ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮದ ಹಾದಿ ಹಿಡಿಯಿರಿ: ಸಿಎಂ

Last Updated 19 ಫೆಬ್ರುವರಿ 2012, 8:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಪ್ರಜಾತಂತ್ರದ ಅಮಲಿನಲ್ಲಿ ತೇಲುತ್ತಿರುವ ಅನೇಕರು ನಮ್ಮ ಆಚಾರ-ವಿಚಾರಕ್ಕೆ ತಿಲಾಂಜಲಿ ಇಡುತ್ತಿದಾರೆ. ಇದನ್ನು ಬಿಟ್ಟು ಧರ್ಮದ ಹಾದಿ ಯಲ್ಲಿ ನಡೆಯಲು ಮುಂದಾಗಬೇಕು~ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಸಲಹೆ ನೀಡಿದರು.

ನಗರದ ಸಿದ್ಧಾರೂಢ ಮಠದಲ್ಲಿ ಸಿದ್ಧಾರೂಢ ಶ್ರೀಗಳ 175ನೇ ಜಯಂತಿ ಹಾಗೂ ಗುರುನಾಥಾರೂಢ ಶ್ರೀಗಳ ಜಯಂತಿ ಶತಮಾನೋತ್ಸವದ ಅಂಗ ವಾಗಿ ನಡೆಯುತ್ತಿರುವ ವಿಶ್ವ ವೇದಾಂತ ಪರಿಷತ್‌ನ ಶನಿವಾರದ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

`ಆಧುನಿಕತೆಯ ಗುಂಗಿನಲ್ಲಿ ಜನರು ಧರ್ಮವನ್ನು ಮರೆಯುತ್ತಿದ್ದಾರೆ. ಯುವಜನತೆ ಆಚಾರ-ವಿಚಾರಗಳಿಗೆ ತಿಲಾಂಜಲಿ ನೀಡಿ ಅಧರ್ಮದ ಕಡೆಗೆ ಸಾಗುತ್ತಿದ್ದಾರೆ. ಇಂಥ ಪರಿಸ್ಥಿತಿ ಇಲ್ಲದಾಗಬೇಕು~ ಎಂದರು.
`ಜಗತ್ತು ಇಂದು ಬದಲಾಗುತ್ತಿದೆ. ಆಧುನಿಕತೆಯ ಗಾಳಿ ಬೀಸಿದ ನಂತರ ವಿಶ್ವ ಸಣ್ಣದಾಗುತ್ತಿದೆ.
 
ಇದೇ ಸಂದರ್ಭದಲ್ಲಿ ಜನರ ಮನಸ್ಸು ಕೂಡ ಸಂಕುಚಿತವಾಗುತ್ತಿದೆ. ಸ್ವಾರ್ಥ, ಸ್ವಜನ ಪಕ್ಷಪಾತ ಹೆಚ್ಚುತ್ತಿದೆ.  ಮನುಷ್ಯ ಮಾನವೀಯತೆ ಕಳೆಯುತ್ತಿದ್ದಾನೆ. ವ್ಯಾವಹಾರಿಕ ಪೈಪೋಟಿ ಹೆಚ್ಚಾಗಿ ಭಾವನಾತ್ಮಕ ಸಂಬಂಧಗಳಿಂದ ದೂರವಾಗುತ್ತಿದ್ದಾರೆ~ ಎಂದು ಅವರು ಬೇಸರ ವ್ಯಕ್ತಪಡಿಸಿದರು.


`ವೈಯಕ್ತಿಕ ಸಾಧನೆಯ ಹಾದಿಯಲ್ಲಿ ನೆಮ್ಮದಿ ಕಳೆದುಕೊಂಡಿರುವ ಜನರು ಭಾವನೆಗಳನ್ನು ಕಳೆದು ಕೊಂಡಿದ್ದಾರೆ. ಭಯೋತ್ಪಾದನೆ, ಮತಾಂತರ, ಗೋಹತ್ಯೆಯಂಥ ಅನಿಷ್ಟಗಳು ಕಾಡುತ್ತಿವೆ. ಇಂಥ ಸಂದರ್ಭದಲ್ಲಿ ಅಧ್ಯಾತ್ಮ ಹಾಗೂ ದೇವತಾರಾಧನೆ ಅಗತ್ಯ. ಅವುಗಳಿಂದ ಮಾತ್ರ ನೆಮ್ಮದಿ ಗಳಿಸಲು ಸಾಧ್ಯ~ ಎಂದರು.

