ನವದೆಹಲಿ (ಪಿಟಿಐ): ಇತ್ತೀಚೆಗಷ್ಟೆ ದಾಂಪತ್ಯ ಜೀವನಕ್ಕೆ ಕಾಲಿರಿಸಿರುವ ಭೂತಾನಿನ ರಾಜ ಜಿಗ್ಮೆ ಕೇಸರ್ ನಮ್ಗ್ಯಾಲ್ ವಾಂಗ್ಚುಕ್ ಮತ್ತು ರಾಣಿ ಜೆತ್ಸುನ್ ಪೆಮಾ ವಾಂಗ್ಚುಕ್ ದಂಪತಿ ಒಂಬತ್ತು ದಿನಗಳ ಭಾರತ ಭೇಟಿಗಾಗಿ ಭಾನುವಾರ ಇಲ್ಲಿಗೆ ಬಂದಿಳಿದರು.
ಒಂಬತ್ತು ದಿನಗಳ ಭೇಟಿಯ ಸಂದರ್ಭದಲ್ಲಿ ರಾಜ ವಾಂಗ್ಚುಕ್ ಅವರು ದೇಶದ ವಿವಿಧ ನಾಯಕರನ್ನು ಭೇಟಿ ಮಾಡಲಿದ್ದಾರೆ.
ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ವಾಂಗ್ಚುಕ್ ಗೌರವಾರ್ಥ ಔತಣಕೂಟವನ್ನು ಏರ್ಪಡಿಸಲಿದ್ದಾರೆ. ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ಮನಮೋಹನ್ ಸಿಂಗ್ ಮತ್ತಿತರ ಮುಖಂಡರೊಂದಿಗೂ ಭೂತಾನ್ ದೊರೆ ಚರ್ಚಿಸಲಿದ್ದಾರೆ.
ವಾಂಗ್ಚುಕ್ ಅವರು ಅಕ್ಟೋಬರ್ 13ರಂದು ತಮ್ಮ ಬಾಲ್ಯದ ಗೆಳತಿ ಪೆಮಾ ಅವರನ್ನು ವರಿಸಿದ್ದರು. ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಬಳಿಕ ಅವರು ಭಾರತಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. 2008ರಲ್ಲಿ ಪಟ್ಟಾಭಿಷೇಕ ಆದ ನಂತರ ವಾಂಗ್ಚುಕ್ ಮೂರು ಬಾರಿ ಭಾರತ ಪ್ರವಾಸ ಕೈಗೊಂಡಿದ್ದರು.
ಭಾರತ ಪ್ರವಾಸ ಸಂದರ್ಭದಲ್ಲಿ ನವದಂಪತಿ ಜೈಪುರ, ಜೋಧ್ಪುರ ಮತ್ತು ಉದಯಪುರಗಳಿಗೂ ಭೇಟಿ ನೀಡಲಿದ್ದಾರೆ.