ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಮೆಟ್ರೊ ಬೆಂಗಳೂರಿಗರ ಹೆಮ್ಮೆ

Last Updated 20 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಬೆಂಗಳೂರಿನಲ್ಲಿ `ನಮ್ಮ ಮೆಟ್ರೊ~ಗೆ ಚಾಲನೆ ಸಿಕ್ಕಿರುವುದರಿಂದ ನನಗೂ ಬಹಳ ಸಂತಸವಾಗಿದೆ. `ನಮ್ಮ ಮೆಟ್ರೊ~ ಬೆಂಗಳೂರಿಗರ ಹೆಮ್ಮೆ. ವೆುಟ್ರೊ ರೈಲನ್ನು ಉದ್ಯಾನ ನಗರಿಯ ಜನತೆ ಸದ್ಬಳಕೆ ಮಾಡಿಕೊಳ್ಳುವುದರ ಜತೆಗೆ ದೆಹಲಿ ನಾಗರಿಕರ ರೀತಿ ಜವಾಬ್ದಾರಿಯಿಂದ ವೆುಟ್ರೊ ಆಸ್ತಿಯನ್ನು ಕಾಪಾಡಬೇಕು~ ಎಂದು ದೆಹಲಿ ಮೆಟ್ರೊ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಇ. ಶ್ರೀಧರನ್ ಗುರುವಾರ ಇಲ್ಲಿ ಮನವಿ ಮಾಡಿದರು.

ಎಂ.ಎಸ್. ರಾಮಯ್ಯ ತಾಂತ್ರಿಕ ಕಾಲೇಜಿನ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಅವರು, `ನಗರದಲ್ಲಿ ಮಹತ್ವಾಕಾಂಕ್ಷೆಯ ನಮ್ಮ ಮೆಟ್ರೊ ಉದ್ಘಾಟನೆಯಾಗಿರುವುದು ಸಂತಸದ ವಿಚಾರ~ ಎಂದರು.

`ನನಗೆ ಹತ್ತು ದಿನಗಳ ಮೊದಲೇ ಬೆಂಗಳೂರು ಮೆಟ್ರೊ ರೈಲು ನಿಗಮದಿಂದ ಆಹ್ವಾನ ಬಂದಿತ್ತು. ಆದರೆ, ಎರಡು ತಿಂಗಳ ಮೊದಲೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿಗೆ ಸೂಚಿಸಿದ್ದೆ. ಹೀಗಾಗಿ, ಮೆಟ್ರೊ ಸಮಾರಂಭಕ್ಕಿಂತ ನೂರಾರು ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳ ಪದವಿ ಪ್ರದಾನ ಮುಖ್ಯವೆನಿಸಿ ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದೇನೆ~ ಎಂದು ಮೆಟ್ರೊ ಉದ್ಘಾಟನಾ ಸಮಾರಂಭದಿಂದ ವಂಚಿತರಾಗಿದ್ದಕ್ಕೆ ಶ್ರೀಧರನ್ ಸ್ಪಷ್ಟನೆ ನೀಡಿದರು.

`ನಮ್ಮ ಮೆಟ್ರೊ~ ರೀಚ್-1ರಿಂದ ಬಹಳಷ್ಟು ಜನತೆಗೆ ಅನುಕೂಲವಾಗುತ್ತಿಲ್ಲವಲ್ಲಾ ಎಂಬ ಸಾರ್ವಜನಿಕ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, `ಬಹು ಮಾರ್ಗಗಳಿಗೆ ಸಂಪರ್ಕ ಕಲ್ಪಿಸುವ ರೀತಿಯಲ್ಲಿ ಮೊದಲ ಹಂತದ ಮೆಟ್ರೊ ವಿನ್ಯಾಸ ಮಾಡಲಾಗಿದೆ. ಬಹುಶಃ ಮುಂದಿನ 20 ವರ್ಷಗಳಲ್ಲಿಯೂ ನಮ್ಮ ಮೆಟ್ರೊ ಹೆಚ್ಚುವರಿ ಮಾರ್ಗಗಳನ್ನು ವಿಸ್ತರಿಸಬಹುದಾಗಿದೆ~ ಎಂದರು.

`ದೆಹಲಿ ಮೆಟ್ರೊ ರೈಲು ನಿಗಮವು ಪ್ರಸ್ತುತ 190 ಕಿ.ಮೀ.ವರೆಗೆ ಮೆಟ್ರೊ ರೈಲು ಸಂಚಾರ ಸೇವೆಯನ್ನು ಒದಗಿಸುತ್ತಿದೆ. ಸುಮಾರು 145 ನಿಲ್ದಾಣಗಳಿವೆ. ಪ್ರತಿ ದಿನ ಮೂರು ಸಾವಿರ ಟ್ರಿಪ್‌ಗಳಲ್ಲಿ 18 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದಾರೆ~ ಎಂದು ಹೇಳಿದರು.

`ಪ್ರಯಾಣಿಕರ ಒತ್ತಡ ಹೆಚ್ಚಾಗಿರುವ ಸಮಯದಲ್ಲಿ 2.3 ನಿಮಿಷಕ್ಕೊಂದು ರೈಲು ಓಡಿಸಲಾಗುತ್ತಿದೆ. ರೈಲು ಸಂಚಾರದ ಸಮಯವನ್ನು ನಾವು ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ. ನಾವು ಶೇ 99.97ರಷ್ಟು ಸರಾಸರಿ ಸಮಯ ಪಾಲನೆ ಮಾಡುತ್ತಿದ್ದೇವೆ~ ಎಂದು ಹೆಮ್ಮೆಯಿಂದ ಹೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT