ನವದೆಹಲಿ (ಐಎಎನ್ಎಸ್): 2002ರ ಗೋಧ್ರಾ ಗಲಭೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ)ಕ್ಕೆ ಬರೆದ ಪತ್ರವನ್ನು ವಿಶ್ವಸಂಸ್ಥೆ ಮಾನವ ಹಕ್ಕು ಆಯೋಗಕ್ಕೂ ಕಳುಹಿಸಿದ್ದಕ್ಕಾಗಿ ಸುಪ್ರೀಂಕೋರ್ಟ್ ಗುರುವಾರ ಸ್ವಯಂ ಸೇವಾ ಸಂಸ್ಥೆಯೊಂದರ ಸಂಚಾಲಕಿ ತೀಸ್ತಾ ಸೆಟಲ್ವಾಡ್ ಅವರನ್ನು ತರಾಟೆಗೆ ತೆಗೆದುಕೊಂಡಿತು.
ಸಿಬಿಐ ನಿರ್ದೇಶಕ ಆರ್.ಕೆ. ರಾಘವನ್ ನೇತೃತ್ವ ಎಸ್ಐಟಿ 2002ರ ಗೋಧ್ರಾ ಘಟನೆ ಮತ್ತು ನಂತರದ ಗಲಭೆ ಬಗ್ಗೆ ತನಿಖೆ ನಡೆಸುತ್ತಿದೆ. ನ್ಯಾಯಮೂರ್ತಿ ಡಿ.ಕೆ.ಜೈನ್ ನೇತೃತ್ವ ಸುಪ್ರೀಂಕೋರ್ಟ್ ವಿಶೇಷ ಪೀಠ, ‘ಹೊರರಾಷ್ಟ್ರಕ್ಕೆ ಪತ್ರಕಳುಹಿಸಿರುವುದನ್ನು ನಾವು ಮೆಚ್ಚುವುದಿಲ್ಲ ಮತ್ತು ಒಪ್ಪುವುದಿಲ್ಲ’ ಎಂದಿದೆ.
ಎಸ್ಐಟಿಗೆ ಬರೆದ ಪತ್ರಗಳನ್ನು ಮುಂದೆ ಅಂತರರಾಷ್ಟ್ರೀಯ ಹಕ್ಕುಗಳ ಸಮಿತಿಗೆ ಕಳುಹಿಸುವುದಿಲ್ಲ ಎಂದು ಸೆತಲ್ವಾಡ್ ಹೇಳಿಕೆ ನೀಡಿದ ನಂತರ ಕೋರ್ಟ್ ವಿಷಯವನ್ನು ಇತ್ಯರ್ಥಗೊಳಿಸಿತು.