ಹುಮನಾಬಾದ್: ಬೀದರ್- ಗುಲ್ಬರ್ಗ ರಾಜ್ಯ ಹೆದ್ದಾರಿಯ ಮೇಲೆ ಎರಡು ಕೈಬಿಟ್ಟು ದ್ವಿಚಕ್ರವಾಹನ ವೇಗ ಓಡಿಸುತ್ತಾನೆ. ನೋಡ ನೋಡುತ್ತಲೇ ವಾಹನದ ಮೇಲೆ ಮಲಗುತ್ತಾನೆ. ಪದ್ಮಾಸನ ಹಾಕಿ ಎಲ್ಲರಿಗೂ ಕೈಜೋಡಿಸಿ ನಮಸ್ಕರಿಸುತ್ತಾನೆ. ಓಡುವ ವಾಹನದ ಮೇಲೆ ಜೀವದ ಹಂಗು ತೊರೆದು ಎದ್ದು ನಿಲ್ಲುವುದು ಮೊದಲಾದ ತಾಲೀಮ್ ಮಾಡುವ ಈತ ತಾಲ್ಲೂಕಿನ ದುಬಲಗುಂಡಿ ಗ್ರಾಮದ ಬಸವತೀರ್ಥ ವಿದ್ಯಾಪೀಠ ಶಾಲೆಯಲ್ಲಿ ಪ್ರಸಕ್ತವರ್ಷ 10ನೇ ವರ್ಗದಲ್ಲಿ ಓದುತ್ತಿರುವ 16ವರ್ಷದ ಅಂಬರೀಶ.
ತನ್ನ ಮೇಲೆ ತಂದೆ ಹೊಂದಿರುವ ಆತ್ಮವಿಶ್ವಾಸ, ಪ್ರೀತಿ ತುಂಬಿದ ತಾಯಿಯ ಆಶಿರ್ವಾದಗಳೆರಡೂ ತನ್ನ ಈವರೆಗಿನ ಸಾಧನೆ ಪ್ರೇರಣೆ ಎನ್ನುತ್ತಾನೆ ಸದ್ಯ ಜೇವರ್ಗಿ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ವಾಹನ ಚಾಲಕ ಆಗಿರುವ ರವೀಂದ್ರನಾಥ ಅವರ ಪುತ್ರ ಅಂಬರೀಶ.
ಜೀವನದಲ್ಲಿ ಏನಾದರೂ ವಿಶೇಷವಾದದ್ದನ್ನು ಸಾಧಿಸಿ ತೋರಿಸಬೇಕು ಎಂಬ ಉತ್ಕಟ ಬಯಕೆ. ಆ ಏಕೈಕ ಕಾರಣಕ್ಕಾಗಿ ಯಾರಿಂದಲೂ ತರಬೇತಿ ಪಡೆಯದೇ ಓದಿನ ಬಳಿಕ ಅದರಲ್ಲೂ ತಮ್ಮ ಶಾಲೆ ಸೋಮವಾರ ಬಿಡುವು ಇರುವ ಹಿನ್ನೆಲೆಯಲ್ಲಿ ಆ ಇಡೀ ದಿನವನ್ನು ತರಬೇತಿ ಸಂಬಂಧ ಬಳಸಿಕೊಳ್ಳುವುದಾಗಿ ಅಂಬರೀಶ ಹೇಳುತ್ತಾರೆ. ದ್ವಿಚಕ್ರವಾಹನದ ಮೇಲೆ ವಿಶಿಷ್ಟ ಬಗೆಯಲ್ಲಿ ತಾಲೀಮ್ ಮಾಡಿ ಊರ ಹೆಸರು ರಾಜ್ಯ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕೆಂಬ ಉದ್ದೇಶ ನನ್ನದು. ಅದಕ್ಕಾಗಿ ಗ್ರಾಮದ ಗಣ್ಯರ ಪ್ರೋತ್ಸಾಹದ ನಿರೀಕ್ಷೆಯಲ್ಲಿ ಇರುವುದಾಗಿ ಹೇಳುತ್ತಾನೆ.
ಗ್ರಾಮದಲ್ಲಿಯೇ ಇರುವ ಜಿಲ್ಲಾ ಪಂಚಾಯಿತಿ ಸದಸ್ಯೆ ಚಂದ್ರಮ್ಮ ಶಿವರಾಜ ಗಂಗಶೆಟ್ಟಿ, ಕ್ಷೇತ್ರದ ಶಾಸಕ ರಾಜಶೇಖರ ಪಾಟೀಲ ಮೊದಲಾದ ಎಲ್ಲ ಗಣ್ಯರು ಈತನ ಸಾಧನೆಗೆ ಪೂರಕ ಪ್ರೋತ್ಸಾಹ ನೀಡಬೇಕಾಗಿದೆ.