ಬೆಂಗಳೂರು: `ಧಾರ್ಮಿಕ ಆಚರಣೆಗೆ ತನ್ನದೇ ಆದ ಶಕ್ತಿ ಹಾಗೂ ಮಹತ್ವವಿದ್ದು, ಅದು ದೇಶಭಕ್ತಿಗೆ ಕೂಡ ಪ್ರೇರೇಪಣೆ ನೀಡುತ್ತದೆ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ತಿಳಿಸಿದರು.
ವಿದ್ಯಾರಣ್ಯ ಯುವಕ ಸಂಘ ನಗರದ ಎಪಿಎಸ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿರುವ `49ನೇ ಬೆಂಗಳೂರು ಗಣೇಶ ಉತ್ಸವ~ವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
`ಧಾರ್ಮಿಕ ಆಚರಣೆಗಳಿಂದ ದೇಶದ ಸಂಸ್ಕೃತಿ ಉಳಿದಿದೆ. ಗಣೇಶ ಉತ್ಸವ ದೇಶಭಕ್ತಿಯ ಧ್ಯೋತಕ ಕೂಡ. ಇಂತಹ ಧಾರ್ಮಿಕ ಕಾರ್ಯಗಳಲ್ಲಿ ಪ್ರತಿ ಪ್ರಜೆಯೂ ಪಾಲುದಾರರಾಗಬೇಕಿದೆ. ಎಲ್ಲರೂ ಒಂದು ಎಂಬ ಭಾವನೆಯನ್ನು ಧಾರ್ಮಿಕ ಆಚರಣೆಗಳು ಮೂಡಿಸುತ್ತವೆ~ ಎಂದರು.
`ಸಂಘ ವಿಜೃಂಭಣೆಯಿಂದ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸದ ವಿಚಾರ. ಸಮಾಜ ಮುನ್ನಡೆಯಲು ಒಳ್ಳೆಯ ಸಂಘಟನೆಗಳ ಅವಶ್ಯಕತೆ ಇದೆ. ದೇಶದ ಉತ್ತಮ ಭವಿಷ್ಯ ನಿರ್ಮಾಣ ಮಾಡುವ ಕೆಲಸದಲ್ಲಿ ಎಲ್ಲರೂ ಮುಂದಾಗೋಣ~ ಎಂದರು.
ಗಾಯಕಿ ಉಷಾ ಉತ್ತುಪ್ ಜನರನ್ನು ರಂಜಿಸಿದರು. ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ, ಶಾಸಕ ಎಲ್. ರವಿಸುಬ್ರಹ್ಮಣ್ಯ, ಪಾಲಿಕೆ ಸದಸ್ಯರಾದ ಕಟ್ಟೆ ಸತ್ಯನಾರಾಯಣ, ಪಿ.ಎನ್.ಸದಾಶಿವ ಉಪಸ್ಥಿತರಿದ್ದರು.
ಬಗೆ ಬಗೆಯ ಸ್ವಾದ: ಇದೇ ಸಂದರ್ಭದಲ್ಲಿ ಕರಾವಳಿ, ಮಲೆನಾಡು, ಹಳೆ ಮೈಸೂರು, ಹೈದರಬಾದ್ ಕರ್ನಾಟಕ, ಉತ್ತರ ಕರ್ನಾಟಕ ಹಾಗೂ ಬಯಲು ಸೀಮೆಯ ತಿನಸುಗಳ ಮಾರಾಟ ನಡೆಯಿತು. ಖ್ಯಾತ ಹೋಟೆಲ್ಗಳು ಉತ್ಸವದಲ್ಲಿ ಪಾಲ್ಗೊಂಡಿದ್ದವು.