ಉಡುಪಿ: ಸೇಂಟ್ ಮೇರಿಸ್ ದ್ವೀಪದಲ್ಲಿ ಪ್ರವಾಸೋದ್ಯಮ ಹೆಸರಿನಲ್ಲಿ ಇಂಥ ಅಹೋರಾತ್ರಿ ಉತ್ಸವಕ್ಕೆ ಇನ್ನೆಂದೂ ಅವಕಾಶ ನೀಡುವುದಿಲ್ಲ. ವಿದೇಶಿಯರನ್ನು ಇಲ್ಲಿಗೆ ಕರೆಸುವುದೂ ಇಲ್ಲ~....
ಹೀಗೆ ವಚನ ನೀಡಿದಂತೆ ನುಡಿದವರು ಉಡುಪಿ ಶಾಸಕ ರಘುಪತಿ ಭಟ್, ನಗರದಲ್ಲಿನ ತಮ್ಮ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, `ಮೊದಲ ಬಾರಿಗೆ ಇಂಥದ್ದೊಂದು ಉತ್ಸವಕ್ಕೆ ಅನುಮತಿ ನೀಡಲಾಗಿತ್ತು. ನಾವು ಧನಾತ್ಮಕವಾಗಿಯಷ್ಟೇ ಯೋಚಿಸಿದ್ದೆವು. ಉತ್ಸವದ ಬಗ್ಗೆ ನಮಗಾಗಲೀ, ಜಿಲ್ಲಾಡಳಿತಕ್ಕಾಗಲೀ ಸ್ಪಷ್ಟಕಲ್ಪನೆ ಇರಲಿಲ್ಲ. ಉತ್ಸವದಲ್ಲಿ ಅತಿರೇಕಗಳು ನಡೆಯುತ್ತಿವೆ ಎನ್ನುವ ಸುದ್ದಿ ಬಂದಾಗಲೇ ನಮಗೆ ಅರಿವಾಗಿದ್ದು~ ಎಂದು ತಪ್ಪು ಒಪ್ಪಿಕೊಂಡರು.
`ಈ ಎಲ್ಲ ಬೆಳವಣಿಗೆಗಳಿಂದಾಗಿ ವಿದೇಶಿಯರನ್ನು ಕರೆಯಿಸಿ ನಿಭಾಯಿಸುವುದು ಸಾಧ್ಯವಿಲ್ಲ ಎಂದು ನಮಗೂ ಅರ್ಥವಾಗಿದೆ. ಮುಂಬರುವ ದಿನಗಳಲ್ಲಿ ರಾಜ್ಯ, ರಾಷ್ಟ್ರ ಮತ್ತು ಸ್ಥಳೀಯ ಕಲಾವಿದರನ್ನೇ ಕರೆಯಿಸಿ ಉತ್ಸವವನ್ನು ದ್ವೀಪದಲ್ಲಿ ಆಯೋಜಿಸುತ್ತೇವೆ~ ಎಂದರು.