ಕನ್ನಡ, ಶಿಕ್ಷಣ ಮಾಧ್ಯಮದ ಭಾಷೆಯಾಗಬೇಕು ಎಂಬ ಷರತ್ತಿನ ಮೇರೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನವನ್ನು ನಿರಾಕರಿಸಿರುವ ದೇವನೂರ ಮಹಾದೇವ ಅವರ ನಿಲುವು ಸರಿಯಾಗಿಯೇ ಇದೆ. ಅಷ್ಟಕ್ಕೂ ಈ ಷರತ್ತು ಮಹಾದೇವ ಅವರ ಖಾಸಗಿ ಠರಾವೇನಲ್ಲ. ಇದು ಪರಿಷ-ತ್ತಿನದ್ದೇ ಬೇಡಿಕೆಯಾಗಿದೆ.
ಹಲವು ದಶಕಗಳಿಂದಲೂ ಪ್ರತಿ ಸಮ್ಮೇಳನಾಧ್ಯಕ್ಷರೂ ಈ ಠರಾವನ್ನು ಸರ್ಕಾರದ ಮುಂದೆ ಇಡುತ್ತಲೇ ಇದ್ದರೂ ಸರ್ಕಾರಗಳು ಮಾತ್ರ ಇದಕ್ಕೆ ಕೆಟ್ಟ ನಿರ್ಲಕ್ಷ್ಯ ತೋರಿಸಿಕೊಂಡೇ ಬಂದಿವೆ. ಇದನ್ನು ಖಂಡಿಸಿಯೇ ದೇವನೂರರು ಈ ನಿರ್ಣಯ ತೆಗೆದುಕೊಂಡಿರಬಹುದು. ಈ ಹಿಂದೆ ಚಿತ್ರದುರ್ಗದ ಸಮ್ಮೇಳನಾಧ್ಯಕ್ಷರಾಗಿದ್ದ ಹಿರಿಯರಾದ ಎಲ್. ಬಸವರಾಜು ಅವರು ಇಂತಹ ಠರಾವನ್ನು ಸ್ಟಾಂಪ್ ಪೇಪರ್ ಮೇಲೆ ಬರೆದು ನಿಮ್ಮ ರಾಜಕಾರಣಿಗಳಿಂದ ಸಹಿ ತೆಗೆದುಕೊಳ್ಳಿ ಎಂದು ರಾಜಕಾರಿಣಿಗಳ ಸಮ್ಮುಖದಲ್ಲೇ ತಮ್ಮ ಅಸಹನೆಯನ್ನು ಸ್ಫೋಟಿಸಿದ್ದರು.
ನಿಜ, ಒಂದು ಒಕ್ಕೂಟದ ವ್ಯವಸ್ಥೆಯಲ್ಲಿ ಯಾವುದೇ ಭಾಷೆಯನ್ನು ಅನ್ಯಭಾಷಿಕರ ಮೇಲೆ ಕಡ್ಡಾಯವಾಗಿ ಹೇರಲು ಬರದ ಕಾರಣ ಸುಪ್ರೀಂಕೋರ್ಟ್ ಬಳಿ ಅಹವಾಲು ಕೊಂಡೊಯ್ಯುವುದು ಸೂಕ್ತ ಕ್ರಮವಲ್ಲ. ಹಾಗೆಂದೊಡನೆ ಕರ್ನಾಟಕದ ಶಿಕ್ಷಣ ಪದ್ಧತಿಯಲ್ಲಿ ಕನ್ನಡ ಭಾಷಾ ಮಾಧ್ಯಮವನ್ನು ಜಾರಿಗೊಳಿಸುವ ಸಾಧ್ಯತೆಗಳೇ ಇಲ್ಲ ಎಂದೇನಿಲ್ಲ. ಸಂವಿಧಾನಕ್ಕೆ ಅಪಚಾರವಾಗದಂತೆ ಕನ್ನಡ ಮಾಧ್ಯಮವನ್ನು ಜಾರಿಗೊಳಿಸುವ ಸಾಧ್ಯತೆಗಳನ್ನು ಸರ್ಕಾರಗಳು ಅನ್ವೇಷಿಸಬೇಕಾಗಿದೆ. ಡಾ.ಕೆ.ವಿ. ನಾರಾಯಣ ಮೊದಲಾದ ಭಾಷಾಚಿಂತಕರು ಸಂವಿಧಾನೋಕ್ತವೇ ಆಗಿರುವ - ಸಮಾನ ಶಿಕ್ಷಣ ನೀತಿಯೇ ಮೊದಲಾದ ಅಂತಹ ಸಾಧ್ಯತೆಗಳನ್ನು ಈಗಾಗಲೇ ತೋರಿಸಿಕೊಟ್ಟಿರುವರು.
ಕುವೆಂಪು ಅವರು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದಾಗ ‘ಕನ್ನಡದ ವಿಷಯ ಬಂದಾಗ ನಾನು ಸರ್ವಾಧಿಕಾರಿ ಧೋರಣೆಯವನು’ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಇಂಥದೊಂದು ದೃಢಸಂಕಲ್ಪ ಸರ್ಕಾರಗಳಿಗೆ ಮತ್ತು ನಿರ್ದಿಷ್ಟವಾಗಿ ಪರಿಷತ್ತಿಗೆ ಇಂದು ಬೇಕಾಗಿದೆ.
ಬೆರಳೆಣಿಕೆಯಷ್ಟು ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರಿಂದ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಹುಟ್ಟು ಪಡೆಯಿತು. ಆದರೆ ನವೋದಯದ ಕಾಲದ ನಂತರ ಕಸಾಪ ‘ರಾಜಾಶ್ರಯ’ಕ್ಕೆ ಸಿಲುಕಿ ಕನ್ನಡ ಸಾಹಿತ್ಯ ಚಿಂತನೆಯೊಂದಿಗಿನ ತನ್ನ ಜೀವಂತ ಸಂಬಂಧವನ್ನೇ ಕಳೆದುಕೊಂಡು ಸ್ಥಾವರವಾಯಿತು.
ಅರವತ್ತರ ದಶಕದಲ್ಲಿ ಸಮ್ಮೇಳನಾಧ್ಯಕ್ಷರಾಗಿದ್ದ ಪ್ರಗತಿಶೀಲ ಕಾದಂಬರಿಕಾರ ಅ.ನ. ಕೃಷ್ಣರಾಯರು ಹಾಗೂ ಪರಿಷತ್ತಿನ ಅಂದಿನ ಅಧ್ಯಕ್ಷರಾಗಿದ್ದ ಬಿ. ಶಿವಮೂರ್ತಿಶಾಸ್ತ್ರಿಗಳ ನಡುವಣ ವೈಮನಸ್ಯ, ಧರ್ಮಸ್ಥಳದ ಸಮ್ಮೇಳನದಲ್ಲಿ ನವ್ಯಕವಿ ಗೋಪಾಲಕೃಷ್ಣ ಅಡಿಗರು ಅಧ್ಯಕ್ಷರಾಗಿದ್ದಾಗ ಸ್ಫೋಟಿಸಿದ ವಿವಾದ, ತರುವಾಯ ಬೆಂಗಳೂರಿನಲ್ಲಿ ಪಿ. ಲಂಕೇಶ್, ಕಿ.ರಂ. ನಾಗರಾಜ, ಶೂದ್ರ ಶ್ರೀನಿವಾಸ್, ಡಿ.ಆರ್. ನಾಗರಾಜ್ ಮೊದಲಾದವರ ಮುಂದಾಳತ್ವದಲ್ಲಿ ನಡೆದ ಜಾಗೃತ ಸಾಹಿತ್ಯ ಸಮ್ಮೇಳನದ ಬೆಳವಣಿಗೆಗಳು ಇವೆಲ್ಲ ಕಸಾಪ ಮತ್ತು ಕನ್ನಡ ಸಾಹಿತ್ಯ ಸಂಸ್ಕೃತಿಯ ನಡುವಣ ಬಿರುಕುಗಳನ್ನು ಮತ್ತು ಚಲನಶೀಲವಾದ ಸಾಹಿತ್ಯ ಸಂವೇದನೆಯೊಂದಿಗೆ ಸ್ಪಂದಿಸಲಾರದ ಪರಿಷತ್ತಿನ ಜಡತ್ವವನ್ನು ತೋರಿಸುವ ನಿದರ್ಶನಗಳಾಗಿವೆ.
ಈ ಬೆಳವಣಿಗೆಗಳ ನಂತರದ ಕಾಲದಿಂದ ಇಂದಿನ ತನಕ ಅವಲೋಕಿಸಿದರೆ ಪರಿಷತ್ತಿನೊಂದಿಗೆ ಯಾವುದೇ ಜೀವಂತ ಸಂಬಂಧ ಹೊಂದಿರದ ನಾನಾ ಬಗೆಯ ಸಾಹಿತಿಗಳ ಮತ್ತು ಸಂಸ್ಕೃತಿ ಚಿಂತಕರ ಹಲವು ಗುಂಪುಗಳು ಕನ್ನಡ ಪರಿಸರದಲ್ಲಿ ಬಂದು ಹೋಗಿವೆ ಮತ್ತು ಇಂದಿಗೂ ಕ್ರಿಯಾಶೀಲವಾಗಿವೆ. ದೇವನೂರ ಮಹಾದೇವರ ಇಂದಿನ ನಿಲುವಾದರೂ ವಿಘಟನೆಗೊಂಡ ಈ ಸಂಬಂಧವನ್ನು ಮತ್ತು ಜಡಗೊಂಡ ಕಸಾಪದ ಸಂಕಲ್ಪಶಕ್ತಿಯನ್ನು ಪುನಃ ಜೀವಂತಗೊಳಿಸುವ ಪ್ರಯತ್ನವೆಂದು ಪರಿಷತ್ತಿನಂತಹ ಸಂಸ್ಥೆ ಭಾವಿಸಿಕೊಳ್ಳಬೇಕಾಗಿದೆ. ಅವರು ಪರಿಷತ್ತಿನ ಕನ್ನಡಪರ ಕಾಳಜಿಯನ್ನು ಬೆಂಬಲಿಸಲು ಆ ನಿಲುವನ್ನು ತೆಗೆದುಕೊಂಡಿರುವರೇ ವಿನಾ ಪರಿಷತ್ತಿನ ಬಗ್ಗೆ ಜುಗುಪ್ಸೆಗೊಂಡಲ್ಲ.
ಪರಿಷತ್ತಿನಂತಹ ಘನತೆವೆತ್ತ ಸಂಸ್ಥೆಯ ಬೇಡಿಕೆಗಳಿಗೆ ಸರ್ಕಾರಗಳು ಒಂದೆಡೆ ಜಾಣ ಕಿವುಡುತನ ತೋರಿಸುತ್ತ ಮತ್ತೊಂದೆಡೆ ಕೋಟ್ಯಂತರ ರೂಪಾಯಿಗಳನ್ನು ಪ್ರಾಯೋಜಿಸಿ ಸಮ್ಮೇಳನ ನಡೆಸುತ್ತಿರುವುದು ತನಗೆ ಎಸಗುತ್ತಿರುವ ಅವಮಾನವೆಂದು ಪರಿಷತ್ತು ಭಾವಿಸಬೇಕಾಗಿದೆ. ಕಸಾಪ, ಆರು ಕೋಟಿ ಕನ್ನಡಿಗರ ಆಸಕ್ತಿಯ ಕೇಂದ್ರವಾಗಿದೆ ಎಂಬ ದೂರದೃಷ್ಟಿಯಿಂದ ಸರ್ಕಾರಗಳು ಅನುದಾನ ನೀಡುತ್ತವೆಯೇ ವಿನಾ ಪರಿಷತ್ತಿನ ಕನ್ನಡಪರವಾದ ಕಾಳಜಿಗಳನ್ನು ಸಾಕಾರಗೊಳಿಸುವ ಉದ್ದೇಶದಿಂದಲ್ಲ ಎಂಬುದನ್ನು ಅದು ಮರೆತಂತಿದೆ.
