ಶ್ರೀರಂಗಪಟ್ಟಣ: ದಸರಾ ಉತ್ಸವಕ್ಕೆ ಶ್ರೀರಂಗಪಟ್ಟಣ ಮದುವಣಗಿತ್ತಿಯಿಂದ ಸಕಲ ರೀತಿಯಿಂದಲೂ ಸಜ್ಜುಗೊಂಡಿದೆ.
ಇಲ್ಲಿಗೆ ಸಮೀಪದ ಕಿರಂಗೂರು ವೃತ್ತದ ಬನ್ನಿ ಮಂಟಪದಿಂದ ಅ.20ರಂದು ಶನಿವಾರ ಮಧ್ಯಾಹ್ನ 3 ಗಂಟೆಗೆ ರಾಜ್ಯಸಭಾ ಸದಸ್ಯೆ ಡಾ.ಬಿ.ಜಯಶ್ರೀ ಅಂಬಾರಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಕಿರಂಗೂರು ಬನ್ನಿಮಂಟಪದಿಂದ ಎರಡೂವರೆ ಕಿ.ಮೀ. ದೂರದ ಶ್ರೀರಂಗ ವೇದಿಕೆವರೆಗೆ ಅಂಬಾರಿ ಉತ್ಸವ ಹಾಗೂ 40ಕ್ಕೂ ಹೆಚ್ಚು ಕಲಾ ತಂಡಗಳು ಸಾಗಲಿವೆ. ಬೆಂಗಳೂರು- ಮೈಸೂರು ಹೆದ್ದಾರಿ ವೃತ್ತ, ಮಸೀದಿ ಮುಂದಿನ ಬೈಪಾಸ್ ರಸ್ತೆ, ಮುಖ್ಯ ಬೀದಿಯಲ್ಲಿ ಸಾಗುವ ಈ ಉತ್ಸವ ಸಂಜೆ 5.30ಕ್ಕೆ ಶ್ರೀರಂಗನಾಥಸ್ವಾಮಿ ದೇವಾಲಯ ತಲುಪಲಿದೆ.
ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ. ಉಪ ಮುಖ್ಯಮಂತ್ರಿ ಆರ್.ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವ ಸಿ.ಪಿ.ಯೋಗೇಶ್ವರ್, ಕೇಂದ್ರ ಸಚಿವ ಎಸ್.ಎಂ.ಕೃಷ್ಣ, ರಾಜ್ಯಸಭಾ ಸದಸ್ಯ ರೆಹಮಾನ್ಖಾನ್ ಇತರರು ಭಾಗವಹಿಸಲಿದ್ದಾರೆ.
ಶ್ರೀರಂಗನಾಥಸ್ವಾಮಿ ದೇವಾಲಯ ಮೈದಾನದಲ್ಲಿ 3 ದಿನಗಳ ಕಾಲ ನಡೆಯುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ 60*40 ಅಡಿ ಅಳತೆಯ ಸುಸಜ್ಜಿತ ವೇದಿಕೆ ರೂಪುಗೊಂಡಿದೆ. 4 ಸಾವಿರ ಮಂದಿ ಕುಳಿತು ಕಾರ್ಯಕ್ರಮ ವೀಕ್ಷಿಸಲು ಅನುಕೂಲವಾಗುವಂತೆ ಜಲ ನಿರೋಧಕ ಛಾವಣಿ ಸಿದ್ಧಪಡಿಸಲಾಗಿದೆ.