ರೇವಾರಿ / ಹರಿಯಾಣ (ಪಿಟಿಐ): ಪಾಕಿಸ್ತಾನ ಹಾಗೂ ಚೀನಾ ಬೆದರಿಕೆಯ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಬಲಿಷ್ಠ ಸರ್ಕಾರದ ಅಗತ್ಯವನ್ನು ಪ್ರಬಲವಾಗಿ ಪ್ರತಿಪಾದಿಸಿರುವ ನರೇಂದ್ರ ಮೋದಿ, ನೈಜ ಧರ್ಮನಿರಪೇಕ್ಷತೆಯನ್ನು ರಾಜಕಾರಣಿಗಳು ಸೇನೆಯಿಂದ ಕಲಿತುಕೊಳ್ಳಬೇಕು ಎಂದು ಹೇಳಿದ್ದಾರೆ.
ಹಲವು ದಿನಗಳ ಗೊಂದಲದ ನಂತರ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಹೊರಹೊಮ್ಮಿದ ನಂತರ ಭಾನುವಾರ ಇಲ್ಲಿ ಮೊದಲ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮೋದಿ, ‘ಯುಪಿಎ–2’ ಸರ್ಕಾರದ ವೈಫಲ್ಯಗಳನ್ನು ತರಾಟೆಗೆ ತೆಗೆದುಕೊಂಡರು. ಮಾಜಿ ಯೋಧರೇ ಅತ್ಯಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ, ನಿವೃತ್ತ ಸೇನಾ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್ ಸಂಘಟಿಸಿದ್ದ ಸಭೆಯಲ್ಲಿ 65 ನಿಮಿಷಗಳ ಕಾಲ ಮಾತನಾಡಿದ ಅವರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ವ್ಯಕ್ತಿತ್ವದ ಹಲವು ಉದಾಹರಣೆ ನೀಡಿದರು.
ವಿಭಜನಾ ರಾಜಕೀಯ: ‘ವೋಟ್ಬ್ಯಾಂಕ್ ರಾಜಕೀಯ ನಡೆಸುವ ಮೂಲಕ ರಾಜಕಾರಣಿಗಳು ಸಮಾಜದಲ್ಲಿ ತೀವ್ರ ಒಡಕು ಉಂಟುಮಾಡುತ್ತಿದ್ದು, ಇಂತಹ ಜನ ‘ನೈಜ ಧರ್ಮನಿರಪೇಕ್ಷತೆ’ಯನ್ನು ಸೇನೆಯ ಯೋಧರನ್ನು ನೋಡಿ ಕಲಿತುಕೊಳ್ಳಬೇಕಾಗಿದೆ. ಪಾಕಿಸ್ತಾನ ಇಲ್ಲವೇ ಚೀನಾ ಗಡಿಯಲ್ಲಿ ಉಂಟಾಗಿರುವ ತೊಂದರೆಗಳಿಗೆ ಸೇನೆ ಕಾರಣವಲ್ಲ, ಬದಲಿಗೆ ಮೂಲ ಸಮಸ್ಯೆ ಇರುವುದು ದೆಹಲಿಯಲ್ಲಿ. ಜನಪರ ಹಾಗೂ ದೇಶಭಕ್ತ ಸರ್ಕಾರದಿಂದ ಮಾತ್ರ ಇಂತಹ ಸಮಸ್ಯೆಗಳಿಗೆ ಪರಿಹಾರ ಸಿಗಬಲ್ಲದು’ ಎಂದು ಅವರು ಹೇಳಿದರು.
ಮುಖಾಮುಖಿಯಾದರೂ ಮುಸುಕಿನ ಗುದ್ದಾಟ
ನವದೆಹಲಿ: ಕೇಂದ್ರದ ಮಾಜಿ ಸಚಿವ ರಾಂ ಜೇಠ್ಮಲಾನಿ ಅವರ 90ನೇ ವರ್ಷದ ಹುಟ್ಟುಹಬ್ಬ ನಿಮಿತ್ತ ಭಾನುವಾರ ನಡೆದ ಔತಣಕೂಟದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಅವರು ಮುಖಾಮುಖಿಯಾದರೂ ಅವರಿಬ್ಬರ ನಡುವಿನ ವೈಮನಸ್ಯ ಕಡಿಮೆಯಾದಂತೆ ಕಾಣಲಿಲ್ಲ.
ಔತಣಕೂಟಕ್ಕೆ ಬಂದ ಮೋದಿ, ಅಡ್ವಾಣಿಯವರಿಗೆ ಗೌರವ ತೋರಲು ಅವರ ಪಾದಕ್ಕೆ ಎರಗಿದರು. ಬಳಿಕ ಜೇಠ್ಮಲಾನಿ ಅವರ ಪಕ್ಕದ ಆಸನದಲ್ಲಿ ಕುಳಿತರು. ಕುಶಲದ ಮಾತು, ಹಾಸ್ಯ ಚಟಾಕಿಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡಿದ್ದನ್ನು ಬಿಟ್ಟರೆ ಅಡ್ವಾಣಿ ಮತ್ತು ಮೋದಿ ಹೆಚ್ಚಿನ ಮಾತುಕತೆಯನ್ನೇನೂ ಆಡಲಿಲ್ಲ.
‘ಬಿಜೆಪಿ ರಾಜಕೀಯ ಆತ್ಮಹತ್ಯೆ’
ನರೇಂದ್ರ ಮೋದಿ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿರುವುದರಿಂದ ಮೂರನೇ ಬಾರಿಯೂ ಕೇಂದ್ರದಲ್ಲಿ ಯುಪಿಎ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್ ವಿಶ್ವಾಸ ವ್ಯಕ್ತಪಡಿಸಿದೆ.
ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವ ಮೂಲಕ ಬಿಜೆಪಿ ರಾಜಕೀಯ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಲೇವಡಿ ಮಾಡಿದೆ.
ಮೋದಿ ಆಯ್ಕೆ: ಜೇಟ್ಲಿ ಸಂತಸ
ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನಾಗಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಿರುವ ಕ್ರಮವನ್ನು ಸ್ವಾಗತಿಸಿರುವ ಪಕ್ಷದ ಹಿರಿಯ ನಾಯಕ ಅರುಣ್ ಜೇಟ್ಲಿ ಇದೊಂದು ‘ವಿಜಯದ ನಿರ್ಧಾರ’ ಎಂದು ಬಣ್ಣಿಸಿದ್ದಾರೆ.
ಎಲ್.ಕೆ. ಅಡ್ವಾಣಿ ಅವರು ಅಂತಿಮವಾಗಿ ಈ ನಿರ್ಧಾರವನ್ನು ಬೆಂಬಲಿಸುವರು ಎಂದು ಸುದ್ದಿಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.