ದೇವನೂರರ ನಿಲುವಾದರೂ ಕನ್ನಡಿಗರಿಗೆ ಹಿಡಿದಿರುವ ಈ ವಿಸ್ಮೃತಿಯನ್ನು ಹೋಗಲಾಡಿಸಿ ಪರಿಷತ್ತಿನ ಘನತೆಯನ್ನು ಉಳಿಸುವ ಪ್ರಯತ್ನವಾಗಿದೆ. ಕನ್ನಡಿಗರು ಇದನ್ನು ದೇವನೂರರ ವ್ಯಕ್ತಿಗತ ನಿಲುವು ಎಂದು ಭಾವಿಸದೆ ಕನ್ನಡತನದ ಉಳಿವಿಗಾಗಿ ಈ ನಿಲುವೇ ಎಲ್ಲ ಸಾಹಿತಿಗಳಿಗೂ ಮತ್ತು ಪರಿಷತ್ತಿಗೂ ಮೇಲ್ಪಂಕ್ತಿಯಾಗಬೇಕಾಗಿದೆ ಎಂದು ನಂಬುವುದೇ ಉಚಿತವೆನಿಸುತ್ತದೆ.
ಇನ್ನು ದೇವನೂರರು ತ್ಯಜಿಸಿದ ಸರ್ವಾಧ್ಯಕ್ಷ ಸ್ಥಾನದಲ್ಲಿ ಕೂರುವ ‘ಪ್ಲಾನ್ ಬಿ’ ಆಹ್ವಾನಿತ ಸಾಹಿತಿ ತಾನೊಬ್ಬ ಕನ್ನಡ ಮಾಧ್ಯಮ ವಿರೋಧಿ ಎಂಬುದನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಂತೆ ಆಗುತ್ತದೆ ಎಂಬ ಬೊಳುವಾರು ಅವರ ಆತಂಕ ಅನವಶ್ಯಕ. ಅಂಥದೊಂದು ಕಳಂಕ ಅಥವಾ ಮುಜುಗರವನ್ನು ನಿವಾರಿಸುವ ಶಕ್ತಿ ಪರಿಷತ್ತಿಗುಂಟು. ಕಸಾಪ, ‘ರಾಜಾಶ್ರಯ’ದ ತೆಕ್ಕೆಗೆ ಬರುವ ಮುನ್ನ ಮೊದಲ ಸಮ್ಮೇಳನಾಧ್ಯಕ್ಷರಾಗಿದ್ದ ಎಚ್.ವಿ. ನಂಜುಂಡಯ್ಯನವರ ಕಾಲದಿಂದ ಹಿಡಿದು ಬಹುಕಾಲದವರೆಗೂ ಒಂದು ಪುಟ್ಟ ಕೋಣೆಯಲ್ಲಿ ಈ ಹಿಂದೆ ಹೇಳಿದಂತೆ ಕೆಲವು ಬೆರಳೆಣಿಕೆಯಷ್ಟು ಸಾಹಿತ್ಯಾಸಕ್ತರ ನಡುವೆ ಸಮ್ಮೇಳನ ನಡೆಸಿತ್ತು.
ಇನ್ನು ಮುಂದೆಯೂ ಅದೇ ರೀತಿ (ಮಹಾದೇವ ಅವರು ಹೇಳಿರುವಂತೆ ಸಮ್ಮೇಳನವನ್ನೇ ಬರಖಾಸ್ತು ಮಾಡಲಾಗದಿದ್ದರೂ) ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಜಾರಿಯಾಗುವವರೆಗೂ ಕೊನೆಯ ಪಕ್ಷ ಸರ್ಕಾರದ ಅನುದಾನವನ್ನು ಪಡೆಯದೆ ಸಮ್ಮೇಳನಗಳನ್ನು ಸರಳವಾಗಿ, ಸಾಂಕೇತಿಕವಾಗಿ ನಡೆಸಲು ನಿರ್ಧರಿಸಿದರೆ ಪರಿಷತ್ತಿನ ಹಾಗೂ ಸಾಹಿತಿಗಳ ಮರ್ಯಾದೆ ಉಳಿಯುತ್ತದೆ. ಜಗತ್ತಿನ ಯಾವ ಮೂಲೆಯಲ್ಲೂ ಸಾಹಿತ್ಯದ ಹೆಸರಿನಲ್ಲಿ ಇಷ್ಟು ದೊಡ್ಡಮಟ್ಟದ ಹಬ್ಬ ನಡೆಯುವುದಿಲ್ಲ ಎಂಬ ಹೆಗ್ಗಳಿಕೆ ಸಮ್ಮೇಳನಕ್ಕಿರಬಹುದು. ಆದರೆ ನಮ್ಮ ನಾಡಿನಲ್ಲಿ ಕನ್ನಡವನ್ನು ಅನ್ನ ನೀಡುವ ಭಾಷೆಯನ್ನಾಗಿ ಬೆಳೆಸದೆ ಬರಿದೆ ಸಮ್ಮೇಳನದ ಸಂಭ್ರಮ ಆಚರಿಸುವುದು ವಿಡಂಬನೆಯಾಗುತ್ತದೆ. ‘ಹೊಟ್ಟೆಗಿಲ್ಲದವನು ಜುಟ್ಟಿಗೆ ಮಲ್ಲಿಗೆ ಹೂ’ ಮುಡಿವ ಗಾದೆಯನ್ನು ನೆನಪಿಸುತ್ತದೆ.
