ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರ ಜಿಲ್ಲಾ ಮಟ್ಟದ ಸಮಾವೇಶ 25 ರಂದು....

Last Updated 23 ಸೆಪ್ಟೆಂಬರ್ 2011, 4:55 IST
ಅಕ್ಷರ ಗಾತ್ರ

ಹಾವೇರಿ: `ದಲಿತರ ಮೂಲಭೂತ ಹಕ್ಕುಗಳ ಜಾರಿಗೆ ಒತ್ತಾಯಿಸಿ ಸೆ.25 ರಂದು ನಗರದಲ್ಲಿ ಜಿಲ್ಲಾ ಮಟ್ಟದ ಬೃಹತ್ ರ‌್ಯಾಲಿ ಹಾಗೂ ಅರೆಬೆತ್ತಲೆ ಮೆರವಣಿಗೆಯನ್ನು ಹಮ್ಮಿಕೊಳ್ಳಲಾ ಗಿದೆ~ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ವಾಸು ದೇವ ಬಸವ್ವನವರ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಡಿಎಸ್‌ಎಸ್‌ನ ಐದು ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರು ಹಲಗೆ ಹಾಗೂ ಜಾಂಜ್‌ಮೇಳದೊಂದಿಗೆ ಅರೆಬೆತ್ತಲೆ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಅಂದು ಬೆಳಿಗ್ಗೆ ನಗರದ ಮುರುಘ ರಾಜೇಂದ್ರ ಮಠದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದೆ. ನಂತರ ಹೊಸಮನಿ ಸಿದ್ಧಪ್ಪ ವೃತ್ತಕ್ಕೆ ಆಗಮಿಸಿ ರಸ್ತೆ ತಡೆ ನಡೆಸಲಾಗುವುದು. ಸ್ವತಃ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸುವವರೆಗೆ ರಸ್ತೆ ತಡೆ ಮುಂದುವರೆಯಲಿದೆ.

ಜಿಲ್ಲಾಧಿಕಾರಿ ಗಳು ಮನವಿ ಸ್ವೀಕರಿಸಿದ ನಂತರ ನಗರದ ರಾಷ್ಟ್ರೀಯ ಹೆದ್ದಾರಿ ಮೂಲಕ ಶಿವಶಕ್ತಿ ಪ್ಯಾಲೇಸ್ ವರೆಗೆ ಮೆರವಣಿಗೆ ನಡೆಸಿ ಸಮಾವೇಶದಲ್ಲಿ ಪಾಲ್ಗೊಳ್ಳು ವರು ಎಂದು ತಿಳಿಸಿದರು.ಶತಮಾನಗಳಿಂದ ಹಕ್ಕುಗಳಿಂದ ವಂಚಿತರಾದ ಶೋಷಿತ ವರ್ಗಗಳಿಗೆ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸಮಾನತೆ ಹಕ್ಕು ಸೇರಿದಂತೆ ಶಿಕ್ಷಣ, ಸಂಪತ್ತು ಮತ್ತು ಅಧಿಕಾರದ ಹಕ್ಕು ನೀಡಿದ್ದಾರೆ.

ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳು ಸಂವಿಧಾನದ ಆಶಯವನ್ನು ಜಾರಿ ಮಾಡದೇ ಶೋಷಿತ ಜಾತಿ ಜನಾಂಗಗಳ ಜನಸಂಖ್ಯಾವಾರು ಹಕ್ಕು ಮತ್ತು ಅವಕಾಶಗಳನ್ನು ನೀಡದೇ ಕೇವಲ 22.75 ರಷ್ಟು ಹಣವನ್ನು ಮುಂಗಡ ಪತ್ರದಲ್ಲಿ ಮೀಸಲಿಟ್ಟಿವೆ.

ಇದು ಕೇಂದ್ರ ಯೋಜನಾ ಆಯೋಗದ ನಿರ್ದೇಶನ ಗಳನ್ನು ಧಿಕ್ಕರಿಸಿದಂತಾಗಿದೆಯಲ್ಲದೇ, ದಲಿತರ ಸಮಗ್ರ ಮೂಲಭೂತ ಹಕ್ಕು ಗಳನ್ನು ಜಾರಿ ಮಾಡಲು ಹಿಂದೇಟು ಹಾಕುವ ಮೂಲಕ ಶೋಷಿತ ಸಮು ದಾಯಕ್ಕೆ ಅನ್ಯಾಯ ಮಾಡುತ್ತಿವೆ ಎಂದು ಆರೋಪಿಸಿದರು.

ಕಳೆದ ಮೂರುವರೆ ದಶಕಗಳಿಂದ ಶೋಷಿತರ ಮೇಲೆ ನಡೆಯುತ್ತಿರುವ ಸಾಮಾಜಿಕ ಹಾಗೂ ಸಾಂಸ್ಕೃತಿಕ ಅನ್ಯಾಯಗಳ ವಿರುದ್ಧ ಹಾಗೂ ಸಮಾಜದಲ್ಲಿ ಸಮಾನತೆ ನಿರ್ಮಾಣ ಕ್ಕಾಗಿ ಹೋರಾಟ ಮಾಡುತ್ತಾ ಬಂದಿ ರುವ ಡಿಎಸ್‌ಎಸ್ ಈಗ ಮತ್ತೊಮ್ಮೆ ದಲಿತರ ಸಮಗ್ರ ಮೂಲಭೂತ ಹಕ್ಕು ಗಳಾದ ಪರಿಶಿಷ್ಟ ಜಾತಿ, ವರ್ಗಗಳ ಶೇ 23 ರಷ್ಟು ಹಣವನ್ನು ಏಕಗವಾಕ್ಷಿ ಮೂಲಕ ಜಾರಿಗೊಳಿಸಬೇಕು.

ಪರಿಶಿಷ್ಟ ಒಳ ಮೀಸಲಾತಿ ಕೂಡಲೇ ಜಾರಿ ಮಾಡಬೇಕು. ಸರ್ಕಾರ ಜಮೀನಿನಲ್ಲಿ ಶೇ 50 ರಷ್ಟು ಎಸ್‌ಸಿ, ಎಸ್‌ಟಿ ಭೂ ರಹಿತರಿಗೆ ಮೀಸಲಿಡಬೇಕು. ಬೆಲೆ ಏರಿಕೆಗೆ ತಕ್ಕಂತೆ ವಿದ್ಯಾರ್ಥಿ ವೇತನ ಹೆಚ್ಚಿಸಬೇಕು. ದೌರ್ಜನ್ಯ ತಡೆ ಕಾಯ್ದೆ ಪರಿಣಾಮಕಾರಿಗೊಳಿಸಬೇಕು ಎಂದು ಒತ್ತಾಯಿಸಲಾಗುವುದು ಎಂದರು.

ಅವುಗಳ ಜತೆಗೆ ಗುತ್ತಿಗೆ ಪೌರ ಕಾರ್ಮಿಕರ, ಸರ್ಕಾರಿ ಆಸ್ಪತ್ರೆ ಹಾಗೂ ವಸತಿ ನಿಲಯಗಳಲ್ಲಿ ಕಾರ್ಯ ನಿರ್ವಹಿ ಸುವ ದಿನಗೂಲಿ ನೌಕರರನ್ನು ಕಾಯಂ ಗೊಳಿಸಬೇಕು. ದಲಿತರ ಸಾಲ ಮನ್ನಾ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ 200 ದಿನ ಕೆಲಸ ಒದಗಿಸಬೇಕು.
 
ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಸಿದವರಿಗೆ ಶಿಕ್ಷೆಯಾಗಬೇಕು. ಕಳ್ಳಭಟ್ಟಿ ಸಾರಾಯಿ ಸೇರಿದಂತೆ ಅಕ್ರಮ ಸಾರಾಯಿ ಮಾರಾಟಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕು ಎಂಬಿತ್ಯಾದಿ ಸೇರಿ 25 ಹಕ್ಕೊತ್ತಾಯಗಳ ಜಾರಿಗಾಗಿ ಈ ಹೋರಾಟ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ದಲಿತರ ಸ್ವಾಭಿಮಾನದ ಸಂಕೇತ ವಾಗಿರುವ ಈ ಹೋರಾಟದಲ್ಲಿ ಜಿಲ್ಲೆ ಎಲ್ಲ ಶೋಷಿತ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿರುವ ಅವರು, ಡಿಎಸ್‌ಎಸ್ ರಾಜ್ಯ ಘಟಕ ಜಿಲ್ಲಾ ಮಟ್ಟದಲ್ಲಿ ಇಂತಹ ಪ್ರತಿಭಟನೆಗಳನ್ನು ಹಮ್ಮಿ ಕೊಂಡು ಡಿ.6 ರಂದು ದಾವಣಗೆರೆ ಯಲ್ಲಿ ರಾಜ್ಯ ಮಟ್ಟದ ಬೃಹತ್ ಸಮಾ ವೇಶ ನಡೆಸಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಲತೇಶ ಯಲ್ಲಾಪುರ, ನಿಂಗರಾಜ ದಂಡೆಮ್ಮನ ವರ, ನಿಂಗಪ್ಪ ನಿಂಬಕ್ಕನವರ, ಉಡ ಚಪ್ಪ ಮಾಳಗಿ, ಚಂದ್ರಕಾಂತ ಮರಿ ಯಣ್ಣನವರ, ಜಗದೀಶ ಹರಿಜನ, ಭೀಮಣ್ಣ ಹೊತ್ತೂರ, ಕಲಾವತಿ ಓಲೇಕಾರ, ಗಂಗಮ್ಮ ದೊಡ್ಡಮನಿ, ಬಸಣ್ಣ ಮುಗಳಿ, ಬಸವರಾಜ ಕಡೆ ಮನಿ, ಶೇಯಣ್ಣ ಹರಿಜನ, ಫಕ್ಕೀರೇಶ ಮೆಳ್ಳಳ್ಳಿ, ಭೀಮೇಶ ಯಲ್ಲಾಪುರ, ಮಜೀದ್ ಮಾಳಗಿಮನಿ ಅಲ್ಲದೇ ಅನೇಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT