ನವದೆಹಲಿ: ಒಂದು ವಾರದಲ್ಲಿ ನಿಮ್ಮ ದೇಹದ ತೂಕವನ್ನು 10 ಕೆ.ಜಿ ಹೆಚ್ಚಿಸಿಕೊಳ್ಳಿ, ಎರಡು ವಾರದಲ್ಲಿ 15 ಕೆ.ಜಿ ತೂಕ ಇಳಿಸಿಕೊಳ್ಳಿರಿ..., ಮುಖದ ಕಲೆ ಹೋಗಲಾಡಿಸಿ ಸುಂದರವಾಗಿ ಕಾಣಲು ಪ್ರಕೃತ್ತಿದತ್ತವಾದ ಈ ಕ್ರೀಂ ಬಳಸಿ... ಹೀಗೆ ಮಾರುಕಟ್ಟೆ ತುಂಬಾ ತುಂಬಿಕೊಂಡಿರುವ ಇಂತಹ ಸಾವಿರಾರು ಉತ್ಪನ್ನಗಳಿಗೆ ಇನ್ನು ಮುಂದೆ ಕಡಿವಾಣ ಬೀಳಲಿದೆ.
ಗ್ರಾಹಕರನ್ನು ವಂಚಿಸುವ ಇಂತಹ ತರಹೇವಾರಿ ‘ಪೂರಕ ಉತ್ಪನ್ನಗಳ’ ಮೇಲೆ ತೀವ್ರ ನಿಗಾ ವಹಿಸುವಂತೆ ಮತ್ತು ಇಂತಹ ಉತ್ಪನ್ನಗಳು ಮಾರುಕಟ್ಟೆಗೆ ಬಿಡುಗಡೆಗೊಳ್ಳುವ ಮುನ್ನವೇ ನೈಜತೆ ಪರಿಶೀಲಿಸುವಂತೆ ಆರೋಗ್ಯಕ್ಕೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿ ಸರ್ಕಾರಕ್ಕೆ ಸೂಚಿಸಿದೆ.
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯ ವೈದ್ಯರು ಸಹ ಕೆಲವೊಮ್ಮೆ ‘ಪೂರಕ ಆಹಾರ’ಗಳನ್ನು ತೆಗೆದುಕೊಳ್ಳುವಂತೆ ರೋಗಿಗಳಿಗೆ ಸೂಚಿಸುತ್ತಾರೆ. ದೇಹ-ದಲ್ಲಿ ಪ್ರೊಟೀನ್ ಮತ್ತು ವಿಟಮಿನ್ ಅಂಶ ಕೊರತೆ ಇದ್ದರೆ ಇಂತಹ ಔಷಧಗಳನ್ನು ಸೂಚಿಸಲಾಗುತ್ತದೆ. ಆದರೆ, ಈ ಪೂರಕ ಉತ್ಪನ್ನಗಳು ಈಗ ‘ಔಷಧದ ಮಾನದಂಡ ನಿರ್ಧರಿಸುವ ಕೇಂದ್ರೀಯ ಸಂಸ್ಥೆಯ ನಿಯಂತ್ರಣದಿಂದ ಹೊರಗಿವೆ. ಹಾಗಾಗಿ ಮಾರುಕಟ್ಟೆ ತುಂಬ ಎಗ್ಗಿಲ್ಲದೆ ಇಂತಹದೇ ಉತ್ಪನ್ನಗಳು ತುಂಬಿಕೊಂಡಿವೆ. ಗ್ರಾಹಕರು ಸಹ ವೈದ್ಯರ ಶಿಫಾರಸು ಸಹ ಇಲ್ಲದೆ, ಇಂತಹ ಔಷಧಗಳನ್ನು ತೆಗೆದುಕೊಳ್ಳುವುದರಿಂದ ಹತ್ತಾರು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಸಮಿತಿ ಕಳವಳ ವ್ಯಕ್ತಪಡಿಸಿದೆ.
ದೇಶದಲ್ಲೇ ತಯಾರಿಸುವ ಮತ್ತು ಆಮದು ಮಾಡಿಕೊಳ್ಳುವ ಇಂತಹ ಪೂರಕ ಆಹಾರ ಉತ್ಪನ್ನಗಳನ್ನು ‘ಔಷಧದ ಮಾನದಂಡ ನಿರ್ಧರಿಸುವ ಕೇಂದ್ರೀಯ ಸಂಸ್ಥೆಯ ನಿಯಂತ್ರಣಕ್ಕೆ ತರಬೇಕು. ಮಾರುಕಟ್ಟೆಗೆ ಬಿಡುಗಡೆಗೊಳ್ಳುವ ಮುನ್ನ ಕಡ್ಡಾಯವಾಗಿ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಬೇಕು, ಯಾವುದೇ ಅಡ್ಡ ಪರಿಣಾಮಗಳಿಲ್ಲ ಎನ್ನುವುದು ದೃಢಪಟ್ಟಿರಬೇಕು. ಇಂತಹ ಉತ್ಪನ್ನಗಳನ್ನು ತಯಾರಿಸುವ ದೇಶೀಯ ಮತ್ತು ಬಹುರಾಷ್ಟ್ರೀಯ ಕಂಪೆನಿಗಳನ್ನು ಸರ್ಕಾರದ ನಿಯಂತ್ರಣದ ವ್ಯಾಪ್ತಿಗೆ ತರಬೇಕು ಎಂದು ಸಮಿತಿ ಹೇಳಿದೆ.
‘ಔಷಧ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳ ತಿದ್ದುಪಡಿ ಮಸೂದೆ–2013’ರಲ್ಲಿ ಪ್ರಸ್ತಾಪಿಸಲಾಗಿರುವ ‘ಕೇಂದ್ರ ಔಷಧ ಪ್ರಾಧಿಕಾರ’ (ಸಿಡಿಎ) ರಚನೆಯನ್ನು ಸಂಸದೀಯ ಸಮಿತಿ ತಳ್ಳಿಹಾಕಿದೆ.
ಇದು ಅಧಿಕಾರಶಾಹಿ ಧೋರಣೆಯಿಂದ ಕೂಡಿದೆ. ಮಂತ್ರಿಗಳು ಮತ್ತು ಆಯ್ದ ಇಲಾಖೆಗಳ ಕಾರ್ಯದರ್ಶಿಗಳು ಇದರ ಸದಸ್ಯರಾಗುವುದರಿಂದ ಇದರ ದುರುಪಯೋಗವೇ ಹೆಚ್ಚಾಗುವ ಸಾಧ್ಯತೆ ಇದೆ ಎಂದಿದೆ. ಇದಕ್ಕೆ ಬದಲಾಗಿ, ತಜ್ಞರು, ಔಷಧ ವಿಜ್ಞಾನಿಗಳನ್ನು ಒಳಗೊಂಡ ಕೇಂದ್ರೀಯ ನಿಯಂತ್ರಣ ಸಂಸ್ಥೆ ರಚಿಸುವಂತೆ ಸೂಚಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.