ಕನ್ನಡದ ಉಳಿವಿಗಾಗಿ ಕನ್ನಡಿಗರು ತಮ್ಮ ಮುಡಿಗೇರಿರುವ ಇಂತಹ ಹೆಗ್ಗಳಿಕೆಗಳನ್ನು ತ್ಯಾಗ ಮಾಡಬೇಕಿದೆ. ಈ ತ್ಯಾಗದಿಂದ ಪರಿಷತ್ತಿನ ಅಥವಾ ದೇವನೂರರ ಬೇಡಿಕೆ (ಕನ್ನಡ ಮಾಧ್ಯಮದ ಬೇಡಿಕೆ) ಒಂದೇ ಸಲಕ್ಕೆ ಈಡೇರದಿದ್ದರೂ ಸರ್ಕಾರವು ಕನ್ನಡ ಮಾಧ್ಯಮದ ಜಾರಿಗಾಗಿ ದೃಢಸಂಕಲ್ಪ ಮಾಡಲು ಇದೇ ಒಂದು ಪ್ರೇರಣೆಯಾದೀತು. ದೇವನೂರರ ನಿಲುವನ್ನು ಅವರ ಮಟ್ಟಿಗೇ ಬಿಟ್ಟು ಬಿಡದೆ ಅದನ್ನು ಒಂದು ಚಳವಳಿಯ ರೂಪಕ್ಕೆ ಕೊಂಡೊಯ್ಯುವ ಪ್ರಕ್ರಿಯೆ ಪ್ರಾರಂಭವಾದೀತು. ಮತ್ತು ಪರಿಷತ್ತಿನಂತಹ ದೊಡ್ಡ ಸಂಸ್ಥೆ ಪ್ರತಿವರ್ಷ ಮತ್ತೆ ಮತ್ತೆ ಅದದೇ ಅಹವಾಲುಗಳನ್ನು ಸರ್ಕಾರದ ಮುಂದೆ ಮಂಡಿಯೂರಿ ಬಿನ್ನವಿಸುತ್ತ ತನ್ನ ದೈನ್ಯತೆಯನ್ನು ಪ್ರದರ್ಶಿಸುವ ದುರ್ವಾರ್ತೆಯನ್ನು ಕೇಳುವುದು ಕನ್ನಡಿಗರಿಗೆ ತಪ್ಪೀತು.
- ಡಾ.ಟಿ.ಎನ್. ವಾಸುದೇವಮೂರ್ತಿ,
ಬೆಂಗಳೂರು
* * *
ಕೋಟಾ ಹೆಸರಿನಲ್ಲಿ ಆಯ್ಕೆ ಸರಿಯೇ?
