ತರೀಕೆರೆ: ತಾಲ್ಲೂಕಿಗೆ ಸಮಗ್ರ ಮತ್ತು ಶಾಶ್ವತ ನೀರಾವರಿ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ಪಟ್ಟಣದ ಮಿನಿ ವಿಧಾನಸೌಧದ ಮುಂದೆ ನಡೆಸುತ್ತಿರುವ ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿದ್ದು, ಮಂಗಳವಾರ ಜಿಲ್ಲಾಧಿಕಾರಿ ಅಂಜನ್ ಕುಮಾರ್ ಪ್ರತಿಭಟನಾನಿರತ ರೈತರನ್ನು ಭೇಟಿ ಮಾಡಿ ಅಹವಾಲು ಆಲಿಸಿದರು.
ಭದ್ರಾ ಜಲಾಶಯ ನಿರ್ಮಾಣದ ಸಮಯ ಮತ್ತು ಭದ್ರಾ ಮೇಲ್ದಂಡೆ ಯೋಜನೆ ಈ ಎರಡರಲ್ಲಿ ತಾಲ್ಲೂಕಿನ ಜನತೆ ನೀರಾವರಿ ಸೌಲಭ್ಯ ಪಡೆಯುವಲ್ಲಿ ವಂಚಿತರಾಗಿದ್ದಾರೆ ಎಂದು ರೈತರು ಜಿಲ್ಲಾಧಿಕಾರಿಗಳಿಗೆ ವಿವರಿಸಿದರು.
ಪ್ರಸ್ತುತ ಯೋಜನೆಯಲ್ಲಿ ಚಿತ್ರದುರ್ಗಕ್ಕೆ ತುಂಗಾ ಮತ್ತು ಭದ್ರಾನದಿಯಿಂದ ಒಟ್ಟು 21.5 ಟಿಎಂಸಿ ನೀರು ಹರಿಸುವ ಉದ್ದೇಶ ಹೊಂದಲಾಗಿದೆ. ಆದರೆ ಯೋಜನೆಯಿಂದ ಅಂತರ್ಜಲ ಕ್ಷೀಣಿಸುತ್ತಿದ್ದು, ಮಳೆಯನ್ನೇ ಅವಲಂಬಿಸಿರುವ ತಾಲ್ಲೂಕಿನ ರೈತರಿಗೆ ಕನಿಷ್ಠ 2.5 ಟಿಎಂಸಿ ನೀರು ಹರಿಸಿ ನೀರಾವರಿ ಸೌಲಭ್ಯ ಕಲ್ಪಿಸುವಂತೆ ರೈತ ಮುಖಂಡ ರುದ್ರೇಗೌಡ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ರೈತರ ಅಹವಾಲನ್ನು ಆಲಿಸಿದ ಡಿ.ಸಿ. ಕಂದಾಯ ಇಲಾಖೆಯ ಕಾರ್ಯದರ್ಶಿಗಳ ಜತೆ ಚರ್ಚಿಸಿ, ಈ ಬಗ್ಗೆ ಕೂಲಂಕಷ ವರದಿ ಪರಿಶೀಲಿಸಿ ತಾಲ್ಲೂಕಿನ ಕೆರೆಗಳಿಗೆ ಈ ಯೋಜನೆಯಿಂದ ನೀರು ಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಯೋಜನೆಯಲ್ಲಿ ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ಹೆಚ್ಚುವರಿ ಪರಿಹಾರ ಒದಗಿಸಲು ಉಪಮುಖ್ಯಮಂತ್ರಿ ಮತ್ತು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಜತೆ ಚರ್ಚಿ ಸ ಲಾಗುವುದು ಮತ್ತು ರೈತರ ನ್ಯಾಯಯುತ ಬೇಡಿಕೆ ಗಳಿಗೆ ಸ್ಪಂದಿಸುವುದಾಗಿ ಹೇಳಿದ ಅವರು, ಪ್ರತಿಭಟನೆ ಕೈಬಿಡುವಂತೆ ರೈತರಲ್ಲಿ ಮನವಿ ಮಾಡಿದರು.
ತಾಲ್ಲೂಕಿನ ಕುಡ್ಲೂರು, ಶಿವಣಿ, ಅಜ್ಜಂಪುರ ಹೋಬಳಿಯ ಜನತೆ ಕುಡಿಯುವ ನೀರಿನ ಕೊರತೆ ಯಿಂದ ಪರಿತಪಿಸುವುದನ್ನು ತಪ್ಪಿಸಲು ಸೂಕ್ತಕ್ರಮ ಕೈಗೊಳ್ಳುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯ ನಿವಾಹಣಾಧಿಕಾರಿ ಅವರಿಗೆ ಸೂಚನೆ ನೀಡಲಾಗಿದೆ. ಭತ್ತದ ಬೆಳೆಗೆ ಬೆಂಬಲ ಬೆಲೆ ನೀಡಲು ಖರೀದಿ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದರು.
ಉಪ ವಿಭಾಗಾಧಿಕಾರಿ ಅನುರಾಧಾ, ತಹಶೀ ಲ್ದಾರ್ ರಂಜಿತಾ, ರೈತ ಮುಖಂಡರಾದ ಹಾಲೇಶಪ್ಪ, ಸೋಮಶೇಖರ್, ಡಿ.ಸಿ.ಸುರೇಶ್, ಕಾಂತರಾಜ್, ಸದಾ ಶಿವಯ್ಯ, ಜಗದೀಶ್, ಜಯಣ್ಣ, ಪರ ಮೇಶ್ವರಪ್ಪ, ಈಶ್ವರಪ್ಪ, ಸೋಮ್ಲೋನಾಯ್ಕ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.