ತುಮಕೂರು: ಸಾವಿರಾರು ಕೋಟಿ ರೂಪಾಯಿ ದೇಣಿಗೆ ಸಂಗ್ರಹದಲ್ಲಿ ತೊಡಗಿರುವ ಕಾಂಗ್ರೆಸ್, ಮತದಾರರನ್ನು ಖರೀದಿಸುವ ಹುನ್ನಾರ ನಡೆಸಿದೆ ಎಂದು ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತ ಆರೋಪಿಸಿದರು.
ಭಾನುವಾರ ನಗರದಲ್ಲಿ ನಡೆದ ವಿದ್ಯಾರ್ಥಿ ಜನತಾದಳದ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ರಾಜಕೀಯ ಪಕ್ಷಗಳ ದೇಣಿಗೆ ಸಂಗ್ರಹ ಕುರಿತಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಜೆಡಿಎಸ್ ರೂ 4.63 ಕೋಟಿ ದೇಣಿಗೆ ಸಂಗ್ರಹಿಸಿದೆ, ಇದನ್ನು ಪಕ್ಷದ ಕಚೇರಿಯಲ್ಲೇ, ಪಕ್ಷದ ರಾಷ್ಟ್ರೀಯ ಘಟಕದ ಅಧ್ಯಕ್ಷ ಎಚ್.ಡಿ.ದೇವೇಗೌಡರ ಸಮ್ಮುಖದಲ್ಲೇ ಎಲ್ಲ ಕಾರ್ಯಕರ್ತರಿಗೆ ಬಹಿರಂಗವಾಗಿ ತಿಳಿಸಿಯೇ ಸಂಗ್ರಹ ಮಾಡಲಾಗಿದೆ. ಪಕ್ಷವು ಪ್ರಾಮಾಣಿಕವಾಗಿ ದೇಣಿಗೆ ಸಂಗ್ರಹ ಮಾಡಿದೆಯೇ ಹೊರತು ಅಕ್ರಮ ಮಾರ್ಗ ತುಳಿದಿಲ್ಲ ಎಂದರು.
ಕಾಂಗ್ರೆಸ್ಸಿಗಿಂತ ತಾನು ಕಡಿಮೆ ಇಲ್ಲ ಎಂದು ತೋರಿಸುವಂತೆ ಬಿಜೆಪಿ ರೂ 769 ಕೋಟಿ ದೇಣಿಗೆ ಸಂಗ್ರಹಿಸಿದೆ. ಇದು ಜನತೆಯನ್ನು ಅಧೋಗತಿಯತ್ತ ಕೊಂಡೊಯ್ಯುವ ಧೋರಣೆಯ ಪ್ರತೀಕ ಎಂದರು. ಪಶ್ಚಿಮಘಟ್ಟಕ್ಕೆ ಯುನೆಸ್ಕೊ ಮಾನ್ಯತೆ ತಪ್ಪದಂತೆ ನೋಡಿಕೊಳ್ಳಬೇಕಾಗಿದೆ. ಪ್ರಾಕೃತಿಕ ತಾಣಗಳ ರಕ್ಷಣೆಗೆ ಪಕ್ಷ ಕಟ್ಟಿಬದ್ಧವಾಗಿದೆ ಎಂದೂ ಅವರು ಹೇಳಿದರು.