ಬೆಂಗಳೂರು: ‘ಬೆಂಗಳೂರು ಮೆಟ್ರೊಪಾಲಿಟನ್ ನಗರಾಡಳಿತ’ದ ಕರಡು ಮಸೂದೆ ಕುರಿತು ಚರ್ಚಿಸಲು ನಗರಾಭಿವೃದ್ಧಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಸೋಮವಾರ ಕರೆದಿದ್ದ ಸಭೆಗೆ ನಗರದ ಬಹುತೇಕ ಶಾಸಕರು, ಸಂಸದರು ಗೈರುಹಾಜರಾದರು. ವಿಧಾನಸಭೆಯಲ್ಲಿ ಮಸೂದೆಯನ್ನು ಮಂಡಿಸುವ ಮೊದಲು ಅದರ ಸಾಧಕ-ಭಾದಕಗಳ ಬಗ್ಗೆ ಚರ್ಚಿಸಲು ಈ ಸಭೆಯನ್ನು ಕರೆಯಲಾಗಿತ್ತು. ಆದರೆ, ಬಹುತೇಕ ಶಾಸಕರು, ಸಂಸದರು ಗೈರುಹಾಜರಾಗಿದ್ದರಿಂದ ಸಭೆಯನ್ನು ಮುಂದೂಡಲಾಗಿದೆ’ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸಭೆಗೆ ಶಾಸಕರಾದ ಬಿ.ಎನ್. ವಿಜಯ್ ಕುಮಾರ್, ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್, ಎಲ್. ರವಿ ಸುಬ್ರಮಣ್ಯ, ಮೇಯರ್ ಎಸ್.ಕೆ. ನಟರಾಜ್ ಸೇರಿದಂತೆ ಕೆಲವೇ ಕೆಲವು ಮುಖಂಡರು ಹಾಜರಾಗಿದ್ದರು. ‘ಪಕ್ಷಾತೀತವಾಗಿ ನಗರ ವ್ಯಾಪ್ತಿಯ ಎಲ್ಲ ಶಾಸಕರಿಗೆ, ಸಂಸದರಿಗೆ ಸಭೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿತ್ತು. ಆದರೂ ಇವರು ಪಾಲ್ಗೊಂಡಿಲ್ಲ.
ಏನು ಕಾರಣ ಎನ್ನುವುದು ತಮಗೆ ತಿಳಿದಿಲ್ಲ. ಸದ್ಯದಲ್ಲಿಯೇ ಸಭೆಯನ್ನು ಮತ್ತೊಮ್ಮೆ ಕರೆಯಲಾಗುವುದು’ ಎಂದರು.