ಬೆಂಗಳೂರು: ಉತ್ತಮ ಪ್ರದರ್ಶನ ನೀಡಿದ ಬಿ.ಆರ್. ನಿಕ್ಷೇಪ್ ಇಲ್ಲಿ ಕೊನೆಗೊಂಡ ಎಐಟಿಎ ಟ್ಯಾಲೆಂಟ್ ಸೀರಿಸ್ ಟೆನಿಸ್ ಟೂರ್ನಿಯಲ್ಲಿ ಮೂರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ಪ್ರಭುತ್ವ ಮೆರೆದರು.
ಬಾಲಕರ 18 ಮತ್ತು 16 ವರ್ಷ ವಯಸ್ಸಿನೊಳಗಿನವರ ಸಿಂಗಲ್ಸ್ ವಿಭಾಗದಲ್ಲಿ ಅವರು ಚಾಂಪಿಯನ್ ಆದರು. ನಿಕ್ಷೇಪ್ ಗುರುವಾರ ಬಾಲಕರ 18 ವರ್ಷ ವಯಸ್ಸಿನೊಳಗಿನವರ ಡಬಲ್ಸ್ ವಿಭಾಗದಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದರು.
ಕೆಎಸ್ಎಲ್ಟಿಎ ಕೋರ್ಟ್ನಲ್ಲಿ ಶುಕ್ರವಾರ ನಡೆದ 18 ವರ್ಷದೊಳಗಿನವರ ಫೈನಲ್ ಪಂದ್ಯದಲ್ಲಿ ನಿಕ್ಷೇಪ್ 6-2, 6-3 ರಲ್ಲಿ ಪಿ.ವಿ. ಜ್ಞಾನ ಭಾಸ್ಕರ್ ವಿರುದ್ಧ ಗೆದ್ದರೆ, 16 ವರ್ಷದೊಳಗಿನವರ ವಿಭಾಗದಲ್ಲಿ 6-1, 6-2 ರಲ್ಲಿ ಗಣೇಶ್ ಶ್ರೀನಿವಾಸನ್ ಅವರನ್ನು ಮಣಿಸಿದರು.
ಬಾಲಕಿಯರ 18 ವರ್ಷ ವಯಸ್ಸಿನೊಳಗಿನವರ ವಿಭಾಗದ ಫೈನಲ್ನಲ್ಲಿ ವಾರುಣ್ಯ ಚಂದ್ರಶೇಖರ್ 6-4, 6-3 ರಲ್ಲಿ ರಶ್ಮಿಕಾ ರಾಜನ್ ಅವರನ್ನು ಸೋಲಿಸಿದರು. 16 ವರ್ಷ ವಯಸ್ಸಿನೊಳಗಿನವರ ವಿಭಾಗದಲ್ಲಿ ಪ್ರಗತಿ ನಟರಾಜನ್ 6-3, 6-2 ರಲ್ಲಿ ರಶ್ಮಿಕಾ ವಿರುದ್ಧ ಗೆದ್ದು ಚಾಂಪಿಯನ್ ಆದರು.