ಹಂಪಿ (ಬಳ್ಳಾರಿ ಜಿಲ್ಲೆ): ಸೂರ್ಯ ನಿತ್ಯದ ಪಯಣ ಮುಗಿಸಿ, ಪಡುವಣ ದಿಕ್ಕಿನಲ್ಲಿ ಅಸ್ತಂಗತನಾಗುತ್ತಿದ್ದಂತೆಯೇ, ದೀಪಾಲಂಕಾರದೊಂದಿಗೆ ಝಗಮಗ ಹೊಳೆಯಲಾರಂಭಿಸಿದ ಶ್ರೀಕೃಷ್ಣದೇವರಾಯ ವೇದಿಕೆಯಲ್ಲಿ ಕನ್ನಡ ತಾಯಿ ಭುವನೇಶ್ವರಿಯ ಪೂಜೆ ನೆರವೇರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸಕ್ತ ಸಾಲಿನ ಹಂಪಿ ಉತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.
ಈ ಮೂಲಕ ಕನ್ನಡ ಸಂಸ್ಕೃತಿ, ಕಲೆ, ಸಾಹಿತ್ಯ, ನೃತ್ಯ, ಸಂಗೀತ, ಶಿಲ್ಪಕಲೆಗೆ ನಾಲ್ಕು ಶತಮಾನಗಳ ಹಿಂದೆಯೇ ವಿಶಿಷ್ಟ ಸ್ಥಾನಮಾನ ನೀಡಿದ್ದ ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ನೆನಪಿಸುವ ಮೂರು ದಿನಗಳ ಸಂಭ್ರಮ, ಸಡಗರಗಳು ಮೇರೆ ಮೀರಿದವು.
ಮೈಸೂರು ದಸರಾ ಉತ್ಸವದ ಮಾದರಿಯಲ್ಲೇ ಹಂಪಿಯಲ್ಲಿ ಉತ್ಸವ ಆಚರಣೆ ಆರಂಭವಾಗಲು ದಿವಂಗತ ಎಂ.ಪಿ. ಪ್ರಕಾಶ್ ಕಾಳಜಿ ಪ್ರಮುಖ ಪಾತ್ರ ವಹಿಸಿದೆ ಎಂದು ಮುಖ್ಯಮಂತ್ರಿ ಸ್ಮರಿಸಿದರು.
ಸಾಂಸ್ಕೃತಿಕ ವೈವಿಧ್ಯದಿಂದ ಶ್ರೀಮಂತವಾಗಿರುವ ನಾಡಿನ ಇತಿಹಾಸವನ್ನು ಅರಿಯಲು ಆಯೋಜಿಸಿರುವ ಉತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ಕಲೆಯನ್ನು ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಕೋರಿದರು.
ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ನೂತನ ಕಾನೂನು ರಚಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಈ ಮೂಲಕ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿ ಉದ್ಯೋಗಾವಕಾಶ ಹೆಚ್ಚಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಸ್ವಾಗತಿಸಿದರು.
ಉದ್ಘಾಟನಾ ಸಮಾರಂಭವು ನಿಗದಿಗಿಂತ ಎರಡು ಗಂಟೆ ತಡವಾಗಿ ಆರಂಭವಾಯಿತು.