ದಿನೇ ದಿನೇ ಇಂಧನ ಬೆಲೆ ಏರಿಕೆ ಆಗುತ್ತಿರುವ ಈ ಹೊತ್ತಿನಲ್ಲಿ, ವಾಹನ ಖರೀದಿ, ಓಡಾಟಕ್ಕೇನೂ ಬರವಿಲ್ಲ. ಆದರೆ ಈ ವಾಹನಗಳು ಓಡಾಡುವ ರಸ್ತೆಗಳ ಸುವ್ಯವಸ್ಥೆ ಸಲುವಾಗಿ, ಮೊದ ಮೊದಲು ಟೋಲ್ ಸಂಗ್ರಹ ರಾಷ್ಟ್ರೀಯ ಹೆದ್ದಾರಿಗಳಿಗೆ ಮಾತ್ರ ಸೀಮಿತವಾಗಿದ್ದು ಅರ್ಥಪೂರ್ಣ. ಆದರೆ ಇದೀಗ ಸರ್ಕಾರ ರಾಜ್ಯ ಹೆದ್ದಾರಿಗಳಲ್ಲೂ ಟೋಲ್ ಸಂಗ್ರಹಿಸಲು ತರಾತುರಿ ನಡೆಸುತ್ತಿರುವುದು ಮಾತ್ರ ವಿಷಾದನೀಯ.
ಇದೀಗ ರಾಜ್ಯ ಹೆದ್ದಾರಿಗಳಲ್ಲಿ ಸರ್ಕಾರ ಟೋಲ್ ಸಂಗ್ರಹಕ್ಕೆ ತೊಡಗಿರುವುದು ನಿಜಕ್ಕೂ ಬಡವರ, ಮಧ್ಯಮ ವರ್ಗದವರ ಮೇಲಿನ ಮತ್ತೊಂದು ಬರೆಯೇ ಸರಿ. ಇಂಧನ ಬೆಲೆಯ ಬಿಸಿಯಿಂದ ಹೊರಬರಲು ಹರಸಾಹಸ ಪಡುತ್ತಿರುವ ಜನರ ಮೇಲೆ ಇಂತಹ ಮತ್ತೊಂದು ಹೊರೆ ಖಂಡಿತ ಬೇಡವೇ ಬೇಡ.
ದಿನವೊಂದಕ್ಕೆ ಕನಿಷ್ಠ ಪಕ್ಷ ತಮ್ಮ ಕೆಲಸದ ನಿಮಿತ್ತ ನಗರದ ರಾಜ್ಯ ಹೆದ್ದಾರಿಗಳಲ್ಲಿ ಎರಡರಿಂದ ಮೂರು ಬಾರಿ ಗ್ರಾಮೀಣ ಭಾಗದ ಜನರು ಓಡಾಟ ನಡೆಸುತ್ತಾರೆ. ಈ ಹಿನ್ನೆಲೆಯಲ್ಲಿ ಕನಿಷ್ಠ ದರವೆಂದು ನಿಗದಿ ಪಡಿಸಿದರೂ, ಇದು ಗ್ರಾಮೀಣಭಾಗದ ವಾಹನ ಸವಾರರಿಗೆ ದುಬಾರಿಯಾಗುತ್ತದೆ.