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ದಲಿತ ಸಾಹಿತಿಯೊಬ್ಬರನ್ನು ಆಯ್ಕೆ ಮಾಡಬೇಕೆನ್ನುವ ಬೇಡಿಕೆ ಹಿಂದಿನಿಂದಲೂ ಇತ್ತು. 2015ರ ಆರಂಭಕ್ಕೆ ಶ್ರವಣಬೆಳಗೊಳದಲ್ಲಿ ನಡೆಯಬೇಕಿರುವ 81ನೇ ಸಾಹಿತ್ಯ ಸಮ್ಮೇಳನದ
ಸಂದರ್ಭದಲ್ಲಿ ಇದಕ್ಕೆ ಸ್ಪಂದಿಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ದೇವನೂರ ಮಹಾದೇವ ಅವರನ್ನು ಸಂಪರ್ಕಿಸಿರುವ ವಿಚಾರ ಕುರಿತು ಈಗ ಚರ್ಚೆಗಳು ನಡೆಯುತ್ತಿವೆ. ಮಹಾದೇವ ಅವರು ತಮ್ಮದೇ ಧಾಟಿಯಲ್ಲಿ ಸಾಹಿತ್ಯ ಪರಿಷತ್ತಿನ ಈ ಕೋರಿಕೆಯನ್ನು ತಿರಸ್ಕರಿಸಿದ್ದಾರೆ. ಮಹಾದೇವ ಅವರು ಕನ್ನಡಕ್ಕೆ ಸಂಬಂಧಿಸಿದಂತೆ ಎತ್ತಿರುವ ಪ್ರಶ್ನೆಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಹೆಣಗಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಮಹಾದೇವ ಅವರಂತಹ ಪ್ರತಿಭಾವಂತ ಸಾಹಿತಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸುವುದು ನಿಜಕ್ಕೂ ಸ್ವಾಗತಾರ್ಹ. ಆದರೆ ಅವರನ್ನು ಸಂಪರ್ಕಿಸಿದ ಕ್ರಮ, ಹಿನ್ನೆಲೆ ಸರಿಯಲ್ಲ. ಸಾಮಾನ್ಯವಾಗಿ ಪ್ರತಿವರ್ಷ ನಡೆಯುವ ಅಧ್ಯಕ್ಷರ ಸಹಜವಾದ ಆಯ್ಕೆಯ ಪ್ರಕ್ರಿಯೆಯಲ್ಲಿ ಅವರನ್ನು ಆಯ್ಕೆ ಮಾಡಿದ್ದರೆ ಸಾಹಿತ್ಯ ಪರಿಷತ್ತಿಗೂ ಮತ್ತು ಮಹಾದೇವ ಅವರಿಗೂ ನಿಜವಾದ ಗೌರವ ಸಲ್ಲುತ್ತಿತ್ತು.
ಮಹಾದೇವ ಅವರು ಬರೆದಿರುವುದು ಕೆಲವೇ ಕೃತಿಗಳಾದರೂ, ಅದರ ಮೂಲಕ ಇಡೀ ಸಾಹಿತ್ಯ ಜಗತ್ತು ಬೆರಗುಗೊಳ್ಳುವಂತೆ ಮಾಡಿದ್ದಾರೆ. ಹಾಗಾಗಿಯೇ ಮಹಾದೇವ ನಮ್ಮ ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಸ್ಥಾನ ಪಡೆದ ಬರಹಗಾರ. ಅಂತಹ ಒಬ್ಬ ಸಾಹಿತಿಯನ್ನು ‘ದಲಿತ ಬರಹಗಾರ’ ಎನ್ನುವ ಹಣೆಪಟ್ಟಿಯಲ್ಲಿ, ಅನುಕಂಪದ ಅಥವಾ ಕೋಟಾ ವ್ಯಾಪ್ತಿಯಲ್ಲಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವುದು ಮಹಾದೇವ ಅವರಿಗೆ ಅವಮಾನ ಮಾಡಿದಂತೆ. ಈ ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಳ್ಳುವುದು ಅಥವಾ ಬಿಡುವುದು ಅವರಿಗೆ ಸೇರಿದ ವಿಚಾರ. ಆದರೆ ಸಾಹಿತ್ಯ ಪರಿಷತ್ತು, ಸಮ್ಮೇಳನ ಅಧ್ಯಕ್ಷರನ್ನು ಆಯ್ಕೆ ಮಾಡಲು ಹೊರಟ ರೀತಿ ಸರಿಯೇ ಎಂದು ಪ್ರಜ್ಞಾವಂತರಾದವರು ಪ್ರಶ್ನಿಸಿಕೊಳ್ಳುವುದು ಉಚಿತ.
- ಶಿವಾಜಿ ಗಣೇಶನ್,
ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.