`ಧರ್ಮದ ಆಚರಣೆಗೆ ಎಲ್ಲರ ಜವಾಬ್ದಾರಿಯಾಗಬೇಕು, ದೈನಂದಿನ ವ್ಯವಹಾರಗಳು ಧರ್ಮದ ಆಧಾರದಲ್ಲಿ ನಡೆಯು ವಂತಾಗಬೇಕು ಎಂದು ಹೇಳಿದ ಮುಖ್ಯಮಂತ್ರಿಗಳು ಸರ್ವೇಜನ ಸುಖಿನೋ ಭವಂತು ಎಂದು ಸಾರಿದ ದೇಶ ಭಾರತ ಮಾತ್ರ. ಆದರೆ ಎಲ್ಲರನ್ನೂ ಕೈಬೀಸಿ ಕರೆದ ಭಾರತದಲ್ಲಿ ಇಂಥ ಔದಾರ್ಯವೇ ಇಂದು ಸಮಸ್ಯೆಯನ್ನು ಉಂಟು ಮಾಡುವಂತಾಗಿದೆ ಎಂದರು.

ಧರ್ಮ ಸಮನ್ವಯದೊಂದಿಗೆ ಹಿಂದೂಧರ್ಮ ರಕ್ಷಣೆಯ ಕೆಲಸ ಕೂಡ ಆಗಬೇಕು ಎಂದು ಹೇಳಿದ ಅವರು, ತಾವು ಮುಖ್ಯಮಂತ್ರಿಯಾಗಿ ಎಷ್ಟರ ಮಟ್ಟಿಗೆ ಯಶಸ್ಸು ಕಂಡಿದ್ದೇನೆ ಎಂಬುದನ್ನು ನಾಡಿನ ಜನರು ಹಾಗೂ ಶ್ರೀಗಳು ಹೇಳಬೇಕು  ಎಂದರು. ಸಿದ್ಧಾರೂಢ ಮಠದಲ್ಲಿ ನಿರ್ಮಿಸ ಲಾಗುವ `ಕರ್ನಾಟಕ ಭಕ್ತ ಭವನ~ಕ್ಕೆ  ಮುಖ್ಯಮಂತ್ರಿ ಶಿಲಾನ್ಯಾಸ ನೆರವೇರಿಸಿದರು.

 ವಿಜಾಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ, ವಿಜಾಪುರದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸ್ವಾಮೀಜಿ, ಶಿರಗುಪ್ಪಿ ಯ ಮಾತೋಶ್ರೀ ಉಮಾತಾಯಿ, ಬೀದರ್‌ನ ಸಿದ್ಧೇಶ್ವರಿ ದೇವಿ, ಸಚಿವ ಜಗದೀಶ ಶೆಟ್ಟರ, ಶಾಸಕರಾದ ಚಂದ್ರಕಾಂತ ಬೆಲ್ಲದ, ವೀರಭದ್ರಪ್ಪ ಹಾಲಹರವಿ, ಸಿದ್ಧಾರೂಢ ಸ್ವಾಮಿ ಮಠ ಟ್ರಸ್ಟ್ ಕಮಿಟಿಯ ಮುಖ್ಯ ಆಡಳಿತಾಧಿಕಾರಿ ಕೆ. ನಟರಾಜನ್, ಅಧ್ಯಕ್ಷ ಮಹೇಂದ್ರ ಸಿಂಘಿ, ಗೌರವ ಕಾರ್ಯದರ್ಶಿ ರಂಗಾ ಬದ್ದಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಶೋಕ ಕಾಟವೆ  ಉಪಸ್ಥಿತರಿದ್ದರು.

