ಮೈಸೂರು: ನಗರದ ಕೇಂದ್ರ ಕಾರಾಗೃಹದಲ್ಲಿ ಮಾರ್ಚ್ 10ರಂದು ನಡೆದಿದ್ದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಿವಾಲ್ವರ್ ಸರಬರಾಜು ಮಾಡಿದ್ದ ಆರೋಪಿಯನ್ನು ಮಂಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿಜಾಪುರದ ಶಿವನಗೌಡ ಶರಣಪ್ಪ ಬಿರಾದಾರ ಬಂಧಿತ. ಕೇಂದ್ರ ಕಾರಾಗೃಹದ ಕೈದಿ ಬೆತ್ತನಗೆರೆ ಶ್ರೀನಿವಾಸ ಅಲಿಯಾಸ್ ಸೀನನ ಮೇಲೆ ಮತ್ತೊಬ್ಬ ಕೈದಿ ಬಾಲಾಜಿರಾವ್ ಅಲಿಯಾಸ್ ಟಿಬೆಟ್ ಕಾರಾಗೃಹದಲ್ಲಿ ರಿವಾಲ್ವರ್ನಿಂದ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದ. ಘಟನೆಯಲ್ಲಿ ಸೀನ ಗಾಯಗೊಂಡು ನಂತರ ಗುಣಮುಖನಾದ.
ಆರೋಪಿ ಬಾಲಾಜಿರಾವ್ ನೀಡಿದ ಸುಳಿವಿನ ಮೇರೆಗೆ ಜೂ.15ರಂದು ನೆಲಮಂಗಲದ ಬಸ್ ನಿಲ್ದಾಣದ ಬಳಿ ನಿಂತಿದ್ದ ಶರಣಪ್ಪ ಬಿರಾದಾರನನ್ನು ಮಂಡಿ ಠಾಣೆ ಪೊಲೀಸರು ಬಂಧಿಸಿ ಠಾಣೆಗೆ ಕರೆತಂದರು. ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರುಪಡಿಸಿ ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂತು.
ಪ್ರಕರಣದ ಪ್ರಮುಖ ಆರೋಪಿ ವಿಜಾಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ದೇವರ ಹಿಪ್ಪರಗಿಯ ರೆಹಮಾನ್ ಮಹಮ್ಮದ್ ಹನೀಸ್, ಶರಣಪ್ಪ ಬಿರಾದಾರ್ಗೆ ರಿವಾಲ್ವರ್ ನೀಡಿದ್ದನು ಎನ್ನುವುದು ವಿಚಾರಣೆಯಿಂದ ತಿಳಿದುಬಂದಿದೆ. ಹನೀಸ್ ಜೈಲಿನಿಂದ ತಪ್ಪಿಸಿಕೊಂಡಿದ್ದಾನೆ. ಈತನ ಪತ್ತೆಗಾಗಿ ಮಂಡಿ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.