ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಸಲರ ಶೋಧಕ್ಕೆ ಮತ್ತೆ ಕಾರ್ಯಾಚರಣೆ

Last Updated 20 ಸೆಪ್ಟೆಂಬರ್ 2011, 9:10 IST
ಅಕ್ಷರ ಗಾತ್ರ

ಕೊಪ್ಪ: ನಕ್ಸಲ್ ಪ್ರಭಾವಿತ ಪ್ರದೇಶ ಕುದುರೆಮುಖ ಅಭಯಾರಣ್ಯ ವ್ಯಾಪ್ತಿಯಲ್ಲಿ ನಕ್ಸಲ್ ಶೋಧಕ್ಕಾಗಿ ನಡೆದ ಬ್ಲಾಕ್ ಥಂಡರ್ ಕಾರ್ಯಾಚರಣೆ ತಿಂಗಳಿಗೂ ಹೆಚ್ಚು ನಡೆದು ಮುಕ್ತಾಯಗೊಂಡಿದ್ದು, ನೂತನ ಕಾರ್ಯಾಚರಣೆಗೆ ಸಿದ್ಧತೆ ನಡೆದಿದೆ.

ದಿನನಿತ್ಯದ ಶೋಧ ಕಾರ್ಯಾಚರಣೆ ಜತೆಗೆ ಮೆಣಸಿನಹಾಡ್ಯ, ಮೇಗೂರು, ಕೆರೆಕಟ್ಟೆ, ಕಿಗ್ಗಾ, ಸೋಮನಕುಡಿಗೆ, ಬಿಲಗದ್ದೆ, ಶಿರ್ಲು ಮೊದಲಾದೆಡೆ ಪೊಲೀಸ್ ಇಲಾಖೆ ವಿವಿಧ ಇಲಾಖೆ ಅಧಿಕಾರಿಗಳ ಜತೆ ಜನಸಂಪರ್ಕಸಭೆ ನಡೆಸಿ ಗಿರಿವಾಸಿಗಳ ಅಹವಾಲು ಆಲಿಸಿದೆ.

ಸಂಪರ್ಕರಸ್ತೆ, ಕಾಲುಸೇತುವೆ, ವಿದ್ಯುದ್ದೀ ಕರಣ, ಆಶ್ರಮ ಶಾಲೆ ಮೊದಲಾದ ಸಂಗತಿಗಳ ಬಗ್ಗೆ ಸಭೆಯಲ್ಲಿ ಗ್ರಾಮಸ್ಥರು ಗಮನ ಸೆಳೆದಿದ್ದು, ಬಹುತೇಕ ಸಮಸ್ಯೆಗಳ ನಿವಾರಣೆ ಸಂಬಂಧಪಟ್ಟ ಇಲಾಖೆಗಳಿಗೆ ಗ್ರಾಮಸ್ಥರ ಅಹವಾಲು ಕಳುಹಿಸಲಾಗಿದೆ. ಮಳೆಗಾಲ ಕಳೆಯುತಿದ್ದಂತೆ ಸ್ಥಳೀಯರ ಬೇಡಿಕೆಗಳಿಗೆ ಪೂರಕವಾದ ಕಾಮಗಾರಿಗಳು ಅನುಷ್ಠಾನಗೊಳ್ಳುವ ವಿಶ್ವಾಸವನ್ನು ಇಲಾಖೆ ವ್ಯಕ್ತಪಡಿಸಿದೆ.

ಕುದುರೆಮುಖ ಅಭಯಾರಣ್ಯ ವ್ಯಾಪ್ತಿ ಯಲ್ಲಿ ಹುಲಿಯೋಜನೆ ಜಾರಿಗೆ ಪ್ರಯತ್ನ ನಡೆದಿದ್ದು, ಆಯಕಟ್ಟಿನ ಪ್ರದೇಶಗಳಲ್ಲಿ ತಲಾತಲಾಂತರಗಳಿಂದ ವಾಸವಾಗಿರುವ ಗಿರಿವಾಸಿಗಳ ಎತ್ತಂಗಡಿಯಾಗುವ ಆತಂಕ ಉಂಟಾಗಿದೆ. ಗಿರಿಜನರಲ್ಲದ ಅನ್ಯವರ್ಗದವರು ಸರ್ಕಾರದ ಪರಿಹಾರದ ಪ್ಯಾಕೇಜ್ ಪಡೆಯಲು ಉತ್ಸುಕರಾಗಿದ್ದು, ಪುನರ್‌ವಸತಿ ಬೇಡಿಕೆ ಇಡದಿರುವುದರಿಂದ ಗಿರಿಜನರು ಪುನರ್ ವಸತಿಯಿಂದ ವಂಚಿತರಾ ಗುತ್ತಾರೆಂಬ ಅತಂಕವನ್ನು ಗಿರಿಜನ ನಾಯ ಕರು ವ್ಯಕ್ತಪಡಿಸಿದ್ದಾರೆ.

ಸದ್ಯಕ್ಕೆ ಹುಲಿಯೋಜನೆ ಅನುಷ್ಠಾನವಿಲ್ಲ; ಆತಂಕಬೇಡ ಎಂದು ಪೊಲೀಸ್ ಇಲಾಖೆ ಸಮಾಜಾಯಿಸಿ ನೀಡಿದ್ದರೂ ಸಂಪೂರ್ಣವಾಗಿ ಎತ್ತಂಗಡಿ ಆತಂಕದಿಂದ ಗಿರಿವಾಸಿಗಳು ಮುಕ್ತರಾಗಿಲ್ಲ ಎಂಬುದು ಗಿರಿಜನ ಮುಖಂಡರ ಅಭಿಪ್ರಾಯ.

ಬ್ಲಾಕ್ ಥಂಡರ್ ಕಾರ್ಯಾಚರಣೆಯಲ್ಲಿ ನಕ್ಸಲ್ ಸುಳಿವು ದೊರೆಯದಿದ್ದರೂ ಗಿರಿವಾಸಿಗಳೊಂದಿಗೆ ನಕ್ಸಲ್ ನಿಗ್ರಹ ಪಡೆ ಹಾಗೂ ಪೊಲೀಸ್‌ರೊಂದಿಗೆ ಉತ್ತಮ ಬಾಂಧವ್ಯ ಏರ್ಪಟ್ಟಿದೆ. ಕಾರ್ಯಾಚರಣೆಗೆ ಗಿರಿವಾಸಿಗಳ ಸಹಕಾರ ದೊರೆತಿರುವುದನ್ನು ಪೊಲೀಸ್ ಇಲಾಖೆ ಅಧಿಕಾರಿಗಳು ಮೆಲುಕು ಹಾಕುತ್ತಿದಾರೆ. ಗಿರಿವಾಸಿಗಳ ಮೂಲ ಸಮಸ್ಯೆಗಳ ಪರಿಹಾರಕ್ಕೆ ಎರಡು ವರ್ಷದ ಹಿಂದೆ ಸರ್ಕಾರದ ಅಧಿಕಾರಿಗಳು ತೋರಿ ಸುತ್ತಿದ್ದ ಆಸಕ್ತಿಇತ್ತೀಚಿನ ದಿನಗಳಲ್ಲಿ ಕಡಿಮೆ ಯಾಗಿದೆ ಎಂಬ ದೂರು ಕೇಳಿ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT