ಬರದ ನಡುವೆಯೂ ಮೈದುಂಬಿ ಹರಿಯುತ್ತಿರುವ ಆನೆಗುಂದಿ ಬಸಣ್ಣನ ಹೊಂಡ.ದಕ್ಷಿಣ ಕಾಶಿಯಲ್ಲಿವೆ ಎಂದೂ ಬತ್ತದ ಪುಷ್ಕರಣಿಗಳು! ಸರ್ವ ಕಷ್ಟಗಳನ್ನು ದೂರ ಮಾಡಲು ಕಾಮಧೇನುವೇ ಸರಿ ನಿನ್ನ ಒಡಲು ಸುಕ್ಷೇತ್ರದಲ್ಲಿನ ಅಂತರಗಂಗೆಯೇ ನಿನ್ನ ಜಡೆಯುಸಕಲ ಸುರ-ಅಸುರ, ನರರಿಗೆಲ್ಲ ನೀನೇ ಒಡೆಯನು ಶ್ರೀ ಕಾಲಕಾಲೇಶ್ವರ!ನಿಸರ್ಗ ರಮಣೀಯ ಜಾಳಿಂದ್ರಗಿರಿ ಬೆಟ್ಟದ ಹಸಿರು ಸೊಬಗಿನ ಹಳುವಿನಲ್ಲಿ ಕಲ್ಪನೆಯ ಕೈಲಾಸದಂತೆ ಕಂಗೊಳಿಸುತ್ತಿರುವ ದಕ್ಷಿಣ ಕಾಶಿ ಪ್ರಸಿದ್ಧಿಯ ಕಾಲಕಾಲೇಶ್ವರ ಕ್ಷೇತ್ರದಲ್ಲಿನ ಪುಷ್ಕರಣಿ ತೀರ್ಥಗಳು ಭೀಕರ ಬರದ ಮಧ್ಯೆಯೂ ಭರ್ತಿಗೊಂಡು ಭಕ್ತ ಸಮೂಹದ ಪೂಣ್ಯ ತೀರ್ಥವಾಗಿ
ಇಷ್ಟಾರ್ಥಗಳನ್ನು ಸಿದ್ದಿಸುತ್ತಿರುವುದು ಪುಣ್ಯ ಕ್ಷೇತ್ರದ ವಿಶೇಷತೆಯ ಮೆರಗು ಹೆಚ್ಚಿಸಿವೆ.ಹೌದು! ಹಲವು ವಿಸ್ಮಯ ಹಾಗೂ ವೈಶಿಷ್ಟತೆಗಳ ಪ್ರಖ್ಯಾತಿಗೆ ಒಳಗಾಗಿರುವ ಶ್ರೀ ಕ್ಷೇತ್ರ ಕಾಲಕಾಲೇಶ್ವರದಲ್ಲಿನ ಪುಷ್ಕರಣಿಗಳು ನಿರಂತರ ಭೀಕರ ಬರದಲ್ಲಿಯೂ ಭರ್ತಿ ಗೊಂಡಿರುವುದು ಆಧುನಿಕ ಯುಗದಲ್ಲಿಯೂ ಶ್ರೀ ಕ್ಷೇತ್ರದ ಬಗೆಗೆ ಭಕ್ತರು ಹೊಂದಿರುವ ನಂಬಿಕೆಗಳನ್ನು ಪುಷ್ಠಿಕರಿಸುತ್ತಿದೆ. ನಾಡಿನ ಅಸಂಖ್ಯಾತ ಭಕ್ತ ಸಮೂಹದ ಸಂಕಷ್ಟಗಳನ್ನು ನಿವಾರಿಸುವ ಕಾಲಕಾಲೇಶ್ವರನ ಶುಚಿತ್ವ ಹಾಗೂ ಪರಿಶುದ್ಧತೆಯ ಸಂದೇಶದ ಪ್ರತೀಕ
ಜಲವಾಗಿದೆ. ಶಿವನು ತನ್ನ ಜಡೆಯಲಿದ್ದ ಗಂಗೆಯನ್ನು ಸದಾ ತನ್ನ ಪೂಜೆಗಾಗಿ ಭಕ್ತರ ಶುಚಿತ್ವಕ್ಕಾಗಿ ಗುಪ್ತಗಂಗೆಯನ್ನಾಗಿ ಪಡೆಯಿಂದ ಸಾಕ್ಷಾತ್ಕರಿಸಿದನು. ಆಗ ಅಂತರ ಗಂಗೆಯೂ ಧುಮ್ಮಿಕ್ಕುವುದನ್ನು ಕಂಡು ಅಲ್ಲಿ ನೆರೆದವರೆಲ್ಲ ಸಂತಸಪಟ್ಟರು. ಅಲ್ಲದೆ, ಗಂಗೆ ಹಾಗೂ
ಬೋರಾಂಬೆಯರನ್ನು ಭಕ್ತಿ-ಸ್ತೋತ್ರಗಳಿಂದ ಸುತ್ತಿಸಿ ಪಾಡಿ-ಪೊಗಳಿದರು. ದುಷ್ಟ ರಾಕ್ಷರಸನ್ನು ಸಂಹರಿಸಿ, ಶಿಷ್ಟರನ್ನು ರಕ್ಷಿಸಿ ಪಾವನ ಗಂಗೆಯನ್ನು ಅಂತರ ಗಂಗೆ ಯನ್ನಾಗಿರಿಸಿ, ಕೈಲಾಸದ ಸಕಲ ದೇವಗಣ ಅಮರಣಂಗಳ, ಋಷಿಪುಂಗವರ ಇಚ್ಛೆಯ ಮೇರೆಗೆ ಸ್ವಯಂಭೂ ಲಿಂಗನಾಗಿ ಉದ್ಭವಿಸಿ, ಬೇಡಿದ ಭಕ್ತಿರಿಗೆ ಬೇಡಿದ್ದನ್ನು ಕೊಡುತ್ತಾ ಕಾಮಧೇನು ಕಲ್ಪವೃಕ್ಷವಾಗಿ
ಕಾಲಕಾಲೇಶ್ವರ ಎಂಬ ನಾಮದಿಂದ ಮೆರೆಯುತ್ತಿರುವ ದಕ್ಷಿಣ ಕಾಶಿ ಕಾಲಕಾಲೇಶ್ವರ ಕ್ಷೇತ್ರದಲ್ಲಿನ ವಿವಿಧ ಪುಷ್ಕರಣೆಗಳು ಶ್ರೀ ಕ್ಷೇತ್ರದ ಬಗೆಗೆ ಭಕ್ತ ಸಮೂಹದಲ್ಲಿ ನೆಲೆಯೂರಿರುವ ನಂಬಿಕೆಗಳನ್ನು ಇಂದಿಗೂ ಜೀವಂತವಾಗಿರಿಸಿವೆ.
ಎಂದೂ ಬತ್ತದ ಪುಣ್ಯ ಸ್ನಾನ ಪುಷ್ಕರಣೆ: ಉತ್ತರಾಭಿಮುಖವಾಗಿ ನೆಲೆಸಿರುವ ಕಾಲಕಾಲೇಶ್ವರ ಕ್ಷೇತ್ರವನ್ನು ಪ್ರವೇಶಿ ಸುತ್ತಿದ್ದಂತೆಯೇ ಕಾಲಕಾಲೇಶ್ವರ ಸನ್ನಿಧಿಗೂ 1 ಕಿ.ಮೀ ಅಂತರದಲ್ಲಿ ಪಶ್ವಿಮಾ ಭಿಮುಖವಾಗಿರುವ ಪುಣ್ಯ ಸ್ನಾನದ ಪುಷ್ಕರಣಿಯಲ್ಲಿ ಭಕ್ತ ಸಮೂಹ ಇಂದಿಗೂ ಮಿಂದೇಳುತ್ತಾರೆ.
ಈ ಪುಷ್ಕರಣೆಯಲ್ಲಿ ಸ್ನಾನ ಮಾಡುವುದರಿಂದ ದೈನಂದಿನ ಬದುಕಿನಲ್ಲಿ ಮಾಡಿರುವ ಪಾಪ, ಕರ್ಮಗಳು ತೊಳೆದು ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಭಕ್ತರದ್ದು. ಹೀಗಾಗಿಯೇ ಶ್ರೀ ಕ್ಷೇತ್ರದ ದರ್ಶನಕ್ಕೆ ಬರುವ ಭಕ್ತರು ಸುಕ್ಷೇತ್ರ ಪ್ರವೇಶಿಸುತ್ತಿದ್ದಂತೆಯೇ ಪುಣ್ಯ ಸ್ನಾನದ ಪುಷ್ಕರಣೆಯಲ್ಲಿ ಸ್ನಾನ ಮಾಡಿ ಕಾಲಕಾಲೇಶ್ವರನ ಸನ್ನಿಧಿಗೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಇಂಥ ಪುಷ್ಕರಣಿ ನಿರಂತರ ಬರದ ಮಧ್ಯೆಯೂ ಭರ್ತಿಯಾಗಿರುವುದು ಕ್ಷೇತ್ರದ ಹಿರಿಮೆಯ ಪ್ರತೀಕದಂತಿದೆ.
ಈ ಪುಷ್ಕರಣೆಯಲ್ಲಿನ ಜಲವನ್ನು ಭಕ್ತರು ಪುಣ್ಯ ತೀರ್ಥ ಎಂದು ಸೇವಿಸುತ್ತಾರೆ. ಮತ್ತೆ ಕೆಲ ಭಕ್ತರು ಪುಷ್ಕರಣಿ ನೀರನ್ನು ಬಾಟಲಿಗಳಲ್ಲಿ ಸಂಗ್ರಹಿಸಿಕೊಂಡು ಹೋಗುತ್ತಾರೆ. ಹೀಗೆ ಸಂಗ್ರಹಿಸಿಕೊಂಡು ಹೋಗುವ ಪುಣ್ಯ ತೀರ್ಥವನ್ನು ಮನೆಯಲ್ಲಿ ನಿತ್ಯದ ಸ್ನಾನದ ನಂತರ ಸೇವಿಸುತ್ತಾರೆ ಎನ್ನುಲಾಗುತ್ತಿದೆ.
ಹೊಸದಾಗಿ ವಿವಾಹ ಬಂಧನಕ್ಕೆ ಒಳಗಾದ ಜೋಡಿಗಳು ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ಮದುವೆಯಲ್ಲಿನ ಬಾಸಿಂಗ ಗಳನ್ನು ಪುಣ್ಯ ತೀರ್ಥದ ಪುಷ್ಕರಣೆಯಲ್ಲಿ ತೇಲಿ ಬಿಡುತ್ತಾರೆ. ವಿವಾಹದ ಬಾಸಿಂಗಗಳನ್ನು ಈ ಪುಷ್ಕರಣೆಯಲ್ಲಿ ತೇಲಿ ಬಿಡುವುದರಿಂದ ಸಾಂಸಾ ರಿಕ ಬದುಕು ಸುಖಿಯಾಗಿರುತ್ತದೆ ಎಂಬ ನಂಬಿಕೆ ಯೂ ಚಾಲ್ತಿಯಲ್ಲಿದೆ. ನಿರಂತರ ಬರದ ಬವಣೆಗೆ ಸಿಲುಕಿ ಕೆರೆ-ಕಟ್ಟೆ, ಕುಂಟೆಗಳೆಲ್ಲ ಬತ್ತಿ ಹೋಗಿವೆ. ಹೀಗಿದ್ದರೂ ಕಾಲಕಾಲೇಶ್ವರ ಕ್ಷೇತ್ರದ ಆನೆಗುಂದಿ ಬಸವಣ್ಣನ ಹೊಂಡ ಮಾತ್ರ ತುಂಬಿ ಹರಿಯುವ ಮೂಲಕ ಜನತೆ ಹಾಗೂ ಜಾನುವಾರುಗಳ ಜನ ದಾಹ ನೀಗಿಸುತ್ತಿರುವುದು ಆಶ್ಚರ್ಯವಾದರೂ ಸತ್ಯ.
ಎಂಥ ಘೋರ ಬರ ತಲೆದೋರಿದರೂ ಜಲವನ್ನು ಕಳೆದುಕೊಳ್ಳದ ದಕ್ಷಿಣ ಕಾಶಿಯಲ್ಲಿನ ವಿವಿಧ ಪುಷ್ಕರಣಿಗಳು ನಿರಂತರ ಬರದ ಬೇಗೆಯಿಂದ ಬಹು ದೂರ
ಉಳಿದು ಅಚ್ಚರಿಯನ್ನುಂಟು ಮಾಡಿರುವುದು ಸುಕ್ಷೇತ್ರದ ಗೌರವವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.