ಮಂಗಳೂರು: ಲಂಡನ್ ಒಲಿಂಪಿಕ್ಸ್ ಅರ್ಹತಾ ಹಾಕಿ ಟೂರ್ನಿಯಲ್ಲಿ ಇನ್ನೂ ಒಂದಿಬ್ಬರು ಹಿರಿಯ ಆಟಗಾರರಿಗೆ ಅವಕಾಶ ಕೊಡಬೇಕಿತ್ತು. ಇಂಥ ಅತೀ ಮಹತ್ವದ ಟೂರ್ನಿಗೆ ಅನುಭವಿಗಳನ್ನು ಕೈಬಿಡಬಾರದಿತ್ತು ಎಂಬ ಅಭಿಪ್ರಾಯ ಭಾರತ ತಂಡದ ಮಾಜಿ ಅಂತರರಾಷ್ಟ್ರೀಯ ಆಟಗಾರ ಧನರಾಜ್ ಪಿಳ್ಳೆ ಅವರದ್ದು.
ಬಡಗಎಡಪದವಿನಲ್ಲಿ ಭೂತನಾಥೇಶ್ವರ ದೇವಸ್ಥಾನ ಪರಿಸರದಲ್ಲಿ ಶುಕ್ರವಾರ ಕ್ರೀಡೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಬಂದಿದ್ದ ಅವರು ತಂಡದ ಆಯ್ಕೆ, ಸಂಸ್ಥೆ ರಾಜಕೀಯ, ಅಕಾಡೆಮಿ ಮೊದಲಾದ ವಿಷಯಗಳ ಬಗ್ಗೆ ಚರ್ಚಿಸಿದರು.
`ತಂಡದಲ್ಲಿ ಅನುಭವಿಗಳಾದ ಅರ್ಜುನ್ ಹಾಲಪ್ಪ, ರಾಜ್ಪಾಲ್ ಸಿಂಗ್, ವಿಕ್ರಮ್ ಪಿಳ್ಳೆ ಇರಬೇಕಿತ್ತು. ತಂಡದಲ್ಲಿ ಯುವರಕ್ತ ಇರಬೇಕು ನಿಜ. ಅವರಿಗೆ ಮಾರ್ಗದರ್ಶನ ಮಾಡಲು ಕೆಲವರಾದರೂ ಅನುಭವಿಗಳು ಅಗತ್ಯ. ಅದೂ ನಮ್ಮ ನೆಲದಲ್ಲೇ ನಡೆಯುತ್ತಿರುವುದರಿಂದ ಅನುಭವಿ ಆಟಗಾರರು ನೆರವಿಗೆ ಬರುತ್ತಾರೆ~ ಎಂದು ಧನರಾಜ್ ಅನಿಸಿಕೆ ವ್ಯಕ್ತಪಡಿಸಿದರು.