ಬೆಂಗಳೂರು: ಸೂಕ್ತ ದಾಖಲೆ ಪತ್ರಗಳಿಲ್ಲದೆ ಚಿನ್ನಾಭರಣ ಸಾಗಿಸುತ್ತಿದ್ದ ಆರೋಪದ ಮೇಲೆ ರಾಜಸ್ತಾನ ಮೂಲದ ಗುರುಸಿಂಗ್ (26) ಎಂಬಾತನನ್ನು ಬಂಧಿಸಿರುವ ತಲಘಟ್ಟಪುರ ಪೊಲೀಸರು ಸುಮಾರು 1.50 ಕೋಟಿ ರೂಪಾಯಿ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕನಕಪುರ ರಸ್ತೆಯ ತಾತಗುಣಿ ಚೆಕ್ಪೋಸ್ಟ್ ಬಳಿ ಸೋಮವಾರ ರಾತ್ರಿ ಪ್ರತಿ ವಾಹನವನ್ನು ತಪಾಸಣೆ ಮಾಡಲಾಗುತ್ತಿತ್ತು. ಆಗ ಅದೇ ಮಾರ್ಗವಾಗಿ ಬಂದ ಗುರುಸಿಂಗ್ನ ಕಾರನ್ನು ತಡೆದು ಪರಿಶೀಲಿಸಿದಾಗ ವಾಹನದಲ್ಲಿದ್ದ ಬ್ಯಾಗ್ಗಳಲ್ಲಿ ನಾಲ್ಕೂವರೆ ಕೆ.ಜಿ ಚಿನ್ನದ ಆಭರಣಗಳು ಪತ್ತೆಯಾದವು ಎಂದು ಪೊಲೀಸರು ತಿಳಿಸಿದ್ದಾರೆ.
ಆಭರಣಗಳಿಗೆ ಸಂಬಂಧಿಸಿದಂತೆ ಆತನ ಬಳಿ ಯಾವುದೇ ದಾಖಲೆ ಪತ್ರಗಳು ಇರಲಿಲ್ಲ. ಆದ್ದರಿಂದ ಮತದಾರರಿಗೆ ಹಂಚಲು ಆಭರಣಗಳನ್ನು ಸಾಗಿಸುತ್ತಿರಬಹುದು ಎಂಬ ಕಾರಣಕ್ಕೆ ಆತನನ್ನು ಬಂಧಿಸಲಾಯಿತು. ಆರೋಪಿಯಿಂದ ಕಾರು ಹಾಗೂ ಆಭರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
`ಚೆನ್ನೈನಲ್ಲಿ ಆಭರಣ ಮಳಿಗೆ ಇಟ್ಟುಕೊಂಡಿದ್ದೇನೆ. ಹೊಸದಾಗಿ ವಿನ್ಯಾಸಗೊಳಿಸಿದ್ದ ಆಭರಣಗಳನ್ನು ಬೆಂಗಳೂರು ಹಾಗೂ ಮೈಸೂರಿನ ಚಿನ್ನಾಭರಣ ವ್ಯಾಪಾರಿಗಳಿಗೆ ತೋರಿಸಲು ತಂದಿದ್ದೆ ಎಂದು ಗುರುಸಿಂಗ್ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾನೆ. ಹೆಚ್ಚಿನ ತನಿಖೆ ಮುಂದುವರಿದಿದೆ' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.