ಹನುಮಸಾಗರ: ಇಂದಿನ ದಿನಗಳಲ್ಲಿ ಮಹಿಳೆಯರು ಅಭಿವೃದ್ಧಿ ಹೊಂದಲು ಸಾಕಷ್ಟು ಆಯಾಮಗಳು ಇದ್ದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿನ ಮಾಹಿತಿ ಪಡೆದುಕೊಂಡರೆ ಸಾಕಷ್ಟು ಅವಕಾಶಗಳ ದೊರೆಯಲು ಸಾಧ್ಯವಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಸದಾಶಿವಗೌಡ ಹೇಳಿದರು.
ಭಾನುವಾರ ಇಲ್ಲಿನ ಸುಮುದಾಯ ಭವನದಲ್ಲಿ ಗ್ರಾಮಾಭಿವೃದ್ದಿ ಯೋಜನೆಯ ಅಡಿಯಲ್ಲಿ ದುರ್ಗಾಶಕ್ತಿ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರು ಸ್ವಾಲಂಬಿಗಳಾಗಿ ಬದುಕುವುದನ್ನು ಕಲಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಸಂಘಗಳನ್ನು ಹಾಗೂ ಗುಂಪುಗಳನ್ನು ರಚಿಸಿ ಅವುಗಳ ಮೂಲಕ ಮಹಿಳೆಯರಿಗೆ ಅವಶ್ಯವಿರುವ ಸಾಧನಗಳನ್ನು ಹಾಗೂ ಸಲಕರಣೆಗಳನ್ನು ನೀಡಲಾಗುತ್ತಿದ್ದೆ.
ನಮ್ಮ ಯೋಜನೆಯ ವಿವಿಧ ಬಗೆಯ ಪ್ರಯೋಜನಗಳನ್ನು ಮಹಿಳೆಯರು ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಸಂಪನ್ಮೂಲ ವ್ಯಕ್ತಿ ಡಾ.ರಾಜಶೇಖರ ಮಾತನಾಡಿ ಎಲ್ಲಕ್ಕಿಂತ ಮಿಗಿಲಾದ ಆಸ್ತಿ ನಮ್ಮ ಆರೋಗ್ಯವಾಗಿರುವಾಗ ಅದರತ್ತ ನಮ್ಮ ಗಮನವಿರಬೇಕು.
ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚು ತಿಳುವಳಿಕೆ ಹೊಂದಿದ್ದರೆ ಇಡೀ ಕುಟುಂಬ ಸ್ವಾಸ್ಥ್ಯ ಕುಟುಂಬವಾಗಿ ಪರಿವರ್ತನೆಯಾಗುವಲ್ಲಿ ಸಂದೇಹವಿಲ್ಲ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಸವರಾಜ ದ್ಯಾವಣ್ಣವರ ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ತಂಡಗಳಿಗೆ ಸಂಸ್ಥೆಯವತಿಯಿಂದ ಸಲಕರಣೆಗಳನ್ನು ವಿತರಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧರಿಯಾಬಿ ಬಳೂಟಗಿ ಜ್ಞಾನ ವಿಕಾಸ ಕೇಂದ್ರ ಉದ್ಘಾಟನೆ ನೆರವೇರಿಸಿದರು. ಮುಖಂಡ ಗದಿಗೆಪ್ಪ ಬ್ಯಾಳಿ ಅಧ್ಯಕ್ಷತೆವಹಿಸಿದ್ದರು.
ಆಂತರಿಕ ಲೆಕ್ಕ ಪರಿಶೋಧಕರಾದ ಸಂತೋಷ ಸ್ವಾಗತಿಸಿದರು. ಯೋಜನೆಯ ಸಮನ್ವಯಾಧಿಕಾರಿ ಜ್ಯೋತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶೋಭಾ ವಂದಿಸಿದರು.