ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಪಡಿತರ ಕಾರ್ಡ್ ಜಾಲ; ಮಾಲೀಕರ ಕೈವಾಡ

Last Updated 24 ಫೆಬ್ರುವರಿ 2012, 8:45 IST
ಅಕ್ಷರ ಗಾತ್ರ

ತುಮಕೂರು: ಅಕ್ರಮ ಪಡಿತರದಾರರ ಮೇಲೆ ನಾಗರಿಕ ಆಹಾರ ಮತ್ತು ಪೂರೈಕೆ ಇಲಾಖೆಯ ಹಿಡಿತ ಬಿಗಿಗೊಂಡಿದ್ದು, ಜಿಲ್ಲೆಯಲ್ಲಿ ಈವರೆಗೆ 1,00756 ಅಕ್ರಮ ಪಡಿತರ ಚೀಟಿಗಳನ್ನು ರದ್ದು ಪಡಿಸಲಾಗಿದೆ.

ಇಷ್ಟೊಂದು ಅಗಾಧ ಪ್ರಮಾಣದಲ್ಲಿ ಅಕ್ರಮವಾಗಿ ಪಡಿತರ ಕಾರ್ಡ್‌ಗಳ ಹಿಂದೆ ನ್ಯಾಯ ಬೆಲೆ ಅಂಗಡಿ ಮಾಲೀಕರ ಕೈವಾಡವನ್ನೂ ಅಲ್ಲಗಳೆಯುವಂತಿಲ್ಲ. ನ್ಯಾಯಬೆಲೆ ಅಂಗಡಿ ಮಾಲೀಕರು ತಮಗೆ ಬೇಕಾದ ವರ ಹೆಸರಿನಲ್ಲಿ ಹಾಗೂ ನಕಲಿ ಕಾರ್ಡ್ ಮಾಡಿಸಿ ಕೊಂಡು ಆ ಪಡಿತರವನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುವ ಮೂಲಕ ಹಣಗಳಿಸಿಕೊಳ್ಳು ತ್ತಿದ್ದರು.

ಇಷ್ಟೇ ಅಲ್ಲದೆ ಒಂದೇ ಮನೆಯವರು 2-3 ಕಾರ್ಡ್ ಪಡೆದಿದ್ದ ಉದಾಹರಣೆಗಳು ಸಾಕಷ್ಟಿವೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ವಿದ್ಯುತ್ ಸಂಪರ್ಕದ ಆರ್.ಆರ್.ಸಂಖ್ಯೆ ಅಥವಾ ಖಾತಾ ಸಂಖ್ಯೆಯೊಂದಿಗೆ ಹೊಂದಾಣಿಕೆ ಮಾಡಿ ನೋಡಲಾಗುತ್ತಿದೆ. ಹೊಂದಾಣಿಕೆಯಾಗದ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ.
 
ಆದರೆ ಹೊಸದಾಗಿ ಕಾರ್ಡ್ ಬೇಕಾದವರು ಗ್ರಾಮ ಪಂಚಾಯತ್‌ಗಳಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಅನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ನಿರಂತರ ಪ್ರತಿಕ್ರಿಯೆ ಎಂದು ಆಹಾರ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಪಿ.ಸಾಂಬಯ್ಯ `ಪ್ರಜಾವಾಣಿ~ಗೆ ತಿಳಿಸಿದರು.

ನೆಮ್ಮದಿ ಕೇಂದ್ರಗಳ ಮೂಲಕ ಪಡಿತರ ಚೀಟಿ ಪಡೆಯುವ ವ್ಯವಸ್ಥೆಯನ್ನು ಈ ಹಿಂದೆ ಮಾಡ ಲಾಗಿತ್ತು. ಆ ಸಂದರ್ಭದಲ್ಲಿ ರೂ. 20 ಬೆಲೆಯ ಛಾಪಾ ಕಾಗದದಲ್ಲಿ ಅಫಿಡೆವಿಟ್ ಮಾಡಿಸಿಕೊಂಡು ಬಂದವರಿಗೆಲ್ಲರಿಗೂ ಪಡಿತರ ಚೀಟಿ ನೀಡಿದ್ದೇ ಜಿಲ್ಲೆಯಲ್ಲಿ ಅಗಾಧ ಸಂಖ್ಯೆಯಲ್ಲಿ ಅಕ್ರಮ ಪಡಿತರ ಚೀಟಿಗಳು ಇರಲು ಕಾರಣವಾಗಿದೆ ಎನ್ನಲಾಗಿದೆ.

