ಮೈಸೂರು: `ತಾಳಿದವನು ಬಾಳಿಯಾನು' ಎಂಬಂತೆ ಕರ್ನಾಟಕ ರಣಜಿ ತಂಡದ ಹೊಸ ಪ್ರತಿಭೆ ಕೆ.ಎಲ್. ರಾಹುಲ್ ಎರಡು ವರ್ಷದಿಂದ ಕಾದಿದ್ದ ಸಮಯ ಮೈಸೂರಿನಲ್ಲಿ ಶನಿವಾರ ಕೂಡಿ ಬಂದಿದೆ.
2010ರಲ್ಲಿಯೇ ರಣಜಿಗೆ ಪದಾರ್ಪಣೆ ಮಾಡಿದ್ದ 20 ವರ್ಷದ ರಾಹುಲ್ ಇಲ್ಲಿಯವರೆಗೆ ಆಡಿದ್ದು ಕೇವಲ ಐದು ಪಂದ್ಯಗಳನ್ನು ಮಾತ್ರ. ಆದರೆ ತಾಳ್ಮೆ ಕಳೆದುಕೊಳ್ಳದೇ ಪರಿಶ್ರಮದಿಂದ ಬ್ಯಾಟಿಂಗ್ ಕೌಶಲ್ಯಕ್ಕೆ ಸಾಣೆ ಹಿಡಿದ ಅವರಿಗೆ ಗಂಗೋತ್ರಿ ಗ್ಲೇಡ್ಸ್ನಲ್ಲಿ ಚೊಚ್ಚಲ ಶತಕ ಒಲಿಯಿತು. ವಿದರ್ಭ ತಂಡದ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ತಂಡವು 52 ರನ್ಗಳಿಗೆ 2 ವಿಕೆಟ್ ಕಳೆದುಕೊಂಡ ಸಂದರ್ಭದಲ್ಲಿ ಸಿ.ಎಂ. ಗೌತಮ್ ಅವರೊಂದಿಗೆ ತಂಡಕ್ಕೆ ಆಸರೆಯಾದ ರಾಹುಲ್ ಆಟದ ಶೈಲಿ ಕ್ರಿಕೆಟ್ಪ್ರಿಯರ ಹೃದಯದಲ್ಲಿ ಬಹಳ ಕಾಲ ಉಳಿಯುವಂತದ್ದು.
ಪ್ರಸಕ್ತ ಋತುವಿನ ನಾಲ್ಕನೇ ಪಂದ್ಯದಲ್ಲಿ ಕೆ.ಬಿ. ಪವನ್ ಬದಲಿಗೆ ಸ್ಥಾನ ಪಡೆದಿದ್ದ ರಾಹುಲ್, ದೆಹಲಿ ವಿರುದ್ಧ ಅರ್ಧಶತಕ ಗಳಿಸಿದ್ದರು. 2010ರಲ್ಲಿ ಪಂಜಾಬ್ ವಿರುದ್ಧ ಪದಾರ್ಪಣೆ ಮಾಡಿದ್ದ ಪಂದ್ಯದ ಎರಡನೇ ಇನಿಂಗ್ಸ್ನಲ್ಲಿ ಅರ್ಧಶತಕ ದಾಖಲಿಸಿದ್ದ ರಾಹುಲ್, ಕೆ.ಬಿ. ಪವನ್ ಅವರೊಂದಿಗೆ ಮೊದಲ ವಿಕೆಟ್ ಜೊತೆಯಾಟದಲ್ಲಿ 125 ರನ್ ಗಳಿಸಿದ್ದರು. ಶನಿವಾರ ವಿದರ್ಭ ವಿರುದ್ಧ ಔಟಾಗದೇ 145 ರನ್ ಗಳಿಸಿರುವ ರಾಹುಲ್ ಸುದ್ದಿಗಾರರೊಂದಿಗೆ ಮಾತನಾಡಿ, `ನಿರಂತರವಾಗಿ ಅವಕಾಶ ಸಿಗದಿದ್ದರೂ ಧೈರ್ಯಗೆಡಲಿಲ್ಲ' ಎಂದರು.