ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಯಾವುದೇ ಮಠಗಳಿಗೆ ಹಣ ನೀಡಿಲ್ಲ. ಆದರೆ, ಪರಿಶಿಷ್ಟ ಜಾತಿ, ಪಂಗಡಗಳು ಮತ್ತು ಹಿಂದುಳಿದ ವರ್ಗಗಳ ಧಾರ್ಮಿಕ ಸಂಸ್ಥೆಗಳಿಗೆ ರೂ130 ಕೋಟಿಗೂ ಹೆಚ್ಚು ಅನುದಾನ ಪ್ರಕಟಿಸಿದ್ದಾರೆ.
ಹಿಂದುಳಿದ ವರ್ಗಗಳ ಧಾರ್ಮಿಕ ಹಾಗೂ ಇತರೆ ಸಂಘ-ಸಂಸ್ಥೆಗಳಿಗೆ ಸಮುದಾಯ ಭವನ, ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣಕ್ಕೆ ರೂ 75 ಕೋಟಿ ಪ್ರಕಟಿಸಲಾಗಿದೆ. ಇದೇ ರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಧಾರ್ಮಿಕ, ಇತರೆ ಸಂಘ ಸಂಸ್ಥೆಗಳಿಗೆ ರೂ 50 ಕೋಟಿ ರೂಪಾಯಿ ಒದಗಿಸಲಾಗಿದೆ.
ಗುಲ್ಬರ್ಗದಲ್ಲಿರುವ ಸಿದ್ಧಾರ್ಥ ವಿಹಾರಕ್ಕೆ ರೂ 5 ಕೋಟಿ ನೀಡಲಾಗಿದೆ. ಬಂಜಾರಾ ಜನಾಂಗದ ಕುಲಗುರು ಸೇವಾಲಾಲ್ ಅವರ ಹುಟ್ಟೂರು ಹೊನ್ನಾಳಿ ತಾಲ್ಲೂಕಿನ ಸೂರಗೊಂಡನಕೊಪ್ಪದ ಅಭಿವೃದ್ಧಿಗೆ ರೂ 2 ಕೋಟಿ ಮೀಸಲಿಡಲಾಗಿದೆ. ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ಮೂಲಸೌಕರ್ಯ ಅಭಿವೃದ್ಧಿಗೆ ರೂ 1 ಕೋಟಿ ಪ್ರಕಟಿಸಲಾಗಿದೆ.