ನವದೆಹಲಿ (ಪಿಟಿಐ): ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಬಂಧನದಿಂದ ಉದ್ಭವಿಸಿರುವ ರಾಜತಾಂತ್ರಿಕ ಬಿಕ್ಕಟ್ಟನ್ನು ಶಮನಗೊಳಿಸಲು ಭಾರತ ಮತ್ತು ಅಮೆರಿಕ ಕಸರತ್ತು ನಡೆಸಿದ್ದರೂ ಪ್ರಕರಣ ಕಗ್ಗಂಟಾಗಿಯೇ ಮುಂದುವರಿದಿದೆ.
ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ರಾಜತಾಂತ್ರಿಕ ಸಂಬಂಧವನ್ನು ಪರಸ್ಪರ ಗೌರವಿಸುವ ಮತ್ತು ಕಾಪಾಡಿಕೊಂಡು ಹೋಗುವ ದಿಸೆಯಲ್ಲಿ ಪ್ರಕರಣವನ್ನು ಅಂತ್ಯಗೊಳಿಸಲು ಯತ್ನಿಸುತ್ತಿರುವುದಾಗಿ ಎರಡೂ ರಾಷ್ಟ್ರಗಳು ಹೇಳಿಕೊಂಡಿವೆ. ಆದರೂ, ಮುಸುಕಿನ ಗುದ್ದಾಟ ಮುಂದುವರಿದಿದೆ.
ರಾಜತಾಂತ್ರಿಕ ರಕ್ಷಣೆ ಒದಗಿಸುವ ಉದ್ದೇಶದಿಂದ ಭಾರತವು ದೇವಯಾನಿ ಅವರನ್ನು ವಿಶ್ವಸಂಸ್ಥೆಗೆ ವರ್ಗಾಯಿಸಿದೆ.
ತಾರ್ಕಿಕ ಅಂತ್ಯ: ‘ದೇವಯಾನಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಂಡುಹಿಡಿಯಲು ಹಲವು ಹಂತಗಳಲ್ಲಿ ರಾಜತಾಂತ್ರಿಕ ಮಾರ್ಗಗಳ ಮೂಲಕ ಮಾತುಕತೆ ನಡೆಯುತ್ತಿದೆ. ಆದರೆ, ಮಾರ್ಗಗಳಲ್ಲಿ ಅಡೆತಡೆಗಳು ಎದುರಾಗಿವೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ತಿಳಿಸಿದ್ದಾರೆ.
ಭಾರತದೊಂದಿಗೆ ಮಾತುಕತೆ ನಡೆಯುತ್ತಿರುವುದಾಗಿ ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರರೂ ಸ್ಪಷ್ಟಪಡಿಸಿದ್ದಾರೆ. ‘ರಾಜತಾಂತ್ರಿಕ ಅಧಿಕಾರಿಯನ್ನು ಬಂಧಿಸುವ ಮೂಲಕ ಅಮೆರಿಕ ನಮ್ಮ ನಂಬುಗೆ ಹುಸಿಗೊಳಿಸಿದೆ. ಮೈತ್ರಿ ಧರ್ಮ ಪಾಲಿಸದಿರುವುದು ಕಳವಳಕಾರಿ’ ಎಂದಿದ್ದಾರೆ.
ಸೌದಿ ರಾಜಕುಮಾರನ ಪ್ರಕರಣದ ತಳಕು: ದೇವಯಾನಿ ಪ್ರಕರಣಕ್ಕೆ 1982ರಲ್ಲಿ ನಡೆದ ಸೌದಿ ರಾಜಕುಮಾರ ಅಬ್ದುಲ್ ಅಜೀಜ್ ಪ್ರಕರಣವನ್ನು ಹೋಲಿಕೆ ಮಾಡಲಾಗುತ್ತಿದೆ.
ಫ್ಲಾರಿಡಾದ ಡೇಡ್ ಪ್ರಾಂತ್ಯದಲ್ಲಿ ಈಜಿಪ್ಟ್ ಮಹಿಳೆಯೊಬ್ಬಳನ್ನು ಅವಳ ಇಚ್ಛೆಗೆ ವಿರುದ್ಧವಾಗಿ ಸೌದಿ ರಾಜಕುಮಾರ ಬಂಧಿಸಿಟ್ಟಿದ್ದ. ಆಗ, ಆತನಿಗೆ ರಾಜತಾಂತ್ರಿಕ ರಕ್ಷಣೆ ಅಥವಾ ವಿನಾಯ್ತಿ ಇರಲಿಲ್ಲ. ಮೂರು ವಾರಗಳ ನಂತರ ಸೌದಿ ಆತನಿಗೆ ರಾಜತಾಂತ್ರಿಕ ರಕ್ಷಣೆ ಒದಗಿಸಿತ್ತು.
ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ರಾಜಕುಮಾರನಿಗೆ ರಾಜತಾಂತ್ರಿಕ ರಕ್ಷಣೆ ಇದೆ ಎಂಬ ವಾದವನ್ನು ನ್ಯಾಯಾಲಯ ತಳ್ಳಿ ಹಾಕಿತ್ತು. ಆದರೂ ಅಮೆರಿಕ ಸರ್ಕಾರ ಆಗ ಪೂರ್ವಾನ್ವಯಗೊಳ್ಳುವಂತೆ ರಾಜತಾಂತ್ರಿಕ ರಕ್ಷಣೆ ನೀಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.