ಚಿಕ್ಕೋಡಿ: ಇಲ್ಲಿನ ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಸಹವಿದ್ಯುತ್ ಉತ್ಪಾದನಾ ಘಟಕದ ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ ದಕ್ಷಿಣ ಭಾರತ ಕಬ್ಬು ಮತ್ತು ಸಕ್ಕರೆ ತಂತ್ರಜ್ಞರ ಅಸೋಸಿಯೇಶನ್ (ಸಿಸ್ಟಾ) ಆಂಧ್ರಪ್ರದೇಶದ ವಿಜಯವಾಡಾದಲ್ಲಿ ನಡೆದ ಸಮಾರಂಭದಲ್ಲಿ ಪ್ರಥಮ ಸ್ಥಾನ ನೀಡಿ ಗೌರವಿಸಿದೆ.
2010-11ನೇ ಸಾಲಿನ ಹಂಗಾಮಿನಲ್ಲಿ ಕಾರ್ಖಾನೆಯ ಸಹವಿದ್ಯುತ್ ಘಟಕದ ಅತ್ಯುತ್ತಮ ಕಾರ್ಯನಿರ್ವಹಣೆಯನ್ನು ಪರಿಗಣಿಸಿ ಸಿಸ್ಟಾ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದು, ಕಾರ್ಖಾನೆಯು ಸತತ ಎರಡನೇ ಬಾರಿಗೆ ಮೊದಲ ಸ್ಥಾನದ ಗೌರವಕ್ಕೆ ಭಾಜನವಾಗಿದೆ.
ಕಾರ್ಖಾನೆಯು 2010-11ನೇ ಸಾಲಿನ ಹಂಗಾಮಿನಲ್ಲಿ 9.32 ಲಕ್ಷ ಟನ್ ಕಬ್ಬು ನುರಿಸಿ 11.13 ಲಕ್ಷ ಕ್ಷಿಂಟಾಲ್ ಸಕ್ಕರೆ ಉತ್ಪಾದಿಸಿದೆ. ಸರಾಸರಿ 12 ರಷ್ಟು ರಿಕವರಿ ಪಡೆದಿದೆ. ಅಲ್ಲದೇ 10.38 ಕೋಟಿ ಯೂನಿಟ್ ವಿದ್ಯುತ್ ಉತ್ಪಾದಿಸಿದ್ದು, 7.52 ಕೋಟಿ ಯೂನಿಟ್ ಮಾರಾಟ ಮಾಡಿ, 2.88 ಕೋಟಿ ಯೂನಿಟ್ ಸ್ವಂತಕ್ಕಾಗಿ ಬಳಸಿಕೊಂಡಿದೆ.
ಹಾಗೂ 50.59 ಲಕ್ಷ ಲೀ ಮಧ್ಯಸಾರ ಮತ್ತು 21.38 ಲಕ್ಷ ಲೀ ಇಥೆನಾಲ್ ಉತ್ಪಾದಿಸಿದೆ ಎಂದು ಕಾರ್ಖಾನೆಯ ಅಧ್ಯಕ್ಷ ಮಹಾಂತೇಶ ಕವಟಗಿಮಠ ಹೇಳಿದರು. ಕಾರ್ಖಾನೆಯ ಈ ಎಲ್ಲ ಸಾಧನೆಗೆ ಕಾರ್ಮಿಕರು ಮತ್ತು ಕಬ್ಬು ಬೆಳೆಗಾರರ ಸಹಕಾರವೇ ಕಾರಣವಾಗಿದೆ. ಮುಂಬ ರುವ ಹಂಗಾಮನ್ನು ಅ. 15ರಂದು ಆರಂಭಿಸುವ ಚಿಂತನೆ ಇದ್ದು, ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಕೆ ಮಾಡಬೇಕೆಂದು ಮನವಿ ಮಾಡಿದರು.
ಕಾರ್ಖಾನೆ ಉಪಾಧ್ಯಕ್ಷ ಅಜೀತ ದೇಸಾಯಿ, ನಿರ್ದೇಶಕರಾದ ಮಲ್ಲಿಕಾ ರ್ಜುನ ಕೋರೆ, ಪ್ರಕಾಶ ಪಾಟೀಲ, ಭರತೇಶ ಬನವಣೆ, ಪರಸಗೌಡಾ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಎಸ್.ಬಿ. ಉಮರಾಣಿ ಉಪಸ್ಥಿತರಿದ್ದರು.