ಬೆಂಗಳೂರು: ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಸೇರಿದಂತೆ ಇತರ ಕೆಲ ಮುಖಂಡರು ಮಂಗಳವಾರ ಬೆಳಿಗ್ಗೆ ನಾಗಪುರಕ್ಕೆ ತೆರಳಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಜತೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸುವರು.
ಶ್ರೀರಾಮುಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆ ಹಾಕಿದ ತಕ್ಷಣವೇ ಈ ಪ್ರವಾಸದ ದಿನಾಂಕವನ್ನು ನಿಗದಿ ಮಾಡಲಾಗಿತ್ತು. ಆದರೆ, ಉದ್ದೇಶಿತ ವಿಷಯಕ್ಕಿಂತ ಜನಾರ್ದನ ರೆಡ್ಡಿ ಅವರನ್ನು ಸಿಬಿಐ ಬಂಧಿಸಿರುವ ವಿಷಯವೇ ಈಗ ಹೆಚ್ಚು ಪ್ರಾಮುಖ್ಯ ಪಡೆದಿದ್ದು, ಆ ಕುರಿತೂ ಚರ್ಚೆ ನಡೆಸುವರು ಎನ್ನಲಾಗಿದೆ. ಈ ಮುಖಂಡರಲ್ಲದೆ, ಪಕ್ಷದ ರಾಜ್ಯದ ಉಸ್ತುವಾರಿ ಹೊತ್ತಿರುವ ಧರ್ಮೇಂದ್ರ ಪ್ರದಾನ್, ಸಂತೋಷ್, ಸತೀಶ್ ಕೂಡ ಅಲ್ಲಿಗೆ ತೆರಳಲಿದ್ದಾರೆ. ಮಧ್ಯಾಹ್ನದ ನಂತರ ಎಲ್ಲರೂ ಬೆಂಗಳೂರಿಗೆ ವಾಪಸಾಗಲಿದ್ದಾರೆ.
ಸ್ವೀಕಾರ ಇಲ್ಲ: ಶ್ರೀರಾಮುಲು ರಾಜೀನಾಮೆ ಪತ್ರ ಇನ್ನೂ ಅಂಗೀಕಾರ ಆಗಿಲ್ಲ ಎಂದು ವಿಧಾನಸಭಾಧ್ಯಕ್ಷರ ಸಚಿವಾಲಯ ಸ್ಪಷ್ಟಪಡಿಸಿದೆ. ಮೂಲಗಳ ಪ್ರಕಾರ ಅವರ ರಾಜೀನಾಮೆ ಸ್ವೀಕರಿಸುವುದು ಅನುಮಾನ.