ಭದ್ರಾವತಿ: ಹೊಸ ವರ್ಷಾಚರಣೆ ಹೆಸರಿನಲ್ಲಿ ನಡೆಯುವ ಕಾನೂನು ಬಾಹಿರ ಕೃತ್ಯಗಳಿಗೆ ಕಡಿವಾಣ ಹಾಕುವ ಕೆಲಸಕ್ಕೆ ತಾಲ್ಲೂಕು ಆಡಳಿತ ಮುಂದಾಗಬೇಕು ಎಂದು ಆಗ್ರಹಿಸುವ ಮನವಿಯನ್ನು ಹಿಂದೂ ಜನಜಾಗೃತಿ ಸಮಿತಿ ಗುರುವಾರ ತಹಶೀಲ್ದಾರ್ ಅವರಿಗೆ ಅರ್ಪಿಸಿತು.
ಹೊಸ ವರ್ಷಾಚರಣೆ ನೆಪದಲ್ಲಿ ಡಿ. 31ರ ಮಧ್ಯರಾತ್ರಿ ತೀರ್ಥಕ್ಷೇತ್ರ, ಪ್ರವಾಸಿಗರ ಸ್ಥಳ, ಐತಿಹಾಸಿಕ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿ ನಡೆಸುವ ಮೋಜು, ಮಸ್ತಿ, ಪಟಾಕಿ, ಧ್ವನಿವರ್ದಕ ಆರ್ಭಟಕ್ಕೆ ತಾಲ್ಲೂಕು ಆಡಳಿತ ಕಡಿವಾಣ ಹಾಕಲು ಮುಂದಾಗಬೇಕು ಎಂದು ಮುಖಂಡರು ಆಗ್ರಹಿಸಿದರು.
ಈ ಕುರಿತಾದ ಮನವಿಯನ್ನು ತಾಲ್ಲೂಕು ದಂಡಾಧಿಕಾರಿ ಕಚೇರಿಗೆ ಅರ್ಪಿಸಿದ ಸಮಿತಿ ಪದಾಧಿಕಾರಿಗಳು , ಇಂತಹ ಅನೈತಿಕ, ಕಾನೂನು ವಿರುದ್ಧದ ಕೃತ್ಯಗಳಿಗೆ ತಡೆ ಮಾಡದಿದ್ದಲ್ಲಿ ಸಾಮಾಜಿಕ ಅವ್ಯವಸ್ಥೆ ಹೆಚ್ಚುತ್ತದೆ ಎಂದು ಆತಂಕ ವ್ಯಕ್ತ ಮಾಡಿದರು. ಸಮಿತಿ ಮುಖಂಡರಾದ ವಿಜಯ ರೆವಣ್ಕರ್, ಆನಂದ್, ಧರ್ಮೂಜಿ, ಶಿವಕುಮಾರ್ ಹಾಜರಿದ್ದರು.
`ಪ್ರಳಯ' ಸುಳ್ಳಿನ ಕಂತೆ
ಪ್ರಳಯ ಎಂಬುದು ಒಂದು ಸುಳ್ಳಿನ ಕಂತೆ, ಇದನ್ನು ನಂಬುವ ರೀತಿಯಲ್ಲಿ ಪ್ರಚಾರ ಕಾರ್ಯ ನಡೆದಿದೆ. ಇದನ್ನು ಜನ ಧಿಕ್ಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹವ್ಯಾಸಿ ಖಗೋಳ ವೀಕ್ಷಕ ಹರೋನಹಳ್ಳಿ ಸ್ವಾಮಿ ಹೇಳಿದ್ದಾರೆ.
460 ವರ್ಷಗಳ ಹಿಂದೆ ಹುಟ್ಟಿದ ಈ ಭೂಮಿ ಶಾಶ್ವತವಲ್ಲ. ಅದು ಸಹ ಸೂರ್ಯನ ಸಾವಿನೊಂದಿಗೆ ಇಲ್ಲವಾಗುತ್ತದೆ. ಆದರೆ, ಅದಕ್ಕೆ ಇನ್ನೂ 500 ಕೋಟಿ ವರ್ಷ ಬೇಕು.
ವಿಶ್ವದಲ್ಲಿ ನಕ್ಷತ್ರ, ಗ್ರಹಗಳ ಹುಟ್ಟು ಸಾವುಗಳು ದಿನವೂ ಸಂಭವಿಸುತ್ತವೆ. ಆದರೆ ಸದ್ಯಕ್ಕೆ ಭೂಮಿಗೆ ಯಾವುದೇ ಆತಂಕವಿಲ್ಲ. ಸುನಾಮಿ, ಭೂಕಂಪಗಳು ನಿಸರ್ಗದ ಸಹಜ ಚಟುವಟಿಕೆ, ಇದರ ಕುರಿತು ಹೆಚ್ಚಿನ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.