ಜಿಲ್ಲೆಯ ಗ್ರಾಮಾಂತರ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿ ಅತಿ ಹೆಚ್ಚು ಅಕ್ರಮ ಪಡಿತರ ಚೀಟಿ ಪತ್ತೆ ಯಾಗಿವೆ. ತುಮಕೂರು ನಗರದಲ್ಲಿ 43839 ಪಡಿತರ ಚೀಟಿಗಳು ಅಸಲಿಯಾಗಿವೆ. ಆದರೆ 31,651 ಅಕ್ರಮ ಪಡಿತರ ಚೀಟಿ ಇರುವುದು ಪತ್ತೆ ಯಾಗಿದೆ. ಅಂದರೆ ತುಮಕೂರು ನಗರದಲ್ಲಿ ಅಸಲಿ ಪಡಿತರ ಚೀಟಿಯಲ್ಲಿ ಅರ್ಧಕ್ಕೂ ಹೆಚ್ಚು ನಕಲಿ ಪಡಿತರ ಚೀಟಿಗಳಾಗಿವೆ.

ಬಡವರೇ ಹೆಚ್ಚು: ಪಡಿತರ ಕಾರ್ಡುದಾರರು ಆರ್‌ಆರ್ ಸಂಖ್ಯೆ ಅಥವಾ ಖಾತಾ ಸಂಖ್ಯೆ ನೀಡುವುದು ಸಾಕಷ್ಟು ಮಂದಿಗೆ ಕಷ್ಟವಾಗತೊಡಗಿದೆ.

ಒಂದೇ ಮನೆಯಲ್ಲಿ ಪ್ರತ್ಯೇಕವಾಗಿ ಅಣ್ಣ- ತಮ್ಮಂದಿರುವ ವಾಸವಿದ್ದು, ಒಂದೇ ವಿದ್ಯುತ್ ಮೀಟರ್ ಇರುತ್ತದೆ. ಆಸ್ತಿ ಪಾಲು ಆಗಿದ್ದರೂ ಖಾತೆ ಮಾಡಿಸಿಕೊಂಡಿಲ್ಲದ ಪ್ರಕರಣಗಳಲ್ಲಿ ಸಾಕಷ್ಟು ಬಡವರು ಪಡಿತರ ಕಾರ್ಡ್ ನಿಂದ ವಂಚಿತರಾಗಿದ್ದಾರೆ ಎನ್ನಲಾಗಿದೆ.

ಅಕ್ರಮ ಪಡಿತರ ರದ್ದುಪಡಿಸಿರುವ ಪಟ್ಟಿಯ ಕಡೆ ಕಣ್ಣಾಡಿಸಿದರೆ ಅಂತ್ಯೋದಯ ಹಾಗೂ ಎಲ್‌ಪಿಜಿ ರಹಿತ ಬಿಪಿಎಲ್ ಕಾರ್ಡುದಾರರೇ ಅಧಿಕ ಇದ್ದಾರೆ. ಎಪಿಎಲ್ ಪಟ್ಟಿಯಲ್ಲಿರುವ ಬೆರಳಣಿಕೆಯಷ್ಟು ಮಂದಿ ಕಾರ್ಡ್‌ಗಳು ರದ್ದುಗೊಂಡಿವೆ.
 
ಅಗಾಧ ಸಂಖ್ಯೆಯಲ್ಲಿ ಬಿಪಿಎಲ್ ಕಾರ್ಡುಗಳು ರದ್ದುಗೊಳ್ಳಲು ಆರ್‌ಆರ್ ಸಂಖ್ಯೆ ಅಥವಾ ಖಾತಾ ಸಂಖ್ಯೆ ಒದಗಿಸಲು ಈ ಜನರಿಗೆ ಸಾಧ್ಯವಾಗದೇ ಇರುವುದೇ ಕಾರಣ ಎಂದು ಮೂಲಗಳು ತಿಳಿಸಿವೆ.

ಪಡಿತರ ಒತ್ತೆ ಪ್ರಕರಣ: ಕೆಲವು ಗ್ರಾಮಗಳಲ್ಲಿ ಪಡಿ ತರ ಕಾರ್ಡ್‌ಗಳನ್ನು ಒತ್ತೆ ಇಟ್ಟುಕೊಂಡು ಸಾಲ ಕೊಡಲಾಗುತ್ತದೆ ಎಂದು ತಿಳಿದುಬಂದಿದೆ. ಕಡು ಬಡವರು, ಕುಡುಕರು ಸುಲಭವಾಗಿ ಪಡಿತರ ಒತ್ತೆ ಇಡತೊಡಗಿದ್ದಾರೆ. ನ್ಯಾಯ ಬೆಲೆ ಅಂಗಡಿ ಮಾಲೀಕರು ನೂರರಿಂದ ಐದು ನೂರು ರೂಪಾಯಿವರೆಗೂ ಪಡಿತರ ಕಾರ್ಡ್ ಮೇಲೆ ಬಡ್ಡಿ ರಹಿತ ಸಾಲ ನೀಡುತ್ತಾರೆ.
 
