ವಿಜಾಪುರದಲ್ಲಿ ಕಳೆದ ವರ್ಷದ ಅಕ್ಟೋಬರ್ನಲ್ಲಿ ನಕಲಿ ಕೀಟನಾಶಕ ತಯಾರಿಸುವ ಜಾಲವೊಂದು ಪತ್ತೆಯಾಗಿತ್ತು. ಕಳೆದ ಐದು ವರ್ಷಗಳಿಂದ ಸುಮಾರು 5 ಕೋಟಿ ರೂ ಮೊತ್ತದ ನಕಲಿ ಕೀಟನಾಶಕ ತಯಾರಿಸಿ ಮಾರಾಟ ಮಾಡಿರಬಹುದೆಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿತ್ತು. ಈ ವಿಷಯ ಹಲವು ಪತ್ರಿಕೆಗಳಲ್ಲಿ ವರದಿಯಾಗಿದೆ.
ಪ್ರಕರಣ ಬೆಳಕಿಗೆ ಬಂದು ನಾಲ್ಕು ತಿಂಗಳು ಕಳೆದರೂ ಜಿಲ್ಲಾಧಿಕಾರಿಗಳಾಗಲಿ, ಜಿಲ್ಲಾ ಪಂಚಾಯ್ತಿಯಾಗಲಿ, ಕೃಷಿ ಇಲಾಖೆ ಸಂಬಂಧಿಸಿದ ಸಂಸ್ಥೆ ವಿರುದ್ಧ ಇದುವರೆಗೆ ಯಾವುದೇ ಕ್ರಮ ಜರುಗಿಸದಿರುವುದು ಪರಿಶೀಲನೆಯಿಂದ ತಿಳಿದುಬಂದಿದೆ.
ಈ ಪ್ರಕರಣವನ್ನು ಮುಚ್ಚಿಹಾಕಲಾಯಿತೇ? ಸಂಬಂಧಿಸಿದ ಇಲಾಖೆ ಈ ಪ್ರಕರಣದಲ್ಲಿ ಶಾಮೀಲಾಗಿವೆಯೇ? ಅಥವಾ ರಾಜಕೀಯ ಒತ್ತಡಗಳು ಕೆಲಸ ಮಾಡಿವೆಯೇ? ಎಂಬ ಸಾರ್ವಜನಿಕರ ಅನುಮಾನಗಳಿಗೆ ಉತ್ತರ ಸಿಗಬೇಕಿದೆ.
ನಕಲಿ ಕೀಟನಾಶಕ ಮಾರಾಟ ಮಾಡುತ್ತಿದ್ದ ಅಂಗಡಿಗಳನ್ನು ಸ್ವಾಧೀನ ಪಡಿಸಿಕೊಂಡಿಲ್ಲ. ಈಗಲಾದರೂ ಸಂಬಂಧಪಟ್ಟವರು ಕ್ರಮ ಜರುಗಿಸುತ್ತಾರೆ ಎಂದು ನಂಬಬಹುದೇ?