ಬೆಂಗಳೂರು: ಈಜಿಪುರ ಜಂಕ್ಷನ್ ಬಳಿ ಅಪರಿಚಿತ ವ್ಯಕ್ತಿಗಳು ಶುಕ್ರವಾರ ರಾತ್ರಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಡಿಜಿಪಿ ಓಂಪ್ರಕಾಶ್ ಅವರ ಮಗ ಕಾರ್ತಿಕ್ ಅವರ ಕಾರನ್ನು ಅಡ್ಡಗಟ್ಟಿ ಹೆಲ್ಮೆಟ್ನಿಂದ ಹಲ್ಲೆ ನಡೆಸಿದ್ದಾರೆ.
ಅವರು ಎಚ್ಎಸ್ಆರ್ ಲೇಔಟ್ನಲ್ಲಿರುವ ಮನೆಗೆ ಹೋಗುತ್ತಿದ್ದಾಗ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಕಾರ್ತಿಕ್ ಅವರ ಕಾರು ಮಾರ್ಗಮಧ್ಯೆ ಈಜಿಪುರದ ಬಳಿ ಬೈಕ್ ಒಂದಕ್ಕೆ ತಾಗಿತ್ತು. ಆ ನಂತರ ಅವರು ಬೈಕ್ ಸವಾರರಲ್ಲಿ ಕ್ಷಮೆ ಯಾಚಿಸಿ, ಮನೆಯ ಕಡೆಗೆ ಹೋಗುತ್ತಿದ್ದರು. ಆದರೆ, ಅವರನ್ನು ಹಿಂಬಾಲಿಸಿಕೊಂಡು ಬಂದ ಬೈಕ್ ಸವಾರರು ಈಜಿಪುರ ಜಂಕ್ಷನ್ನಲ್ಲಿ ಅಡ್ಡಗಟ್ಟಿ ಮುಖಕ್ಕೆ ಹೆಲ್ಮೆಟ್ನಿಂದ ಹೊಡೆದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಮಗನ ಮೂಗಿಗೆ ಸ್ವಲ್ಪ ಗಾಯವಾಗಿದೆ. ಘಟನೆ ವೇಳೆ ಆತನಿಗೆ ಬೈಕ್ನ ನೋಂದಣಿ ಸಂಖ್ಯೆಯನ್ನು ಗುರುತು ಮಾಡಿಕೊಳ್ಳಲು ಸಾಧ್ಯವಾಗಿಲ್ಲ’ ಎಂದು ಓಂಪ್ರಕಾಶ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈ ಸಂಬಂಧ ಕೋರಮಂಗಲ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆದರೆ, ಘಟನೆ ನಡೆದಿರುವ ಸ್ಥಳವು ವಿವೇಕನಗರ ಠಾಣೆಯ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ ಪ್ರಕರಣವನ್ನು ಆ ಠಾಣೆಗೆ ವರ್ಗಾಯಿಸಲಾಗಿದೆ’ ಎಂದು ಮಡಿವಾಳ ಉಪ ವಿಭಾಗದ ಎಸಿಪಿ ಬಿ.ಎಸ್.ಶಾಂತಕುಮಾರ್ ತಿಳಿಸಿದ್ದಾರೆ.