ಸಾಲ ಕೊಟ್ಟವರಿಂದ ಬಡ್ಡಿ ಬದಲಿಗೆ ಒಂದೆರಡು ತಿಂಗಳ ಪಡಿತರವನ್ನು ನ್ಯಾಯ ಬೆಲೆ ಅಂಗಡಿ ಮಾಲೀಕರು ತೆಗೆದುಕೊಂಡು ಅದನ್ನು ಕಾಳಸಂತೆಯಲ್ಲಿ ಮಾರುತ್ತಿ ದ್ದಾರೆ ಎನ್ನಲಾಗಿದೆ. ಪಡಿತರ ಒತ್ತೆ ಇಟ್ಟುಕೊಂಡರೆ ವಿಶೇಷವಾಗಿ ಬಿಪಿಎಲ್ ಪಡಿತರ ಕಾರ್ಡ್‌ನಲ್ಲಿ ಸಾಕಷ್ಟು ಲಾಭ ಎನ್ನವುದು ಗುಬ್ಬಿ ತಾಲ್ಲೂಕಿನ ಹೆಸರು ಹೇಳಲಿಚ್ಛಿಸದ ನ್ಯಾಯಬೆಲೆ ಅಂಗಡಿ ಮಾಲೀಕರ ವಿವರಣೆ.

ನೆಟ್ ಇಲ್ಲ; ಆನ್‌ಲೈನ್ ಅರ್ಜಿ

`ಕಣ್ಣು ಇಲ್ಲದಿದ್ದರೂ ಓದಲು ಕಣ್ಣಿಗೆ ಕನ್ನಡಕ ಬೇಕು~ ಎಂಬಂತಾಗಿದೆ ಆನ್‌ಲೈನ್‌ನಲ್ಲಿ ಪಡಿತರಕ್ಕಾಗಿ ಅರ್ಜಿ ಸಲ್ಲಿಸುವವರ ಕಥೆ. ಜಿಲ್ಲೆಯಲ್ಲಿ ಈವರೆಗೆ ಗ್ರಾಮ ಪಂಚಾಯತ್‌ಗಳಿಗೆ 82211 ಮಂದಿ ಪಡಿತರ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ 48943 ಅರ್ಜಿಗಳಷ್ಟನ್ನೇ ಆನ್‌ಲೈನ್‌ಗೆ ತುಂಬಲಾಗಿದೆ.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಗ್ರಾಮ ಪಂಚಾಯತ್‌ಗಳಿಗೆ ಅಧಿಕಾರ ನೀಡಿರುವ ಸರ್ಕಾರ ಅಲ್ಲಿಗೆ ಅಗತ್ಯವಾಗಿ ಬೇಕಾಗಿರುವ ಇಂಟರ್‌ನೆಟ್ ಸಂಪರ್ಕವನ್ನೇ ಕಲ್ಪಿಸಿಕೊಟ್ಟಿಲ್ಲ. ಅಂದರೆ ಜಿಲ್ಲೆಯಲ್ಲಿ 324 ಗ್ರಾಮ ಪಂಚಾಯತ್‌ಗಳ ಪೈಕಿ 111 ಗ್ರಾ.ಪಂ.ಗಳಿಗೆ ಇಂಟರ್‌ನೆಟ್ ಸಂಪರ್ಕವನ್ನೇ ನೀಡಿಲ್ಲ. ನೆಟ್  ಸಂಪರ್ಕ ಇಲ್ಲದ ಕಾರಣ ಸಿಬ್ಬಂದಿ ಅರ್ಜಿಗಳನ್ನು ಆನ್‌ಲೈನ್‌ಗೆ ತುಂಬಲು ಪರದಾಡುವಂತಾಗಿದೆ.

ಇಂಟರ್‌ನೆಟ್ ಸಂಪರ್ಕ ಇಲ್ಲದ ಗ್ರಾ.ಪಂ.ಗಳಿಗೆ ಕೂಡಲೇ ಇಂಟರ್‌ನೆಟ್ ಸಂಪರ್ಕ ಕಲ್ಪಿಸಿಕೊಡುವಂತೆ ಜಿಲ್ಲಾ ಪಂಚಾಯತ್‌ಗೆ ಪತ್ರ ಬರೆಯಲಾಗಿದೆ. ಆದರೆ ಇದೂವರೆಗೂ ಸಂಪರ್ಕ ಕಲ್ಪಿಸಿಕೊಟ್ಟಿಲ್ಲ ಎಂದು ಆಹಾರ ಇಲಾಖೆ ಅಧಿಕಾರಿ ತಿಳಿಸಿದರು.

ಅಕ್ರಮ ಚೀಟಿ ಎಲ್ಲಿ- ಎಷ್ಟು?

ಚಿ.ನಾ.ಹಳ್ಳಿ- 5648
ಗುಬ್ಬಿ- 9835
ಕೊರಟಗೆರೆ-2694
ಕುಣಿಗಲ್-2964
ಮಧುಗಿರಿ-8183
ಪಾವಗಡ-20558
ಶಿರಾ-4995
ತಿಪಟೂರು-8397
ತುಮಕೂರು-38158
ತುರುವೇಕೆರೆ-2606

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT