ಕವಿ ದ.ರಾ.ಬೇಂದ್ರೆ ತಮ್ಮ ಕವಿತೆಯಲ್ಲಿ ಧಾರವಾಡದ ಸಾಧನಕೇರಿಯ ಬಗ್ಗೆ ಬರೆಯುತ್ತಾ `ನಂದನದ ತುಣುಕೊಂದು ಬಿದ್ದಿದೆ, ನೋಟ ಸೇರದು ಯಾರಿಗೆ?~ ಎಂದು ಕೇಳುತ್ತಾರೆ. ಬೆಂಗಳೂರು ಜಯನಗರದ ಶಾಪಿಂಗ್ ಕಾಂಪ್ಲೆಕ್ಸ್ ಸುತ್ತಲೂ ತಿಳಿ ಗುಲಾಬಿ ಹೂವನ್ನು ಹೊತ್ತು ನಿಂತಿರುವ ಮರಗಳನ್ನು ನೋಡಿದಾಗ ನನಗೆ ಕವಿತೆಯ ಈ ಸಾಲುಗಳು ನೆನಪಿಗೆ ಬಂತು.
ಎಲೆಗಳನ್ನೆಲ್ಲ ಉದುರಿಸಿ ಮೈತುಂಬಾ ಹೂ ಹೊದ್ದಿರುವ ಮರಗಳು ವಸಂತ ಋತುವಿನ ಆಗಮನವನ್ನು ಸಾರುತ್ತವೆ. ಕಹಳೆಯಾಕಾರದ ತಿಳಿ ಗುಲಾಬಿ ವರ್ಣದ ಹೂವಿನ ಗೊಂಚಲಿನಿಂದ ತುಂಬಿರುವ ಈ ಮರಗಳು ಬಿಗ್ನೋನಿಯೇಸಿ ಅಥವಾ ಜಕರಂಡ ಕುಟುಂಬಕ್ಕೆ ಸೇರಿದ್ದು. ಇದರ ಹೆಸರು `ಟಬೀಬಿಯ ರೋಸಿಯ~. ಹಿಂದಿಯಲ್ಲಿ ಈ ಮರವನ್ನು `ಬಸಂತ್ ಕೀ ರಾಣಿ~ ಎಂದು ಕರೆಯುತ್ತಾರೆ.
ಡಿಸೆಂಬರ್ನಿಂದ ಫೆಬ್ರುವರಿಯಲ್ಲಿ ಹೂ ಬಿಡುವ, ಬೃಹತ್ ಗಾತ್ರದಲ್ಲಿ ಬೆಳೆಯುವ ಮರಗಳು ಇತರ ದಿನಗಳಲ್ಲಿ ದಟ್ಟವಾದ ಹಸಿರು ಎಲೆಗಳಿಂದ ತುಂಬಿರುತ್ತವೆ. ಮಳೆಗಾಲದಲ್ಲಿ ಸುರಿಯುವ ನೀರಿನಿಂದ ರಕ್ಷಣೆಯನ್ನು ನೀಡುವ ಈ ಮರಗಳನ್ನು ಬೆಂಗಳೂರಿನ ಕಬ್ಬನ್ ಪಾರ್ಕ್, ಲಾಲ್ ಬಾಗ್, ಬಸವನಗುಡಿ ಮುಂತಾದ ಇತರ ಅನೇಕ ಜಾಗಗಳಲ್ಲೂ ಕಾಣಬಹುದು.