ಹುಬ್ಬಳ್ಳಿ: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ರಸ್ತೆ-ಚಿಕ್ಕಜಾಜೂರು ನಿಲ್ದಾಣಗಳ ನಡುವೆ ಜೋಡಿ ರೈಲು ಮಾರ್ಗ ನಿರ್ಮಾಣ ಕಾಮಗಾರಿಗೆ ಇದೇ 8ರಂದು ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಮೈಸೂರು ರಾಜ್ಯ ರೈಲ್ವೆಯು 1889ರಲ್ಲಿ ಬೆಂಗಳೂರು-ಅರಸೀಕೆರೆ-ಬೀರೂರು-ದಾವಣಗೆರೆ-ಹುಬ್ಬಳ್ಳಿ ನಡುವೆ ಮೀಟರ್ಗೇಜ್ ಮಾರ್ಗವನ್ನು ನಿರ್ಮಿಸಿತ್ತು. ಈ ಮಾರ್ಗ 1994-95ರಲ್ಲಿ ಬ್ರಾಡ್ಗೇಜ್ಗೆ ಪರಿವರ್ತನೆಯಾಯಿತು. ಅರಸೀಕೆರೆ-ಚಿಕ್ಕಜಾಜೂರು ನಡುವೆ ಸರಕು ಸಾಗಣೆ ಪ್ರಮಾಣ ಹೆಚ್ಚಾಗಿರುವುದರಿಂದ ರೈಲ್ವೆ ಇಲಾಖೆಯು ಹಂತ ಹಂತವಾಗಿ ಜೋಡಿ ಮಾರ್ಗ ನಿರ್ಮಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ ಎಂದು ನೈರುತ್ಯ ರೈಲ್ವೆ ವಲಯದ ಪ್ರಕಟಣೆ ತಿಳಿಸಿದೆ.
ಈ ಎರಡು ರೈಲು ನಿಲ್ದಾಣಗಳ ನಡುವಿನ 29.65 ಕಿ.ಮೀ ಕಾಮಗಾರಿಗೆ ರೂ 203.40 ಕೋಟಿ ವಿನಿಯೋಗಿಸಲಿದ್ದು ಎರಡೂವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಜುಲೈನಲ್ಲಿ ಈ ಯೋಜನೆಗೆ ಇಲಾಖೆ ಅನುಮೋದನೆ ನೀಡಿದೆ. ಈಗಾಗಲೇ ಅರಸೀಕೆರೆ-ಅಜ್ಜಂಪುರ ನಡುವಿನ ಕಾಮಗಾರಿ ಪೂರ್ಣಗೊಂಡಿದೆ. ಅಜ್ಜಂಪುರ-ಹೊಸದುರ್ಗ ರಸ್ತೆವರೆಗಿನ ಕಾಮಗಾರಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದೆ.
ಹೊಸದುರ್ಗ ರಸ್ತೆ-ಚಿಕ್ಕಜಾಜೂರು ನಡುವಿನ ಕಾಮಗಾರಿ ಪೂರ್ಣವಾದರೆ, ಮಂಗಳೂರಿಗೆ ಅದಿರು ಮತ್ತು ಅಲ್ಲಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸಲು ಇದು ಪ್ರಮುಖ ಮಾರ್ಗವಾಗಲಿದೆ. ಈ ಯೋಜನೆಯ ಅಂಗವಾಗಿ ಹೊಸದುರ್ಗ ರಸ್ತೆ, ಚಿಕ್ಕಜಾಜೂರು, ರಾಮಗಿರಿ ಹಾಗೂ ಹಾಲಕೆರೆ ರೈಲು ನಿಲ್ದಾಣಗಳಿಗೆ ಹೊಸ ಕಟ್ಟಡಗಳು ತಲೆಎತ್ತಲಿವೆ. ಜತೆಗೆ ಪ್ರಯಾಣಿಕರು, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ 11 ಕಾವಲುರಹಿತ ಹಾಗೂ ಎರಡು ಕಾವಲುಗಾರರ ಸಹಿತ ಲೆವಲ್ ಕ್ರಾಸಿಂಗ್ಗಳು ಈ ಮಾರ್ಗದಲ್ಲಿ ಬರಲಿವೆ. ಅಲ್ಲದೇ, ಚಿಕ್ಕಜಾಜೂರಿನಲ್ಲಿ ಸೌರಶಕ್ತಿ ಮತ್ತು ಪವನ ವಿದ್ಯುತ್ ಘಟಕ ಅಳವಡಿಸುವ ಯೋಜನೆ ಇದೆ ಎಂದು ಪ್ರಕಟಣೆ ತಿಳಿಸಿದೆ.
ಶಂಕುಸ್ಥಾಪನೆ ಸಮಾರಂಭ ಹೊಸದುರ್ಗ ತಾಲ್ಲೂಕಿನ ಮಲ್ಲಪ್ಪನಹಳ್ಳಿಯ ಸಿದ್ಧರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದೆ.