ನವದೆಹಲಿ (ಪಿಟಿಐ): ವಿತ್ತೀಯ ಕೊರತೆ ತಗ್ಗಿಸಲು ಡೀಸೆಲ್ ದರ ನಿಯಂತ್ರಣ ಮುಕ್ತಗೊಳಿಸಿ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನೀಡಿರುವ ಸಲಹೆ ಕಾರ್ಯಗತಗೊಳಿಸಲು ರಾಜಕೀಯ ಒತ್ತಡ ಅಡ್ಡಿಯಾಗಿದೆ ಎಂದು ತೈಲ ಸಚಿವ ಎಸ್. ಜೈಪಾಲ್ ರೆಡ್ಡಿ ಹೇಳಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಇರುವ ಎಲ್ಲ ರಾಜಕೀಯ ಅಡೆತಡೆಗಳನ್ನು ಪರಿಶೀಲಿಸುತ್ತಿರುವುದಾಗಿ ಅವರು ಹೇಳಿದ್ದಾರೆ.
ಸದ್ಯಕ್ಕೆ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಆಮದು ದರಕ್ಕಿಂತಲೂ ಪ್ರತಿ ಲೀಟರ್ಗೆ ್ಙ14.57 ಕಡಿಮೆ ದರದಲ್ಲಿ ಡೀಸೆಲ್ ಮಾರಾಟ ಮಾಡುತ್ತಿವೆ. ಡೀಸೆಲ್ ದರ ನಿಯಂತ್ರಣ ಮುಕ್ತಗೊಳಿಸಿರುವುದರಿಂದ ಪ್ರತಿ ಲೀಟರ್ಗೆ ಸಹಜವಾಗಿಯೇ ್ಙ14 ತುಟ್ಟಿಯಾಗಲಿದ್ದು, ಮತ್ತೊಮ್ಮೆ ತೈಲ ಹಣದುಬ್ಬರ ಹೆಚ್ಚಲಿದೆ.
ಸರ್ಕಾರ 2010ರಲ್ಲಿ ಪೆಟ್ರೋಲ್ ದರವನ್ನು ನಿಯಂತ್ರಣಮುಕ್ತಗೊಳಿಸಿತ್ತು. ಆದರೆ, ಈಗಲೂ ಚಿಲ್ಲರೆ ಮಾರಾಟ ಕಂಪೆನಿಗಳು ಸದ್ಯ ಪ್ರತಿ ಲೀಟರ್ ಪೆಟ್ರೋಲ್ ಮಾರಾಟದ ಮೇಲೆ ್ಙ1.50 ನಷ್ಟ ಅನುಭವಿಸುತ್ತಿವೆ.
ಡೀಸೆಲ್ ದರ ಸಂಪೂರ್ಣ ನಿಯಂತ್ರಣ ಮುಕ್ತಗೊಳಿಸಿದರೆ ದೇಶದ ವಿತ್ತೀಯ ಕೊರತೆ ಗಮನಾರ್ಹವಾಗಿ ತಗ್ಗಿಸಬಹುದು ಎಂದು `ಆರ್ಬಿಐ~ ತನ್ನ ಮೂರನೇಯ ತ್ರೈಮಾಸಿಕ ಹಣಕಾಸು ಪರಾಮರ್ಶೆಯಲ್ಲಿ ಸರ್ಕಾರಕ್ಕೆ ಸಲಹೆ ಮಾಡಿದೆ. ಈ ಎಲ್ಲ ಸಂಗತಿಗಳು ಅಪೇಕ್ಷಣೀಯ. ಆದರೆ, ಈಗಾಗಲೇ ತೈಲ ಸಚಿವಾಲಯ ಡೀಸೆಲ್ ದರ ಪರಿಷ್ಕೃತಗೊಳಿಸಬೇಕೆಂದು ಹಲವು ಬಾರಿ ಉನ್ನತಾಧಿಕಾರ ಹೊಂದಿರುವ ಸಚಿವರ ಸಮಿತಿಗೆ (ಇಜಿಒಎಂ) ಮನವಿ ಮಾಡಿದೆ. ಸಮಿತಿ ಇದುವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಮುಗಿಯುವ ತನಕ ಯಾವುದೇ ಸಭೆ ನಡೆಸಲು ಕೂಡ ಸಮಿತಿ ತೀರ್ಮಾನಿಸಿಲ್ಲ ಎಂದು ರೆಡ್ಡಿ ಹೇಳಿದ್ದಾರೆ.
ಬಜೆಟ್ನಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸೀಮಾ ಸುಂಕ ಹೆಚ್ಚಿಸಲಾಗುವುದೇ ಎಂದು ಕೇಳಿದ ಪ್ರಶ್ನೆಗೆ, ಇದು ಹಣಕಾಸು ಸಚಿವಾಲಯಕ್ಕೆ ಬಿಟ್ಟ ವಿಷಯ ಎಂದರು.