ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳುನಾಡಿನ ಸಮಾಜ ಮಾತೃ ಪ್ರಧಾನವೇ?

Last Updated 19 ಮೇ 2013, 19:59 IST
ಅಕ್ಷರ ಗಾತ್ರ

ಕೆಲವು ವಾರಗಳಿಂದ `ಪ್ರಜಾವಾಣಿ'ಯ ಸೋಮವಾರದ ಸಂಚಿಕೆಗಳಲ್ಲಿ `ಜಾತಿಸಂವಾದ' ಅಂಕಣದಡಿಯಲ್ಲಿ ಪ್ರಕಟವಾಗುತ್ತಿರುವ ಹಲವಾರು ಲೇಖನಗಳು ಕಣ್ತೆರೆಸುವಂಥವು. ಅದಕ್ಕಾಗಿ `ಪ್ರಜಾವಾಣಿ'ಗೆ ವಿಶೇಷ ಅಭಿನಂದನೆಗಳು ಸಲ್ಲುತ್ತವೆ. ದಿನಾಂಕ 13-05-2013ರ ಸಂಚಿಕೆಯಲ್ಲಿ `ಜಾತಿ'ಯನ್ನು ವಿವಿಧ ದೃಷ್ಟಿಗಳಿಂದ ವಿಶ್ಲೇಷಿಸುವ ಕೆಲವು ವೈಚಾರಿಕ ಲೇಖನಗಳಿವೆ.

`ಅನಿಷ್ಟಕ್ಕೆ ಶನೀಶ್ವರ ಗುರಿ' ಎಂಬಂತೆ ಜಾತಿಪ್ರಜ್ಞೆ ಅವ್ಯಾಹತವಾಗಿ ಮುಂದುವರೆಯುತ್ತಾ ಹೋಗಲು ಪುರುಷರಿಗಿಂತ ಮಹಿಳೆಯರೇ ಕಾರಣ ಎಂದು ಬಿಂಬಿಸುವ ಪ್ರಯತ್ನಗಳಿಗೆ ಪ್ರತಿಕ್ರಿಯೆಯಾಗಿ ಕೆಲವು ಅಭಿಪ್ರಾಯಗಳು ಈ ಬಾರಿಯೂ ಪ್ರಕಟವಾಗಿವೆ. ಮಹಿಳೆಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಈಗಲೂ ಹೇಗೆ ನಿರ್ದಯವಾಗಿ ಹತ್ತಿಕ್ಕಲಾಗುತ್ತದೆ ಎಂಬುದಕ್ಕೆ ರೂಪಾ ಹಾಸನ ಅವರ ಲೇಖನವೇ ಸಾಕ್ಷಿ. ಮಾತೃಪ್ರಧಾನ ಸಮಾಜ ಪದ್ಧತಿ ಬಹುಮಟ್ಟಿಗೆ ಪ್ರಚಲಿತವಾಗಿರುವ ತುಳುನಾಡಿನಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನವುಂಟೆಂದು ಯಾರೂ ಭ್ರಮಿಸಬೇಕಿಲ್ಲ. ಉಳಿದ ಸಮಾಜಗಳ ಮಹಿಳೆಯರಿಗಿರುವ ಮಡಿ-ಮೈಲಿಗೆ, ಪುರುಷಾಧೀನ ವ್ಯವಸ್ಥೆ ಇತ್ಯಾದಿ ಸಮಸ್ಯೆಗಳು ಅವರಿಗೂ ಇವೆ.

ಧಾರ್ಮಿಕ ಸಮಾರಂಭಗಳಲ್ಲಿ ಅವರಿಗೆ ಪ್ರಾಧಾನ್ಯವೇನೂ ಇಲ್ಲ. ಕಲ್ಲುರ್ಟಿಯಂಥ ಹೆಣ್ಣು ದೈವಕ್ಕೆ `ಅಗೆಲು' ಬಡಿಸುವ ಸಂದರ್ಭದಲ್ಲಿ ಕಡುಬು, ದೋಸೆ ಸಿದ್ಧಪಡಿಸುವ ಕೆಲಸವಾಗಲೀ ಅಗೆಲು ಬಡಿಸುವ ಕೆಲಸವಾಗಲೀ ಪುರಷನದೇ. `ಸಿರಿಜಾತ್ರೆ'ಯಲ್ಲಿ `ಸಿರಿಶಕ್ತಿ'ಗಳಿಂದ ಆವೇಶಕ್ಕೆ ಒಳಗಾಗುವ ಮಹಿಳೆಯರನ್ನು ನಿಯಂತ್ರಿಸುವ ಹಕ್ಕು ಪುರುಷಪಾತ್ರಿಯಾದ `ಕುಮಾರ'ನದು.

ಅಷ್ಟೇ ಏಕೆ, ದೈವಗಳ ಉಯ್ಯಾಲೆ ಇರುವ ಮನೆಯ ಚಾವಡಿಗೆ (ಅದು ತಮ್ಮದೇ ಮನೆಯಾಗಿದ್ದರೂ) ಹೆಣ್ಣು ಕಾಲಿರಿಸುವಂತಿಲ್ಲ. ತುಳುನಾಡಿನ ಹೆಚ್ಚಿನ ದೈವಗಳು ಸ್ತ್ರೀ ದೈವಗಳಾಗಿದ್ದರೂ ಆ ದೈವಗಳ ಕಡೆಯಿಂದ ತುಳುನಾಡಿನ ಮಹಿಳೆಯರಿಗೆ ವಿಶೇಷಾನುಗ್ರಹವೇನೂ ಇಲ್ಲ! ಒಟ್ಟಿನಲ್ಲಿ ಸಮಾಜದಲ್ಲಿ ಸ್ತ್ರಿ-ಪುರುಷ ಸಮಾನತೆಯು ಗೌರವಯುತವಾಗಿ ರೂಢವಾಗಬೇಕಾದರೆ, ಸ್ತ್ರೀ-ಪುರುಷವರ್ಗಗಳು ಒಂದಾಗಿ, ಪ್ರಾಮಾಣಿಕವಾಗಿ ಶ್ರಮಿಸಬೇಕಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT