ಬೆಂಗಳೂರು (ಪಿಟಿಐ): ~ಪಕ್ಷದ ವರಿಷ್ಠರು ನಾಯಕತ್ವ ವಿಚಾರವನ್ನು ಬಗೆಹರಿಸಿದ್ದು, ಎಲ್ಲರೂ ಈ ನಿರ್ಧಾರಕ್ಕೆ ಬದ್ಧರಾಗಿರುತ್ತಾರೆ~ ಎಂಬುದು ತಮ್ಮ ನಂಬಿಕೆ ಎಂಬುದಾಗಿ ಹೇಳುವ ಮೂಲಕ ಪಕ್ಷದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರು ಶುಕ್ರವಾರ ಇಲ್ಲಿ ರಾಜ್ಯ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ಬದಲಾವಣೆ ಖಚಿತ ಎಂಬ ಸುಳಿವು ನೀಡಿದರು.
~ಪಕ್ಷದ ವರಿಷ್ಠರು ನಾಯಕತ್ವ ವಿಚಾರವನ್ನು ಬಗೆಹರಿಸಿದ್ದಾರೆ ಮತ್ತು ಎಲ್ಲ ರಾಜ್ಯ ನಾಯಕರೂ ಅವರು ಕೈಗೊಳ್ಳುವ ಯಾವುದೇ ನಿರ್ಧಾರಕ್ಕೆ ಬದ್ಧರಾಗಿರುತ್ತಾರೆ ಎಂದು ನಾನು ನಂಬುತ್ತೇನೆ~ ಎಂದು ಇಲ್ಲಿಗೆ 91 ಕಿಮೀ ದೂರದ ಮಂಡ್ಯ ಸಮೀಪ ದೇವಾಲಯವೊಂದಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡುತ್ತಾ ಅವರು ನುಡಿದರು.
ಪಕ್ಷದ ವರಿಷ್ಠರ ನಿರ್ಧಾರ ವಾರದೊಳಗೆ ತಲುಪುವ ನಿರೀಕ್ಷೆ ಇದೆ ಎಂದು ಈಶ್ವರಪ್ಪ ಪುನರುಚ್ಚರಿಸಿದರು.
ಮುಂಬರುವ ದಿನಗಳಲ್ಲಿ ಪಕ್ಷವು ಜನತೆಗೆ ಉತ್ತಮ ಆಡಳಿತ ನೀಡುವುದನ್ನು ಮುಂದುವರೆಸಲಿದೆ. ಸದಾನಂದ ಗೌಡ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನೀಡಿದ್ದಂತೆಯೇ ಪಕ್ಷವು ಉತ್ತಮ ಆಡಳಿತವನ್ನು ನೀಡುವುದು ಎಂದು ಅವರು ನುಡಿದರು.
ಬಿಕ್ಕಟ್ಟಿನ ಹೊರತಾಗಿಯೂ ರಾಜ್ಯದ ಜನ ಬಿಜೆಪಿ ಮೇಲೆ ವಿಶ್ವಾಸವನ್ನು ವ್ಯಕ್ತ ಪಡಿಸಿದ್ದಾರೆ. ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಗಳಲ್ಲಿ 6 ಸ್ಥಾನಗಳ ಪೈಕಿ ಐದು ಸ್ಥಾನಗಳನ್ನು ಪಕ್ಷವು ಗೆದ್ದಿರುವುದು ಜನರ ವಿಶ್ವಾಸವನ್ನು ಪ್ರತಿಫಲಿಸಿದೆ ಎಂದು ಈಶ್ವರಪ್ಪ ಹೇಳಿದರು.