ನವದೆಹಲಿ/ಪಣಜಿ (ಪಿಟಿಐ): ಸಹೋದ್ಯೋಗಿ ಪತ್ರಕರ್ತೆ ಮೇಲೆ ಅತ್ಯಾಚಾರ ನಡೆಸಿದ ಆರೋಪ ಹೊತ್ತ ತೆಹೆಲ್ಕಾ ಪ್ರಧಾನ ಸಂಪಾದಕ ತರುಣ್ ತೇಜ್ಪಾಲ್ ಪ್ರಕರಣವನ್ನು ತ್ವರಿತ ಕೋರ್ಟ್ನಲ್ಲಿ ವಿಚಾರಣೆಗೆ ಒಳಪಡಿಸಲು ಗೋವಾ ಸರ್ಕಾರ ನಿರ್ಧರಿಸಿದೆ.
‘ಪ್ರಕರಣದ ವಿಚಾರಣೆಯನ್ನು ತ್ವರಿತ ಕೋರ್ಟ್ನ ಮಹಿಳಾ ನ್ಯಾಯಾಧೀಶರಿಂದಲೇ ನಡೆಸಲಾಗುತ್ತದೆ. ಇದರಲ್ಲಿ ಸುಪ್ರೀಂಕೋರ್ಟ್ ಮಾರ್ಗಸೂಚಿ ಅನುಸರಿಸಲಾಗುತ್ತದೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ.
‘ಪತ್ರಕರ್ತೆಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ಇದರಲ್ಲಿ ಯಾವುದೇ ಹಸ್ತಕ್ಷೇಪ ನಡೆಸುತ್ತಿಲ್ಲ. ಹಿಂದಿನ ದ್ವೇಷದಿಂದ ತೇಜ್ಪಾಲ್ ಅವರನ್ನು ಕೆಟ್ಟ ರೀತಿ ಅಥವಾ ಭಿನ್ನ ಮಾರ್ಗದಲ್ಲಿ ನಡೆಸಿಕೊಳ್ಳಲಾಗುತ್ತಿದೆ ಎಂಬುದಾಗಿ ಯಾರೂ ಚಿಂತಿಸುವ ಅವಶ್ಯಕತೆ ಇಲ್ಲ’ ಎಂದು ಅವರು ದೆಹಲಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ರಕ್ಷಣಾ ವ್ಯವಹಾರಕ್ಕೆ ಸಂಬಂಧಿಸಿದಂತೆ ತೆಹೆಲ್ಕಾವು ಮಾರುವೇಷದ ಕಾರ್ಯಾಚರಣೆ ನಡೆಸಿ, ಬಿಜೆಪಿ ಮಾಜಿ ಅಧ್ಯಕ್ಷ ಬಂಗಾರು ಲಕ್ಷ್ಮಣ್ ಹಣ ಸ್ವೀಕರಿಸುತ್ತಿದ್ದ ಟೇಪ್ ಬಹಿರಂಗಪಡಿಸಿ, ಅವರ ರಾಜೀನಾಮೆಗೆ ಕಾರಣವಾದ ಘಟನೆಯನ್ನು ಈಗ ಇಲ್ಲಿ ಸ್ಮರಿಸಬಹುದು.
ಇಂದು ಸಾಕ್ಷಿಗಳ ಹೇಳಿಕೆ: ಈ ಮಧ್ಯೆ, ಪತ್ರಕರ್ತೆ ಘಟನೆಯನ್ನು ಮೂವರ ಬಳಿ ಹೇಳಿಕೊಂಡಿದ್ದು, ಈ ಸಾಕ್ಷಿಗಳು ಶುಕ್ರವಾರ ಗೋವಾ
ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿ ಹೇಳಿಕೆ ನೀಡುವ ನಿರೀಕ್ಷೆಯಿದೆ. ಈ ಮೂವರು ತನಿಖೆಗೆ ಹಾಜರಾಗುವ ವಿಷಯವನ್ನು ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ತೆಹೆಲ್ಕಾ ಮಾಜಿ ವ್ಯವಸ್ಥಾಪಕ ಸಂಪಾದಕಿ ಶೋಮಾ ಚೌಧರಿ, ಸಮನ್ಸ್ ಜಾರಿ ಮಾಡಿದ ಗೋವಾ ಪೊಲೀಸರ ಮುಂದೆ ಶನಿವಾರ ಹಾಜರಾಗಿ ಹೇಳಿಕೆ ನೀಡಲಿದ್ದಾರೆ. ಕೋರ್ಟ್ ಮುಂದೆ ಶನಿವಾರ ಹಾಜರುಪಡಿಸಲಾಗುವ ತೇಜ್ಪಾಲ್ ಅವರನ್ನು ಇನ್ನೂ ಹೆಚ್ಚುವರಿಯಾಗಿ ಎಂಟು ದಿನಗಳ ಕಾಲ ತಮ್ಮ ವಶಕ್ಕೆ ಒಪ್ಪಿಸುವಂತೆ ಪೊಲೀಸರು ಕೋರುವ ಸಾಧ್ಯತೆಗಳಿವೆ. ಆರು ದಿನಗಳ ತೇಜ್ಪಾಲ್, ಪೊಲೀಸ್ ಕಸ್ಟಡಿ ಶುಕ್ರವಾರ ಸಂಜೆಗೆ ಕೊನೆಗೊಳ್ಳಲಿದೆ.
‘ತನಿಖೆ ಸರಿಯಾದ ಮಾರ್ಗದಲ್ಲಿ ನಡೆಯುತ್ತಿದ್ದು, ನಾವು ವಿವರವಾಗಿ ಪ್ರಶ್ನಿಸುತ್ತಿದ್ದೇವೆ. ತೇಜ್ಪಾಲ್ ತನಿಖೆಗೆ ಸಹಕರಿಸುತ್ತಿದ್ದಾರೆ’ ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು.
ಡಿವೈಎಸ್ಪಿ ಸಮ್ಮಿ ತಾವರ್ಸ್ ಅವರ ಮೇಲ್ವಿಚಾರಣೆಯಲ್ಲಿ ತನಿಖಾಧಿಕಾರಿ ಸುನಿತಾ ಸಾವಂತ್ ಅವರ ನೇತೃತ್ವದಲ್ಲಿ ತೇಜ್ಪಾಲ್ ಹೇಳಿಕೆಗಳನ್ನು ವಿಸ್ತೃತವಾಗಿ ದಾಖಲಿಸಿಕೊಳ್ಳಲಾಗುತ್ತಿದೆ.
ತೇಜ್ಪಾಲ್ ಪುನರುಚ್ಚಾರ: ‘ನಮ್ಮಿಬ್ಬರ ನಡುವೆ (ಪತ್ರಕರ್ತೆ ಜತೆ) ನಡೆದಿರುವುದು ಪರಸ್ಪರ ಸಹಮತದ ಲೈಂಗಿಕ ಚಟುವಟಿಕೆ’ ಎಂದು ತೇಜ್ಪಾಲ್ ಪುನರುಚ್ಚರಿಸುತ್ತಿದ್ದಾರೆ’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿ ಹೇಳುತ್ತಾರೆ.
ಕಳೆದ ಶನಿವಾರದಿಂದ ಪೊಲೀಸ್ ವಶದಲ್ಲಿರುವ ತೇಜ್ಪಾಲ್ ಅವರನ್ನು ಮೂರನೇ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಭಾನುವಾರದಿಂದ ಅವರನ್ನು ಅಪರಾಧ ವಿಭಾಗದಲ್ಲಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ತೇಜ್ಪಾಲ್ ತಪ್ಪೊಪ್ಪಿಕೊಳ್ಳುವ ಸಾಧ್ಯತೆಯನ್ನು ಅವರ ವಕೀಲರು ತಳ್ಳಿಹಾಕಿದ್ದಾರೆ. ಪೊಲೀಸರು ಆರೋಪ ಪಟ್ಟಿ ದಾಖಲಿಸಿದ ನಂತರವಷ್ಟೇ ಮಾತನಾಡುವುದಾಗಿ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.