ಕೋಲಾರ: ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಗಳಲ್ಲಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ತುಂಡುಗುತ್ತಿಗೆ ಮತ್ತು ಪ್ಯಾಕೇಜ್ ಟೆಂಡರ್ ಪ್ರಕ್ರಿಯೆಗಳಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದೆ. ನಿಯಮ ಉಲ್ಲಂಘಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಲವು ಸದಸ್ಯರು ಆಗ್ರಹಿಸಿದ ಘಟನೆ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಕಾಮಗಾರಿಗಳನ್ನು ಯಾವ ಆಧಾರದ ಮೇಲೆ ತುಂಡುಗುತ್ತಿಗೆಯಡಿ ನಡೆಸಲಾಗುತ್ತಿದೆ? ಅವುಗಳಿಗೆ ಇರುವ ಕರಾರುಗಳೇನು? ಹಲ ಕಾಮಗಾರಿಗಳಿಗೆ 2-3 ಬಾರಿ ಮರು ಟೆಂಡರುಗಳನ್ನು ಕರೆದ ಉದ್ದೇಶವೇನು? ಕಾಮಗಾರಿಗಳ ಪೈಕಿ ಎಷ್ಟು ಪೂರ್ಣಗೊಂಡಿವೆ? ಎಂದು ಸದಸ್ಯರು ಅಸಮಾಧಾನದಿಂದ ಕೂಡಿದ ಹಲವು ಪ್ರಶ್ನೆಗಳನ್ನು ಸದಸ್ಯರಾದ ಡಿ.ವಿ.ಹರೀಶ್, ಎ.ಎಂ.ಲಕ್ಷ್ಮಿನಾರಾಯಣ, ನಾರಾಯಣರೆಡ್ಡಿ ಮಂಡಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಕಾರ್ಯಪಾಲಕ ಎಂಜಿನಿಯರ್ ದೇವರಾಜ್, ₨ 5 ಲಕ್ಷ ವೆಚ್ಚದ ಒಳಗಿನ ಕಾಮಗಾರಿಗಳನ್ನು ತುಂಡುಗುತ್ತಿಗೆಯಡಿ ನೇರವಾಗಿ ನೀಡಬಹುದು. ಅದಕ್ಕೂ ಮೇಲ್ಪಟ್ಟ ವೆಚ್ಚದ ಕಾಮಗಾರಿಗಳನ್ನು ಟೆಂಡರ್ ಮೂಲಕವೇ ನೀಡಬೇಕು. ಜಿಲ್ಲೆಯಾದಾದ್ಯಂತ 3850 ಕಾಮಗಾರಿಗಳ ಪೈಕಿ 900 ಕಾಮಗಾರಿಗಳಿಗೆ ಟೆಂಡರ್ ನೀಡಲಾಗಿದೆ. 1600 ಕಾಮಗಾರಿಗಳನ್ನು ತುಂಡುಗುತ್ತಿಗೆಯಡಿ ನೀಡಲಾಗಿದೆ. ಉಳಿದ 1350 ಕಾಮಗಾರಿಗಳು ಕ್ರಿಯಾಯೋಜನೆ ಹಂತದಲ್ಲಿದೆ ಎಂದು ಉತ್ತರಿಸಿದರು.
ತಮ್ಮ ಕ್ಷೇತ್ರದಲ್ಲಿ ಈವರೆಗೂ ಒಂದೇ ಒಂದು ಪ್ಯಾಕೇಜ್ ಕಾಮಗಾರಿ ನಡೆಸಿರುವುದು ಕೂಡ ಗಮನಕ್ಕೆ ಬಂದಿಲ್ಲ. ಪ್ಯಾಕೇಜ್ ಕಾಮಗಾರಿಗಳನ್ನು ಆಯಾ ಕ್ಷೇತ್ರದ ಸದಸ್ಯರ ಗಮನಕ್ಕೆ ಏಕೆ ತರುವುದಿಲ್ಲ ಎಂದು ಸದಸ್ಯ ಲಕ್ಷ್ಮಿನಾರಾಯಣ ಆಕ್ಷೇಪಿಸಿದರು.
ಕ್ರಿಯಾ ಯೋಜನೆ ರೂಪಿಸುವಾಗ ₨ 5 ಲಕ್ಷದ ಒಳಗೆ ರೂಪಿಸಿ ಎಂದು ಹೇಳಿದ್ದರೂ ಅದಕ್ಕಿಂತಲೂ ಹೆಚ್ಚು ವೆಚ್ಚದ ಕಾಮಗಾರಿಗಳನ್ನೇ ಅಧಿಕಾರಿಗಳು ರೂಪಿಸಿದ್ದಾರೆ ಎಂದು ಸದಸ್ಯ ನಾರಾಯಣರೆಡ್ಡಿ ಆರೋಪಿಸಿದರು.
