ಬೀದರ್: ನಗರಸಭೆಯ ವ್ಯಾಪ್ತಿಯಲ್ಲಿ ಬರುವ ವಾರ್ಡ್ ಸಂಖ್ಯೆ 20,21 ಮತ್ತು 26 ಬಡಾವಣೆಗಳಲ್ಲಿ ಮಂಗಳವಾರ ಬೀದರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ರಮೇಶ್ಕುಮಾರ್ ಪಾಂಡೆ ತಮ್ಮ ಬೆಂಬಲಿಗರೊಂದಿಗೆ ಪಾದಯಾತ್ರೆ ನಡೆಸಿ ಪ್ರಚಾರ ನಡೆಸಿದರು.
ಐದು ವರ್ಷದಲ್ಲಿ ಬಿಜೆಪಿ ಮಾಡಿರುವ ಸಾಧನೆಗಳು ತಮ್ಮ ಗೆಲುವಿಗೆ ಶ್ರೀರಕ್ಷೆ. ಮತದಾರರು ಆಶೀರ್ವದಿಸಿದರೆ ಕ್ಷೇತ್ರವನ್ನು ಮಾದರಿಯಾಗಿ ಮಾಡಲು ಯತ್ನಿಸಲಾಗುವುದು ಎಂದು ಬೀದರ್ ನಗರ ಕ್ಷೇತ್ರದ ಅಭ್ಯರ್ಥಿ ರಮೇಶ್ಕುಮಾರ್ ಪಾಂಡೆ ತಿಳಿಸಿದರು.
`ಅಭಿವೃದ್ಧಿ ಕಡೆಗಣಿಸಿರುವ ಶಾಸಕ ರಹೀಮ್ಖಾನ್, ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಅವರಿಗೆ ಮತದಾರರು ತಕ್ಕ ಪಾಠ ಕಲಿಸಬೇಕು' ಮುಖಂಡ ರೇವಣಸಿದ್ದಪ್ಪ ಜಲಾದೆ ಹೇಳಿದರು. ಮುಖಂಡರಾದ ಬಾಬುರಾವ್ ಮದಕಟ್ಟಿ, ಬಾಬುವಾಲಿ, ನಗರ ಘಟಕ ಅಧ್ಯಕ್ಷ ರಾಜಕುಮಾರ್ ಚಿದ್ರಿ, ನಗರಸಭೆ ಸದಸ್ಯ ರಾಜಾರಾಮ, ಈಶ್ವರಸಿಂಗ್ ಠಾಕೂರ ಇದ್ದರು.