ಬ್ರಹ್ಮಾವರ: ಭಗವಂತ ಮೊದಲು ಪ್ರಜೆಗಳನ್ನು ಸೃಷ್ಟಿಸಿ, ನಂತರ ಆಯಾಯ ಜನರ ಗುಣ ಕರ್ಮಗಳಿಗೆ ಅನುಗುಣವಾಗಿ ವರ್ಣ ವಿಭಜನೆ ಮಾಡಲಾಯಿತು. ವರ್ಣಗಳ ಆಧಾರದಲ್ಲಿ ಜಾತಿ ರಚನೆಯಾಗಿದೆ. ಆದರೆ ಎಲ್ಲಿಯೂ ಕೂಡ ಯಾವ ಜಾತಿ ಮೇಲೆ ಕೀಳು ಎನ್ನುವುದನ್ನು ತಿಳಿಸಿಲ್ಲ. ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂದು ಪಂಚಾಂಗಕರ್ತ ಹಾಲಾಡಿಯ ವಿದ್ವಾನ್ ವಾಸುದೇವ ಜೋಯಿಸ್ ಹೇಳಿದರು.
ಹಂಗಾರಕಟ್ಟೆ ಶ್ರೀರಾಮ ಮಂದಿರದಲ್ಲಿ ಶನಿವಾರ ಅವರು ಐರೋಡಿ ಬಾಳ್ಕುದ್ರು ಪರಿಸರದ ವಿಪ್ರ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದರು.
ಐರೋಡಿ ಗ್ರಾ.ಪಂ. ಅಧ್ಯಕ್ಷ ಕಸ್ತೂರಿ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಹರೀಶ್ ಮಧ್ಯಸ್ಥ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಮಾಜದ ಬಾಳ್ಕುದ್ರು ಸುಬ್ರಹ್ಮಣ್ಯ ಆಚಾರ್ಯ ಅವರಿಗೆ ಸ್ವಉದ್ಯೋಗಕ್ಕಾಗಿ ಲ್ಯಾಪ್ಟಾಪ್ ಮತ್ತು ಪ್ರಿಂಟರ್, ಐರೋಡಿ ಸುಬ್ರಹ್ಮಣ್ಯ ಹೆಬ್ಬಾರ್ ಇವರ ಮನೆಗೆ ಸೋಲಾರ್ ಲೈಟ್ ಕೊಡುಗೆ ಮತ್ತು ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಕಾರ್ತಿಕ್ ಹೆಬ್ಬಾರ್ ಅವರಿಗೆ ವಿದ್ಯಾನಿಧಿ ವಿತರಿಸಲಾಯಿತು.
ವಿಪ್ರ ವೇದಿಕೆಯ ವತಿಯಿಂದ ಹಿರಿಯರಾದ ಬಿ.ಅನಂತನಾರಾಯಣ ಐತಾಳ್, ಸೀತಾರಾಮ ಕಲ್ಕೂರ ದಂಪತಿಗಳು ಮತ್ತು ಮೀನಾಕ್ಷಿಯಮ್ಮ, ಬಿ.ಪಿ.ಲಲಿತಮ್ಮ ಇವರನ್ನು ಗೌರವಿಸಲಾಯಿತು.
ರವಿರಾಜ ಅಧಿಕಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಅಧ್ಯಕ್ಷ ರಾಮನಾಥ ಅಲ್ಸೆ ಸ್ವಾಗತಿಸಿದರು. ಕಾರ್ಯದರ್ಶಿ ವಿಘ್ನೇಶ್ವರ ಅಡಿಗ ವಂದಿಸಿದರು. ರಾಮದೇವ ಹಂದೆ ಕಾರ್ಯಕ್ರಮ ನಿರೂಪಿಸಿದರು.