ಹೈದರಾಬಾದ್ (ಐಎಎನ್ಎಸ್): ಪ್ರತ್ಯೇಕ ರಾಜ್ಯದ ಬೇಡಿಕೆ ಈಡೇರಿಕೆಗಾಗಿ ತೆಲಂಗಾಣ ಚಳವಳಿಗಾರರ ಮುಷ್ಕರ 25ನೇ ದಿನಕ್ಕೆ ಕಾಲಿರಿಸಿದೆ.
ಸರ್ಕಾರಿ ನೌಕರರು, ಶಿಕ್ಷಕರು, ಸಿಂಗಾರೇಣಿ ಕಲ್ಲಿದ್ದಲು ಗಣಿಯ ಕಾರ್ಮಿಕರು, ರಸ್ತೆ ಸಂಚಾರ ಸಿಬ್ಬಂದಿ ಮುಂತಾದವರು ನಿರಂತರ ಮುಷ್ಕರದಲ್ಲಿ ತೊಡಗಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ನಡೆಸುತ್ತಿರುವ ಈ ಮುಷ್ಕರ 25ನೇ ದಿನಕ್ಕೆ ಕಾಲಿರಿಸಿದೆ.
ಮುಷ್ಕರದಿಂದಾಗಿ ಸರ್ಕಾರಕ್ಕೆ ಪ್ರತಿ ದಿನವೂ 200 ಕೋಟಿ ರೂಪಾಯಿಗಳಷ್ಟು ಹಾನಿಯಾಗುತ್ತಲಿದೆ ಎಂದು ಅಂದಾಜಿಸಲಾಗಿದೆ. ಕೇಂದ್ರವು ಪ್ರತ್ಯೇಕ ರಾಜ್ಯದ ಬೇಡಿಕೆಗೆ ಅಂತಿಮ ತೀರ್ಮಾನ ಕೈಗೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದು, ಮುಷ್ಕರ ಶೀಘ್ರದಲ್ಲಿ ಸ್ಥಗಿತಗೊಳ್ಳುವ ಯಾವುದೇ ಸೂಚನೆಗಳು ಕಾಣುತ್ತಿಲ್ಲ.
ದಸರಾ ಹಬ್ಬದ ಬಿಡುವಿನ ನಂತರ ಮತ್ತೆ ಶುಕ್ರವಾರದಿಂದ ಮುಷ್ಕರ ಆರಂಭವಾಗಿದ್ದು, ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನಾ ಮೆರವಣಿಗೆಗಳನ್ನು ಹಮ್ಮಿಕೊಳ್ಳಲಾಗಿದೆ.
ಕಳೆದ 19 ದಿನಗಳಿಂದ ಬಸ್ ಸಂಚಾರ ಸ್ಥಗಿತಗೊಂಡಿದ್ದು, 10 ಸಾವಿರ ಬಸ್ಗಳು ರಸ್ತೆಗಿಳಿದೇ ಇಲ್ಲ. ಹೈದರಾಬಾದ್ನಲ್ಲಿ 200 ಬಸ್ಗಳನ್ನು ಖಾಸಗಿ ಚಾಲಕರ ಮೂಲಕ ನಿರ್ವಹಿಸಲಾಗುತ್ತಿದೆ. ರಾಜ್ಯ ಸಾರಿಗೆ ಸಂಸ್ಥೆಯು ಸುಮಾರು 7 ಕೋಟಿ ರೂಪಾಯಿ ಹಾನಿಯನ್ನು ಅನುಭವಿಸುತ್ತಿದೆ ಎದು ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಆಡಳಿತವಿರುವ ಸಿಂಗಾರೇಣಿ ಕಲ್ಲಿದ್ದಲು ಗಣಿಗಳಲ್ಲಿ 70 ಸಾವಿರ ಕಾರ್ಮಿಕರು ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ. ಕಂಪೆನಿಯು ಪ್ರತಿದಿನ ಕೇವಲ 36 ಸಾವಿರ ಟನ್ಗಳಷ್ಟು ಮಾತ್ರ ಕಲ್ಲಿದ್ದಲು ಉತ್ಪಾದನೆ ಮಾಡುವಂತಾಗಿದೆ. ಸಾಮಾನ್ಯವಾಗಿ ಪ್ರತಿ ದಿನ 150 ಸಾವಿರ ಟನ್ಗಳಷ್ಟು ಉತ್ಪಾದನೆ ಮಾಡುತ್ತಿತ್ತು.