ಧಾರವಾಡ : ಸಾಕಷ್ಟು ಚರ್ಚೆಗೆ ಗ್ರಾಸವಾದ `ಧಾರವಾಡ ಸಾಹಿತ್ಯ ಸಂಭ್ರಮ'ಕ್ಕೆ ಶುಕ್ರವಾರ ಬೆಳಿಗ್ಗೆ ಇಲ್ಲಿನ ಕರ್ನಾಟಕ ವಿಶ್ವವಿದ್ಯಾನಿಲಯದ ಸುವರ್ಣ ಮಹೋತ್ಸವ ಭವನದಲ್ಲಿ ಹಿರಿಯ ವಿಮರ್ಶಕ ಜಿ.ಎಸ್. ಆಮೂರ, ಡಾ. ಗಿರಡ್ಡಿ ಗೋವಿಂದರಾಜ, ಖ್ಯಾತ ನಾಟಕಕಾರ ಗಿರೀಶ ಕಾರ್ನಾಡ ಹಾಗೂ ಕವಿ ಚೆನ್ನವೀರಕಣವಿ ಅವರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
ಆಶಯ ಭಾಷಣ ಮಾಡಿದ ಜಿ.ಎಸ್. ಆಮೂರ ಅವರು ಪರಭಾಷಿಕರಿಗೆ ಹಾಗೂ ವಿದೇಶಿಯರಿಗೆ ಕನ್ನಡ ಸಾಹಿತ್ಯವನ್ನು ತಮ್ಮದಾಗಿಸಿಕೊಳ್ಳಬೇಕು ಎಂದು ಅನ್ನಿಸುವಂತಹ ಮಹತ್ವದ ಸಾಹಿತ್ಯವನ್ನು ನಾವು ಇದುವರೆಗೂ ರಚಿಸಿಲ್ಲ ಎಂದು ಹೇಳಿದರು.
ಪಾಶ್ಚಾತ್ಯ ಚಿಂತನೆಯನ್ನು ತೆಗೆದುಕೊಂಡು ನಮ್ಮ ಸೃಜನಶೀಲತೆಯನ್ನು ಅದಕ್ಕೆ ಧಾರೆ ಎರೆದದ್ದೆ ಇಲ್ಲಿವರೆಗಿನ ತಲೆಮಾರು ಮಾಡಿದ ಗುರುತರವಾದ ತಪ್ಪು ಎಂದು ಅವರು ತಮ್ಮ ಭಾಷಣದಲ್ಲಿ ಒತ್ತಿ ಹೇಳಿದರು.