ಬೆಂಗಳೂರು: 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಅವಕಾಶ ಕೈತಪ್ಪಿರುವುದಕ್ಕೆ ಹಾವೇರಿ ಜಿಲ್ಲಾ ಸಾಹಿತ್ಯ ಪರಿಷತ್ತು ಅಸಮಾಧಾನ ವ್ಯಕ್ತಪಡಿಸಿದೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಹಾವೇರಿ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಮಾರುತಿ ಸಿದ್ಲಾಪುರ ಅವರು, ‘ಹಾವೇರಿಯಲ್ಲಿ ಒಮ್ಮೆಯೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿಲ್ಲ. ಮುಂದಿನ ವರ್ಷ ನಡೆಯುವ ಸಮ್ಮೇಳನದ ಆತಿಥ್ಯ ನಮಗೆ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಇತ್ತು. ಆದರೆ ಈ ಬಾರಿಯೂ ನಮಗೆ ಸಮ್ಮೇಳನ ನಡೆಸುವ ಅವಕಾಶ ಸಿಗದಿರುವುದು ನಿರಾಶೆ ತಂದಿದೆ’ ಎಂದು ಹೇಳಿದರು.
‘ವಿ.ಕೃ. ಗೋಕಾಕ್, ಪಂಚಾಕ್ಷರಿ ಗವಾಯಿ ಅವರಂತಹ ಸಾಧಕರ ನೆಲ ಹಾವೇರಿ. ಇಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ಅವಕಾಶ ಮಾಡಿಕೊಡದಿರುವುದು ಸಾಹಿತ್ಯ ದಿಗ್ಗಜರ ವೈಫಲ್ಯ. ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ಅವಕಾಶ ನೀಡುವಂತೆ ಆಗ್ರಹಿಸಿ ಎಲ್ಲ ಸಾಹಿತ್ಯ ದಿಗ್ಗಜರಿಗೆ ಪತ್ರ ಬರೆಯುತ್ತೇನೆ’ ಎಂದು ಹೇಳಿದರು.