ಇದರಿಂದ ಒಂದು ಕ್ಷಣ ವಿಚಲಿತರಾದ ಅವರು ತಕ್ಷಣ ಪಾರ್ಥಿವ ಶರೀರ ಇದ್ದ ಮಲ್ಲಿಗೆ ಆಸ್ಪತ್ರೆಗೆ ದೌಡಾಯಿಸಿದರು.
ಕಾನೂನು ಸಚಿವ ಎಸ್.ಸುರೇಶಕುಮಾರ್ ಅವರು ಸಮ್ಮೇಳನ ಸಭಾಂಗಣಕ್ಕೆ ತೆರಳಿ, ಆಚಾರ್ಯ ಅವರ ನಿಧನದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದರು. ಸೂಕ್ತ ದಿನಾಂಕ ನೋಡಿ ಮತ್ತೊಮ್ಮೆ ಜೆರಾಕ್ಸ್ ಯಂತ್ರ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.