2-3 ಕಾಮಗಾರಿಗಳನ್ನು ಒಟ್ಟಾಗಿಸಿ ಕ್ರಿಯಾ ಯೋಜನೆಯನ್ನು 5 ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ ರೂಪಿಸಿ ಅದಕ್ಕೆ ಟೆಂಡರ್ ಕರೆಯಲಾಗುತ್ತಿದೆ. ತುಂಡು ಗುತ್ತಿಗೆ ಮಾಡಿದರೆ ಜಿ.ಪಂ. ಸದಸ್ಯರು ಸೂಚಿಸಿದವರಿಗೇ ನೀಡಬೇಕಾಗುತ್ತದೆ ಎಂಬ ಹುನ್ನಾರವನ್ನು ಅಧಿಕಾರಿಗಳು ನಡೆಸಿದ್ದಾರೆ ಎಂದು ಸದಸ್ಯ ಹರೀಶ್ ದೂರಿದರು,
ಕಾಮಗಾರಿಗಳಲ್ಲಿ ನಿಯಮ ಉಲ್ಲಂಘಿಸಲಾಗಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಈ ಸದಸ್ಯರು ಆಗ್ರಹಿಸಿದರು.
ತಮ್ಮ ಕ್ಷೇತ್ರದಲ್ಲಿ ನೀರಿನ ಬೃಹತ್ ಟ್ಯಾಂಕ್ಗಳನ್ನು ನಿರ್ಮಿಸಿದ್ದರೂ ಅವುಗಳಿಗೆ ನೀರಿನ ಸಂಪರ್ಕ ಕಲ್ಪಿಸಿಲ್ಲ. ಬಹಳಷ್ಟು ಕಾಮಗಾರಿಗಳು ಪೂರ್ಣಗೊಳ್ಳದೆ ಬಾಕಿ ಉಳಿದಿವೆ ಎಂದು ಸದಸ್ಯ ಸೋಮಶೇಖರ ರೆಡ್ಡಿ ದೂರಿದರು.
ವಿಶೇಷ ಸಭೆ: ಅದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಆರ್.ನಾರಾಯಣಸ್ವಾಮಿ, ನೀರಿಗೆ ಸಂಬಂಧಪಟ್ಟಂತೆ ಎಲ್ಲ ಅಧಿಕಾರಿಗಳನ್ನು ವಿಶೇಷ ಸಭೆಯನ್ನು ಏರ್ಪಡಿಸಬೇಕು ಎಂದು ದೇವರಾಜ್ ಅವರಿಗೆ ಸೂಚಿಸಿದರು.
ಗೊಂದಲ ನಿವಾರಿಸಿ: ಕುಡಿಯುವ ನೀರು ಯೋಜನೆಗಳಲ್ಲಿ ಯಾವುದು ಕೇಂದ್ರ ಸರ್ಕಾರದ್ದು, ಯಾವುದು ರಾಜ್ಯ ಸರ್ಕಾರದ್ದು ಎಂಬ ಬಗ್ಗೆ ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡುವುದಿಲ್ಲ ಎಂದು ರಾಮಸ್ವಾಮಿರೆಡ್ಡಿ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಂ.ಜುಲ್ಫಿಕರ್ ಉಲ್ಲಾ, ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯು ಕೇಂದ್ರ ಸರ್ಕಾರದ್ದಾಗಿದೆ. ಉಳಿದಂತೆ ಕೆಲವು ಕೇಂದ್ರ ಮತ್ತು ರಾಜ್ಯ ಸರ್ಕಾರವೆರಡರ ಅನುದಾನ ಹಂಚಿಕೆಯಲ್ಲಿ ನಡೆಯುತ್ತಿವೆ ಎಂದು ಸ್ಪಷ್ಟನೆ ನೀಡಿದರು.
ಬೇಸಿಗೆ ಕಾಲ ಸಮೀಪಿಸುತ್ತಿರುವುದರಿಂದ ಮುನ್ನೆಚ್ಚರಿಕೆಯಾಗಿ ಕೈಗೊಳ್ಳಬೇಕಾದ ಕ್ರಮಗಳ ಕಡೆ ಗಮನ ಹರಿಸಬೇಕು. ಕಾಲುಬಾಯಿ ಜ್ವರದಿಂದ ಸಾವನ್ನಪ್ಪಿರುವ ಜಾನುವಾರುಗಳ ಮಾಲೀಕರಿಗೆ ಪರಿಹಾರವನ್ನು ಶೀಘ್ರ ದೊರಕಿಸಬೇಕು ಎಂದು ಸದಸ್ಯ ಎಸ್.ಬಿ.ಮುನಿವೆಂಕಟಪ್ಪ ಹೇಳಿದರು. ಉಪಾಧ್ಯಕ್ಷೆ ಅಲುವೇಲಮ್ಮ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.