ಹೊಸನಗರ: ತಾಲ್ಲೂಕಿನ ಘಟ್ಟ ಪ್ರದೇಶ ನಗರ ಹೋಬಳಿಯಲ್ಲಿ ದಾಖಲೆಯ 437 ಮಿ.ಮೀ ಮಳೆಯಾದ ಕಾರಣ ಅಪಾರ ಹಾನಿಯಾದ ವರದಿಯಾಗಿದೆ.ನಗರ ಹೋಬಳಿಯ ಮೂಡುಗೊಪ್ಪನಗರ, ಕರಿಮನೆ, ಗ್ರಾಮದಲ್ಲಿ ಕಳೆದ 3 ದಿನಗಳಿಂದ ಸುರಿಯತ್ತಿರುವ ಮಳೆಯಿಂದಾಗಿ ಧರೆ ಕುಸಿತ, ತೋಟ, ಗದ್ದೆಗಳಿಗೆ ನೀರು ನುಗ್ಗಿದ ಪರಿಣಾಮ ಅಪಾರ ಪ್ರಮಾಣದ ಬೆಳೆ ನಷ್ಟ ಆಗಿದೆ.
ಹೊಸನಗರ-ಹಿಲುಕುಂಜಿ-ಆರಗ-ತೀರ್ಥಹಳ್ಳಿ ಲೋಕೋಪಯೋಗಿ ಇಲಾಖೆ ರಸ್ತೆಯಲ್ಲಿನ ಕಿರುಸೇತುವೆ ಕುಸಿದು ಹೋದ ಕಾರಣ ಜನ ಸಂಪರ್ಕಕ್ಕೆ ತೊಂದರೆ ಆಗಿದೆ.ಕಳೆದ 3 ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರ ಹೋಬಳಿಯಲ್ಲಿ ಅತಿವೃಷ್ಟಿಯಾಗಿದೆ. ಈ ಬಗ್ಗೆ ಸಚಿವರ ನೇತೃತ್ವದಲ್ಲಿ ನಾಳೆ ನಡೆಯಲಿರುವ ಸಭೆಯಲ್ಲಿ ಚರ್ಚಿಸುವುದಾಗಿ ಅತಿವೃಷ್ಠಿ ಹಾನಿ ಪ್ರದೇಶಕ್ಕೆ ಭಾನುವಾರ ಭೇಟಿ ನೀಡಿದ ಶಾಸಕ ಕಿಮ್ಮನೆ ರತ್ನಾಕರ್ ಸುದ್ದಿಗಾರರಿಗೆ ತಿಳಿಸಿದರು.
ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆ - 85 ಮಿ.ಮೀ. ಮಾಣಿಡ್ಯಾಂ-88 ಮಿ.ಮೀ, ಯಡೂರು-153 ಮಿ.ಮೀ, ಹುಲಿಕಲ್-71 ಮಿ.ಮೀ, ಹೊಸನಗರ-25.50 ಮಿ.ಮೀ, ಕೆರೆಹಳ್ಳಿ -11 ಮಿ.ಮೀ, ಹುಂಚಾ-72 ಮಿ.ಮೀ ಮಳೆಯಾಗಿದೆ.