ಚಿಕ್ಕಮಗಳೂರು: ದತ್ತಮಾಲಾ ಅಭಿಯಾನ ಮತ್ತು ದತ್ತಜಯಂತಿ ಅಂಗವಾಗಿ ಶನಿವಾರ ಬೆಳಿಗ್ಗೆ ನಗರದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗ ದಳದ ನೇತೃತ್ವದಲ್ಲಿ ಮಹಿಳೆಯರು ಸಂಕೀರ್ತನಾ ಯಾತ್ರೆ ನಡೆಸಿದರು.
ನಂತರ ಗುರು ಇನಾಂ ದತ್ತಾತ್ರೇಯ ಪೀಠಕ್ಕೆ ತೆರಳಿ, ಪೊಲೀಸರ ಸರ್ಪಗಾವಲಿನಲ್ಲಿ ಸರದಿ ಸಾಲಿನಲ್ಲಿ ನಿಂತು ದತ್ತಾತ್ರೇಯರ ಗುಹೆಯಲ್ಲಿ ಅನಸೂಯ ದೇವಿ ಮತ್ತು ದತ್ತ ಪಾದುಕೆಗಳ ದರ್ಶನ ಪಡೆದರು.
ಗುಹೆ ಹೊರಭಾಗದ ತಾತ್ಕಾಲಿಕ ಸಭಾಂಗಣದಲ್ಲಿ ಅನಸೂಯ ದೇವಿ ಪೂಜೆ, ಗಣಪತಿ ಹೋಮ, ದುರ್ಗಾ ಹೋಮ ನಡೆಸಿ, ದತ್ತಾತ್ರೇಯ ಅವರ ತಾಯಿ ಅನಸೂಯ ದೇವಿಯ ಜಯಂತಿ ಆಚರಿಸಿದರು. ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಮಹಿಳೆಯರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದತ್ತಾತ್ರೇಯರ ಭಜನೆ ಮಾಡಿದರು. ಇದಕ್ಕೂ ಮೊದಲು ನಗರದ ಬೋಳರಾಮೇಶ್ವರ ದೇವಾಲಯ ಆವರಣದಿಂದ ಆರಂಭವಾದ ಸಂಕೀರ್ತನಾ ಯಾತ್ರೆ ಐ.ಜಿ. ರಸ್ತೆ ಮತ್ತು ಆರ್.ಜಿ. ರಸ್ತೆಯಲ್ಲಿ ಸಾಗಿ ಕಾಮಧೇನು ಗಣಪತಿ ದೇವಾಲಯ ಆವರಣದವರೆಗೆ ನಡೆಯಿತು.
ಮಹಿಳಾ ಮೋರ್ಚಾ ಮುಖಂಡರು ಅನಸೂಯ ದೇವಿ ಭಾವಚಿತ್ರ ಹಿಡಿದುಕೊಂಡು, ದತ್ತಾತ್ರೇಯರ ನಾಮಸ್ಮರಣೆ ಮಾಡುತ್ತಾ ಸಂಕೀರ್ತನಾ ಯಾತ್ರೆ ನಡೆಸಿದರು. ಯಾತ್ರೆ ಉದ್ದಕ್ಕೂ ಭಗವಾಧ್ವಜಗಳು ಹಾರಾಡಿದವು.
ಯಾತ್ರೆ ಹನುಮಂತಪ್ಪ ವೃತ್ತ ಬಳಸಿ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ಸಾಗಲು ಮುಂದಾಗುತ್ತಿದ್ದಂತೆ ಪೊಲೀಸರು ತಡೆಯೊಡ್ಡಿದರು. ಶಾಂತಿ ಸಭೆಯಲ್ಲಿ ತೀರ್ಮಾನವಾದಂತೆ ರತ್ನಗಿರಿ ರಸ್ತೆಯಲ್ಲಿ ತೆರಳಬೇಕು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದಾಗ, ಶಾಸಕ ಸಿ.ಟಿ.ರವಿ ಮತ್ತು ಸಂಘ ಪರಿವಾರದ ಮುಖಂಡರು ಸಮ್ಮತಿಸಿ, ನಿಗದಿತ ಮಾರ್ಗದಲ್ಲೆ ಯಾತ್ರೆ ಸಾಗಿದರು.
ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಶಿವಶಂಕರ್, ಮುರಳೀಧರ ಕಿಣಿ, ಬಜರಂಗ ದಳದ ಪ್ರೇಂ ಕಿರಣ್, ಸಂತೋಷ್ ಕೋಟ್ಯಾನ್ ಹಾಗೂ ಬಿಜೆಪಿ ಮುಖಂಡರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.