ಬೆಣ್ಣಿಹಳ್ಳ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್~

ಹುಬ್ಬಳ್ಳಿ: `ಜಿಲ್ಲೆಯ ಬೆಣ್ಣಿಹಳ್ಳ ಸೇರಿದಂತೆ ಪ್ರವಾಹಕ್ಕೆ ತುತ್ತಾಗುವ ಹಳ್ಳಗಳ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಸಿದ್ಧಗೊಳಿಸಲಾಗುವುದು~ ಎಂದು ಮುಖ್ಯಮಂತ್ರಿ ಡಿ.ವಿ. ಸದಾ ನಂದಗೌಡ ತಿಳಿಸಿದರು.

ಸಿದ್ಧಾರೂಢ ಮಠದಲ್ಲಿ ನಡೆಯು ತ್ತಿರುವ ವಿಶ್ವ ವೇದಾಂತ ಪರಿಷತ್‌ನಲ್ಲಿ ಭಾಗವಹಿಸಲು ಆಗಮಿ ಸಿದ ಅವರು ಸರ್ಕಿಟ್ ಹೌಸ್‌ನಲ್ಲಿ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಈ ವಿಷಯಕ್ಕೆ ಸಂಬಂಧಿಸಿ ಪರಮಶಿವಯ್ಯ ಅವರ ವರದಿಯನ್ನು ಗಣನೆಗೆ ತೆಗೆದುಕೊಳ್ಳಲಾಗುವುದು ಎಂದರು.

ನೆರೆ ಪೀಡಿತ ಪ್ರದೇಶದ ಜನರಿಗಾಗಿ ನಿರ್ಮಿಸಬೇಕಾಗಿದ್ದ 55,000 ಮನೆಗಳ ಪೈಕಿ 46,000 ಮನೆಗಳ ನಿರ್ಮಾಣ ಕಾರ್ಯ ಮುಕ್ತಾಯ ಗೊಂಡಿದೆ ಎಂದು ಅವರು ತಿಳಿಸಿದರು.

ಕಳೆದ ಬಾರಿ ಮಂಡಿಸಿದ ಕೃಷಿ ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳಿಗೆ ಸಂಬಂಧಿಸಿ 64 ಶೇಕಡಾ ಕೆಲಸ ಪೂರ್ಣಗೊಂಡಿದ್ದು ಮಾರ್ಚ್ ಅಂತ್ಯದ ವೇಳೆಗೆ ಈ ಪ್ರಮಾಣ 85ರಿಂದ 90ಕ್ಕೆ ತಲುಪ ಲಿದೆ, ಈ ವರ್ಷವೂ ಕೃಷಿ ಬಜೆಟ್ ಮಂಡಿಸಲಾಗುವುದು ಎಂದರು.

`ಎರಡನೇ ವಿಶ್ವ ಬಂಡವಾಳ ಸಮಾವೇಶದಲ್ಲಿ ಆರು ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಲಾಗುವುದು. ಇದರ ಮೂಲಕ 10 ಲಕ್ಷ ಉದ್ಯೋಗಾವಕಾಶ ಸೃಷ್ಟಿಸ ಲಾಗುವುದು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ ಆರಂಭಿಸಿದ ಸಾಮಾಜಿಕ ಭದ್ರತಾ ಯೋಜನೆಗಳನ್ನು ಮುಂದುವರಿಸ ಲಾಗುವುದು.

ಆದರೆ ಸೀರೆ ವಿತರಣೆ ಮಾಡುವುದಿಲ್ಲ. ಫೆಬ್ರುವರಿ 23ರಂದು ವಿವಿಧ ಜಿಲ್ಲೆಗಳ 20 ಮಂದಿ ಸಾವಯವ ಕೃಷಿಕರ ಸಭೆಯನ್ನು ವಿಧಾನಸೌಧದಲ್ಲಿ ನಡೆಸಲಾಗುವುದು~ ಎಂದು ಅವರು ತಿಳಿಸಿದರು.  
ಸಚಿವ ಜಗದೀಶ ಶೆಟ್ಟರ, ಶಾಸಕ ವೀರಭದ್ರಪ್ಪ ಹಾಲಹರವಿ ಮತ್ತಿತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT