ಕುಶಾಲನಗರ: ಚೀನಾ ಆಕ್ರಮಿತ ಟಿಬೆಟ್ ದೇಶದಿಂದ ಹೊರಬಂದು ಭಾರತ ಸೇರಿದಂತೆ ವಿಶ್ವದ ವಿವಿಧ ದೇಶಗಳಲ್ಲಿ ನೆಲೆಸಿರುವ ಟಿಬೆಟನ್ನರು ತಾವು ಸ್ವತಃ ನಡೆಸುತ್ತಿರುವ ಟಿಬೆಟನ್ ಆಂತರಿಕ ಸರ್ಕಾರದ ಮುಂದಿನ ಐದು ವರ್ಷದ ಅವಧಿಗೆ ಪ್ರಧಾನ ಮಂತ್ರಿ ಮತ್ತು ಸಂಸತ್ ಸದಸ್ಯರ ಆಯ್ಕೆಗಾಗಿ ಭಾನುವಾರ ಚುನಾವಣೆ ನಡೆಯಿತು.ಇಲ್ಲಿನ ಕೊಡಗು- ಮೈಸೂರು ಗಡಿಭಾಗದ ಬೈಲುಕುಪ್ಪೆ ಟಿಬೆಟನ್ ನಿರಾಶ್ರಿತರ ಶಿಬಿರದಲ್ಲಿನ ಸೆರಾ ಜೆ ಬೌದ್ಧಮಂದಿರ ಸೇರಿದಂತೆ ಏಳು ಕಡೆ ಸ್ಥಾಪಿಸಿದ್ದ ಮತಗಟ್ಟೆಗಳಲ್ಲಿ ಸಾವಿರಾರು ಮಂದಿ ಬೌದ್ಧಬಿಕ್ಕುಗಳು, ಟಿಬೆಟನ್ ನಾಗರಿಕರು ಮತದಾನ ಮಾಡಿದರು.
ಬೆಳಿಗ್ಗೆ 8ರಿಂದ ಸಂಜೆ 5ರ ತನಕ ಶಾಂತಿಯುತವಾಗಿ ಮತದಾನ ನಡೆಯಿತು. ಹಿಮಾಚಲ ಪ್ರದೇಶದ ಧರ್ಮಶಾಲಾ ನಿರಾಶ್ರಿತರ ಶಿಬಿರ ಹೊರತುಪಡಿಸಿದರೆ ದೇಶದ ಅತಿದೊಡ್ಡ ಶಿಬಿರವೆನಿಸಿದ ಬೈಲುಕುಪ್ಪೆಯಲ್ಲಿ ಎಂಟು ಸಾವಿರಕ್ಕೂ ಹೆಚ್ಚು ಮಂದಿ ತಮ್ಮ ಹಕ್ಕನ್ನು ಚಲಾಯಿಸಿದರು. ತಮ್ಮ ಹೊಸ ವರ್ಷ ‘ಲೋಸಾರ್’ ಹಬ್ಬವನ್ನು ಆಚರಿಸಿದ ಸಂಭ್ರಮದಲ್ಲಿದ್ದ ಟಿಬೆಟನ್ನರು ಬೆಳಿಗ್ಗಿನಿಂದಲೇ ಬಹಳ ಉತ್ಸಾಹದಿಂದ ಮತಕೇಂದ್ರಕ್ಕೆ ಆಗಮಿಸಿ ತಮ್ಮ ಗುರುತಿನ ಚೀಟಿ ತೋರಿಸಿ ಮತಪತ್ರವನ್ನು ಪಡೆದು ಮತದಾನ ಮಾಡಿದರು.
ಮತಕೇಂದ್ರಗಳಲ್ಲಿ ಚುನಾವಣಾ ಕಾರ್ಯವನ್ನು ಬಹಳ ಅಚ್ಚುಕಟ್ಟಾಗಿ ವ್ಯವಸ್ಥೆಗೊಳಿಸಲಾಗಿತ್ತು. ಟಿಬೆಟನ್ ಸರ್ಕಾರದ ಪ್ರಧಾನ ಮಂತ್ರಿಗೆ ನೇರ ಆಯ್ಕೆ ನಡೆಯುತ್ತಿದ್ದು, ಈ ಸ್ಥಾನಕ್ಕೆ ಲೋಬ್ಸಂಗ್ ಸಿಂಗೆ, ಟಶಿ ಐವಾಂಡ್ಗಿ, ಟೆನ್ಜೆನ್ ನಂಗ್ಯಾಲ್ ಸ್ಪರ್ಧಾ ಕಣದಲ್ಲಿದ್ದಾರೆ. ವಿವಿಧ ಕ್ಷೇತ್ರದಡಿ ನಡೆಯುವ ಮತದಾನದಲ್ಲಿ ಇಬ್ಬರು ಮಹಿಳೆಯರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿದೆ.
ಸರ್ಕಾರದ 46 ಮಂದಿ ಸಂಸತ್ ಸದಸ್ಯರ ಪೈಕಿ ಮೂರು ಮಂದಿಯನ್ನು ಬೌದ್ಧಬಿಕ್ಕುಗಳನ್ನು ನಾಮಕರಣ ಮಾಡಿಕೊಳ್ಳಲಾಗುವುದು. ಉಳಿದ 43 ಮಂದಿಯಲ್ಲಿ ಕೇಂದ್ರ ಟಿಬೆಟನ್, ಯು - ತ್ಸಂಗ್, ಬೌದ್ಧಕೇಂದ್ರದಿಂದ ತಲಾ 10 ಮಂದಿ, ಅಮೆರಿಕಾ ಮತ್ತು ಯೂರೋಪ್ನಿಂದ ತಲಾ 2 ಮಂದಿಯಂತೆ ವಿವಿಧ ಕ್ಷೇತ್ರಗಳಿಂದ ಸಂಸತ್ ಸದಸ್ಯರನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.