ಮೈಸೂರು: `ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಸಿವಿಲ್ ಕಾಮಗಾರಿಗಳಿಗೆ ಸರ್ಕಾರ ರೂ. 10 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ~ ಎಂದು ಪಾಲಿಕೆ ಆಯುಕ್ತ ಕೆ.ಎಸ್.ರಾಯ್ಕರ್ ಹೇಳಿದರು
.
`ಚಾಮರಾಜ ವಿಧಾನಸಭಾ ಕ್ಷೇತ್ರಕ್ಕೆ ರೂ. 12.10 ಕೋಟಿ ಹಣ ಬಿಡುಗಡೆಯಾಗಿದೆ. ಪ್ರಮುಖ ರಸ್ತೆಗಳ ಡಾಂಬರೀಕರಣ ಸೇರಿದಂತೆ 90 ಕಾಮಗಾರಿಗಳನ್ನು ಈಗಾಗಲೇ ಆರಂಭಿಸಲಾಗಿದೆ. ಹಾರ್ಡಿಂಜ್ ವೃತ್ತದಿಂದ ಜಯಚಾಮರಾಜೇಂದ್ರ ವೃತ್ತದ ರಾಜಮಾರ್ಗ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು~ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
`ಮನೆ ಮನೆ ದಸಾರಾ ಉತ್ಸವಕ್ಕೂ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸೆ. 17ರಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಚಾಲನೆ ನೀಡಲಿದ್ದಾರೆ. ಸೆ. 28ರಿಂದ ಅ.6ರ ವರೆಗೆ ಒಂಬತ್ತು ದಿನ ಅದ್ದೂರಿಯಾಗಿ ಮನೆ ಮನೆ ದಸರಾ ಆಚರಿಸಲು ನಿರ್ಧರಿಸಲಾಗಿದೆ. ನಗರದ ಎಲ್ಲ 65 ವಾರ್ಡ್ಗಳಲ್ಲಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ~ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ರಾಜೇಂದ್ರ, ಪಾಲಿಕೆ ವಿರೋಧ ಪಕ್ಷದ ನಾಯಕಿ ವಿದ್ಯಾ ಅರಸ್, ಆರೋಗ್ಯಾಧಿಕಾರಿ ನಾಗರಾಜು, ಸುಧಾ ಹಾಜರಿದ್ದರು.
ಕ್ರೀಡಾ ಸ್ಪರ್ಧೆಗಳ ವಿವರ
ಪುರುಷರು ಹಾಗೂ ಮಹಿಳೆಯರಿಗೆ 50, 100 ಹಾಗೂ 200 ಮೀಟರ್ ಓಟದ ಸ್ಪರ್ಧೆ, ಗುಂಡು ಎಸೆತ, ಮಡಕೆ ಒಡೆಯುವ ಸ್ಪರ್ಧೆ, ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಪುಷ್ಪ ರಂಗೋಲಿ ಸ್ಪರ್ಧೆ, ಲೆಮನ್ ಅಂಡ್ ಸ್ಪೂನ್ ಸ್ಪರ್ಧೆ ಏರ್ಪಡಿಸಲಾಗಿದೆ. ಎಲ್ಲ ಸ್ಪರ್ಧೆಗಳೂ ಆಯಾ ವಾರ್ಡ್ ವ್ಯಾಪ್ತಿಯಲ್ಲಿ ನಡೆಯಲಿವೆ.
ಹಾಡುಗಾರಿಕೆ (ಚಲನಚಿತ್ರ ಗೀತೆ ಮಾತ್ರ), ಕವ್ವಾಲಿ, ಸಂಗೀತ, ಸಂಗೀತ ಖುರ್ಚಿ (ಮ್ಯೂಸಿಕಲ್ ಛೇರ್), ಭಾವಗೀತೆ ಸ್ಪರ್ಧೆಗಳನ್ನೂ ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಸೆ. 17ರ ಒಳಗೆ ಆಯಾ ವಾರ್ಡ್ನ ಸಮಿತಿಗಳಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು.